ಮುಂಬೈ: ಒಬ್ಬ ವ್ಯಕ್ತಿಗೆ ಅಗತ್ಯವಿದ್ದಾಗ ನೀಡಿದ ಸಾಲವನ್ನು ಹಿಂತಿರುಗಿಸುವ ಮಂದಿ ಬಲು ಅಪರೂಪ. ಆದರೆ ಇಲ್ಲೊಬ್ಬರು 30 ವರ್ಷಗಳ ಹಿಂದೆ ಕೊಟ್ಟ 200 ರೂಪಾಯಿ ಸಾಲವನ್ನು ಹಿಂತಿರುಗಿಸಲು ಕೀನ್ಯಾದಿಂದ ವ್ಯಕ್ತಿ ಔರಂಗಾಬಾದ್ ನ ತನ್ನ ಮನೆಗೆ ಬಂದಾಗ ಕಾಶಿನಾಥ್ ಗಾವ್ಲಿ ಎಂಬ ಈ ಹಿರಿಯಜ್ಜನಿಗೆ ನಿಜಕ್ಕೂ ಅಚ್ಚರಿಯಾಯಿತು. ಅದು ಕೂಡ ಬಂದ ವ್ಯಕ್ತಿ ಕೇನ್ಯಾ ಸಂಸದನಾಗಿದ್ದ.
ಕೀನ್ಯಾದ ನ್ಯಾರಿಬರಿ ಚಚೆ ಪ್ರಾಂತ್ಯದಲ್ಲಿ ಸಂಸದರಾಗಿರುವ ರಿಚರ್ಡ್ ಟೊಂಗಿ ಎಂಬ ವ್ಯಕ್ತಿ ತನಗೆ ಕಷ್ಟಕಾಲದಲ್ಲಿ 200 ರೂಪಾಯಿ ನೀಡಿ ಸಹಾಯ ಮಾಡಿದ ವ್ಯಕ್ತಿಯನ್ನು ಮರೆತಿಲ್ಲ.
1985-89ನೇ ಇಸವಿಯವರೆಗೆ ಔರಂಗಾಬಾದ್ ನ ಕಾಲೇಜಿನಲ್ಲಿ ರಿಚರ್ಡ್ ಮ್ಯಾನೇಜ್ ಮೆಂಟ್ ಶಿಕ್ಷಣ ಓದುತ್ತಿದ್ದರು. ಶಿಕ್ಷಣ ಮುಗಿಸಿ ತನ್ನೂರಿಗೆ ಹೋಗುವಾಗ ರಿಚರ್ಡ್ ಗಾವ್ಲಿ ಅವರ ರೇಷನ್ ಅಂಗಡಿಯಲ್ಲಿ 200 ರೂಪಾಯಿ ಸಾಲ ಉಳಿಸಿಕೊಂಡು ಹೋಗಿದ್ದರು. ಕೆಲ ದಿನಗಳು ಕಳೆದ ನಂತರ ಗಾವ್ಲಿ ಅದನ್ನು ಮರೆತುಬಿಟ್ಟಿದ್ದರು.
ಆದರೆ ರಿಚರ್ಡ್ ಮಾತ್ರ ಮರೆತಿರಲಿಲ್ಲ. 30 ವರ್ಷಗಳ ಬಳಿಕ ತಾನು ಗಾವ್ಲಿಯವರ ಅಂಗಡಿಯಲ್ಲಿ ಸಾಲ ಉಳಿಸಿಕೊಂಡಿದ್ದ 200 ರೂಪಾಯಿ ವಾಪಸ್ಸು ಕೊಡಲು ಬಂದಿದ್ದರು. ಅದು ಅಲ್ಲಿನ ಸಂಸದನಾಗಿ.
ಮೊನ್ನೆ ಸೋಮವಾರ ಔರಂಗಾಬಾದ್ ನ ವಾಂಖೇಡನಗರಕ್ಕೆ ಪತ್ನಿ ಮೈಕೆಲ್ ಜೊತೆ ಆಗಮಿಸಿದ ರಿಚರ್ಡ್ ಗೆ ಸಂತೋಷದಿಂದ ಆನಂದಭಾಷ್ಪ ಸುರಿಯಿತು.
ಔರಂಗಾಬಾದ್ ನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನಾನು ಬಹಳ ಕಷ್ಟದಲ್ಲಿದ್ದೆ. ಆಗ ಗಾವ್ಲಿಯಂತವರು ಬಂದು ಸಹಾಯ ಮಾಡಿದರು. ಅವರ ಅಂಗಡಿಯಲ್ಲಿ ತೆಗೆದುಕೊಂಡ ಸಾಮಾನಿಗೆ ದುಡ್ಡು ಕೊಡದೆ ಬಾಕಿ ಉಳಿಸಿಕೊಂಡು ಹೋಗಿದ್ದೆ. ಆದರೆ ಒಂದಲ್ಲ ಒಂದು ದಿನ ಮತ್ತೆ ಬಂದು ಕೊಟ್ಟು ಧನ್ಯವಾದ ಹೇಳುತ್ತೇನೆ ಎಂಬ ವಿಶ್ವಾಸವಿತ್ತು. ಇದೊಂದು ಭಾವನಾತ್ಮಕ ಕ್ಷಣ ನನಗೆ ಎಂದರು.
ಗಾವ್ಲಿ ಮತ್ತು ಅವರ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ, ಅವರು ನಿಜಕ್ಕೂ ಉತ್ತಮ ವ್ಯಕ್ತಿಗಳು. ಅವರು ನನ್ನನ್ನು ಹೊಟೇಲ್ ಗೆ ಕರೆದುಕೊಂಡು ಹೋಗಬೇಕೆಂದು ಅಂದುಕೊಂಡಿದ್ದರು. ಆದರೆ ನಾನು ಅವರ ಮನೆಯಲ್ಲಿಯೇ ಊಟ ಮಾಡಬೇಕು ಎಂದು ಹೇಳಿದೆ ಎಂದರು.
ತಮ್ಮ ದೇಶಕ್ಕೆ ಮರಳುವಾಗ ರಿಚರ್ಡ್ ದಂಪತಿ ಗಾವ್ಲಿ ಕುಟುಂಬದವರನ್ನು ನಮ್ಮ ದೇಶಕ್ಕೆ ಬನ್ನಿ ಎಂದು ಆಹ್ವಾನಿಸುವುದನ್ನು ಮರೆಯಲಿಲ್ಲ.