ಬೆಂಗಳೂರು: ಇಸ್ರೋ ಮತ್ತು ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಚಂದ್ರನ ಮೇಲೆ ಬಳಕೆ ಮಾಡಬಲ್ಲ ವಿಶೇಷ ಇಟ್ಟಿಗೆ ತಯಾರಿಸಿ ಮಹತ್ವದ ಸಾಧನೆ ಮಾಡಿದೆ.
ಹೌದು.. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಜಂಟಿ ಸಂಶೋಧನೆ ಮಾಡಿ ಚಂದ್ರನ ಮೇಲೆ ಬಳಕೆ ಮಾಡಬಲ್ಲ ವಿಶೇಷ ರೀತಿಯ ಇಟ್ಟಿಗೆ ತಯಾರಿಸಿದ್ದಾರೆ. ಚಂದ್ರನಲ್ಲಿ ಸಿಗುವ ಮಣ್ಣು, ಯೂರಿಯಾ ಬಳಸಿ ಭಾರ ತಡೆಯುವಂತಹ ಇಟ್ಟಿಗೆಯಂತಹ ರಚನೆ ಹೇಗೆ ಮಾಡಬಹುದು ಎಂಬುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಈ ಮೂಲಕ ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ವಸತಿ ಕೈಗೊಳ್ಳುವ ಸ್ಥಿತಿ ಬಂದರೆ ಈ ಬಾಹ್ಯಾಕಾಶ ಇಟ್ಟಿಗೆಗಳನ್ನು ಬಳಸಿಕೊಂಡು, ಕಟ್ಟಡಗಳನ್ನು ವಿನ್ಯಾಸಗೊಳಿಸಬಹುದಾಗಿದೆ. ಭೂಮಿಯಿಂದ ಬಾಹ್ಯಾಕಾಶಕ್ಕೆ ಅರ್ಧ ಕೆ.ಜಿ. ವಸ್ತು ಒಯ್ಯಲು 7.5 ಲಕ್ಷ ರು. ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಂದ್ರನಲ್ಲಿಯೇ ಇಟ್ಟಿಗೆಯಂತಹ ವಸ್ತು ತಯಾರಿಸುವ ಸಂಶೋಧನೆಯಿಂದ ಆ ಖರ್ಚು ಉಳಿಯುವ ಸಾಧ್ಯತೆ ಇರುತ್ತದೆ. ಈ ಪ್ರಕ್ರಿಯೆಯ ಪ್ರಕಾರ, ಮಾನವರ ಮೂತ್ರದಿಂದ ಸಿಗುವ ಯೂರಿಯಾ, ಚಂದ್ರನ ಮಣ್ಣು ಬಳಸಿ ಇಟ್ಟಿಗೆ ತಯಾರಿಸಬಹುದಾಗಿದೆ. ಸಿಮೆಂಟ್ ಬದಲಿಗೆ ಗೋರಿಕಾಯಿಯನ್ನು ಅಂಟಿನ ರೂಪದಲ್ಲಿ ಬಳಸಬಹುದಾಗಿದೆ ಎಂದು ಐಐಎಸ್ಸಿ ತಜ್ಞರು ಹೇಳಿದ್ದಾರೆ.
ಅಂತೆಯೇ ಈ ವಿಶೇಷ ಇಟ್ಟಿಗೆಗೆ ಬಳಕೆ ಮಾಡಿರುವ ಬ್ಯಾಕ್ಟೀರಿಯಾದಿಂದಾಗಿ ಇಟ್ಟಿಗೆಯನ್ನು ಕ್ರಿಸ್ಟಲೈಸ್ ಮಾಡಲಾಗಿದೆ. ಅಲ್ಲದೆ ಇಟ್ಟಿಗೆಯನ್ನು ಯಾವುದೇ ವಿನ್ಯಾಸಕ್ಕೂ ಕತ್ತರಿಸಬಹುದಾಗಿದೆ ಎಂದು ಹೇಳಿದ್ದಾರೆ.
Advertisement