ಅಂತರಿಕ್ಷಕ್ಕೆ ಮೋದಿ ಫೋಟೊ... ಈ ತಿಂಗಳ 28ರಂದು ಖಾಸಗಿ ಉಪಗ್ರಹ ಮೂಲಕ ಕಳುಹಿಸಲಿರುವ ಇಸ್ರೋ!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತನ್ನ ಮೊದಲ ಉಡಾವಣೆಗೆ ಸಿದ್ಧತೆ ನಡೆಸಿದೆ. ಅಲ್ಲದೆ, ಇಸ್ರೋ ತನ್ನ 50 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶೀಯ ಖಾಸಗಿ ಸಂಸ್ಥೆಗಳ ಉಪಗ್ರಹಗಳನ್ನು ನಭಕ್ಕೆ ರವಾನಿಸಲಿದೆ.
Published: 15th February 2021 03:13 PM | Last Updated: 15th February 2021 03:15 PM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತನ್ನ ಮೊದಲ ಉಡಾವಣೆಗೆ ಸಿದ್ಧತೆ ನಡೆಸಿದೆ. ಅಲ್ಲದೆ, ಇಸ್ರೋ ತನ್ನ 50 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶೀಯ ಖಾಸಗಿ ಸಂಸ್ಥೆಗಳ ಉಪಗ್ರಹಗಳನ್ನು ನಭಕ್ಕೆ ರವಾನಿಸಲಿದೆ. ಇದರಲ್ಲಿ ಒಂದು ಉಪಗ್ರಹ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರನ್ನು ಅಂತರಿಕ್ಷಕ್ಕೆ ಕಳುಹಿಸಲಿದೆ.
ಫೆಬ್ರವರಿ 28 ರಂದು ಪಿ ಎಸ್ ಎಲ್ ವಿ ಸಿ -51 ಮೂಲಕ ಬ್ರೆಜಿಲ್ ಗೆ ಸೇರಿದ ಅಮೆಜೋನಿಯಾ-1, ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ 'ಆನಂದ್', 'ಸತೀಶ್ ಧಾವನ್' ಹಾಗೂ 'ಯೂನಿಟಿಶಾಟ್' ಉಪಗ್ರಹಗಳನ್ನು ಇಸ್ರೋ ಅಂತರಿಕ್ಷಕ್ಕೆ ಕಳುಹಿಸಲಿದೆ. ಭಾರತೀಯ ಉಪಗ್ರಹಗಳಲ್ಲಿ, 'ಆನಂದ್' ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ 'ಪಿಕ್ಸೆಲ್' ಅಭಿವೃದ್ದಿಪಡಿಸಿದೆ. 'ಸತೀಶ್ ಧವನ್' ಅನ್ನು ಚೆನ್ನೈ ಮೂಲದ 'ಸ್ಪೇಸ್ ಕಿಡ್ಜ್ ಇಂಡಿಯಾ' 'ಯೂನಿಟಿಶಾಟ್' ಅನ್ನು ಜಿಟ್ ಶಾಟ್ (ಶ್ರೀಪೆರುಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಂಬತ್ತೂರು) ಇಂಜನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವುದು ವಿಶೇಷ
ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನ ಸ್ಪೇಸ್ಕಿಡ್ಜ್ ಇಂಡಿಯಾ 'ಸತೀಶ್ ಧಾವನ್ (ಎಸ್ಡಿ ಶಾಟ್)' ಉಪಗ್ರಹವನ್ನು ರೂಪಿಸಿದೆ. ತಮ್ಮ ಸಂಸ್ಥೆಯಿಂದ ನಭಕ್ಕೆ ಕಳುಹಿಸುತ್ತಿರುವ ಮೊದಲ ಉಪಗ್ರಹವಾಗಿರುವ ಕಾರಣ ಈ ಪ್ರಯೋಗಕ್ಕೆ ಇನ್ನಷ್ಟು ವಿಶೇಷ ತರಲು ಸ್ಪೇಸ್ ಕಿಡ್ಜ್ ಇಂಡಿಯಾ ಆಶಿಸಿದೆ.ಈ ಕ್ರಮವಾಗಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ. ಶ್ರೀಮತಿ ಕೇಸನ್ ಹೇಳಿದ್ದಾರೆ. ಮೋದಿಯವರ ಹೆಸರು, ಫೋಟೋ .. ಅದರ ಅಡಿಯಲ್ಲಿ 'ಆತ್ಮನಿರ್ಭರ್ ಮಿಷನ್' ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಪ್ರತಿ, 25000 ಮಂದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ವಿವರಿಸಿದ್ದಾರೆ.
"ಬಾಹ್ಯಾಕಾಶ ವಿಜ್ಞಾನ, ನಮ್ಮ ಉಡಾವಣೆಗಳ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚು ಆಸಕ್ತಿ ಕೆರಳಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಕೋರಿದ್ದೆವು. ಒಂದು ವಾರದಲ್ಲಿ 25,000 ಹೆಸರುಗಳು ನೋಂದಣಿಯಾದವು ಈ ಪೈಕಿ 1000 ವಿದೇಶಿಯರು. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ”ಎಂದು ಡಾ. ಶ್ರೀಮತಿ ತಿಳಿಸಿದರು.
ಪಿಎಸ್ಎಲ್ವಿ ಸಿ -51 ವಾಹಕವನ್ನು ಫೆಬ್ರವರಿ 28 ರಂದು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುವುದು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.