ಸಲೂನ್ ನಲ್ಲಿ ಗ್ರಂಥಾಲಯ: ತಮಿಳು ನಾಡಿನ ತೂತುಕುಡಿಯ ಕ್ಷೌರಿಕನಿಗೆ ಪ್ರಧಾನಿ ಮೋದಿ ಶ್ಲಾಘನೆ
ತೂತುಕುಡಿ: ಸಲೂನ್ ಅಥವಾ ಕ್ಷೌರದಂಗಡಿಗೆ ಪುರುಷರು ಹೋದಾಗ ಕಾಣಸಿಗುವುದೇನು, ಬಾಚಣಿಗೆ, ಶೇವಿಂಗ್ ಕ್ರೀಮ್, ಕತ್ತರಿ ಇತ್ಯಾದಿ, ಸಲೂನ್ ನಲ್ಲಿ ಇವೆಲ್ಲವುಗಳ ಜೊತೆಗೆ ಸುಮಾರು 1500 ಪುಸ್ತಕಗಳನ್ನು ಹೊಂದಿರುವ ಲೈಬ್ರೆರಿಯಿದೆ ಎಂದರೆ ನಂಬುತ್ತೀರಾ!.
ಹೌದು ತಮಿಳು ನಾಡಿನ ತೂತುಕುಡಿಯ ಮಿಲ್ಲರ್ ಪುರಂ ಎಂಬಲ್ಲಿ 39ರ ಹರೆಯದ ಪಿ ಪೊನ್ ಮರಿಯಪ್ಪನ್ ಅವರ ಸಲೂನ್ ಇದೆ, ಅವರ ಸಲೂನ್ ನಲ್ಲಿ ಲೈಬ್ರೆರಿಯಿದೆ, ಅಲ್ಲಿ ಹೋಗಿ ಪುಸ್ತಕ ಓದಿ ಸಲೂನ್ ಮಾಡಿಸಿಕೊಂಡರೆ ಗ್ರಾಹಕರಿಗೆ ಡಿಸ್ಕೌಂಟ್ ಕೂಡ ಇದೆ.
ಇವರು 2015ರಲ್ಲಿ ಗ್ರಂಥಾಲಯವನ್ನು ಆರಂಭಿಸಿದರು, ಸಾಹಿತ್ಯ, ಓದಿನಲ್ಲಿ ಆಸಕ್ತಿ ಇರುವ ಮರಿಯಪ್ಪನ್ ತನ್ನ ಸಲೂನ್ ಗೆ ಬರುವ ಗ್ರಾಹಕರು ಕಾಯುತ್ತಿರುವ ವೇಳೆ ಸಮಯ ಸದುಪಯೋಗ ಮಾಡಿಕೊಂಡು ಪುಸ್ತಕ ಓದಲಿ ಎಂಬ ನಿಲುವು ಅವರದ್ದು.
ಮನ್ ಕಿ ಬಾತ್ ನಲ್ಲಿ ಪ್ರಸ್ತಾಪ: ದೂರದರ್ಶನ ವಾಹಿನಿಯ ಸಿಬ್ಬಂದಿ ಅವರನ್ನು ಈ ಬಗ್ಗೆ ಮಾತನಾಡಲು ಸ್ಟುಡಿಯೊಗೆ ಕರೆದಿದ್ದರು. ಆಗ ಸ್ವತಃ ಮರಿಯಪ್ಪನ್ ಗೆ ಇದು ಇಷ್ಟು ದೊಡ್ಡ ಸುದ್ದಿಯಾಗುತ್ತದೆ ಎಂದು ಗೊತ್ತಿರಲಿಲ್ಲ. ದೂರದರ್ಶನ ಸಿಬ್ಬಂದಿ ಮರಿಯಪ್ಪನ್ ನ್ನು ಮಾತನಾಡಿಸಿ ರೆಕಾರ್ಡ್ ಮಾಡಿಕೊಂಡಿದ್ದರು.
ಕಳೆದ ಭಾನುವಾರ ತಮ್ಮ ಮನದಾಳದ ಮಾತು ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮರಿಯಪ್ಪನ್ ಅವರ ಕೆಲಸವನ್ನು ಮೆಚ್ಚಿ ಮಾತುಗಳನ್ನಾಡಿದ್ದರು, ಅದು ಮನ್ ಕಿ ಬಾತ್ ನಂತರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು.
ತಮ್ಮ ಕೆಲವನ್ನು ಗುರುತಿಸಿ ಮೆಚ್ಚಿ ಪ್ರಧಾನಿ ಆಡಿದ ಮೆಚ್ಚುಗೆಯ ಮಾತುಗಳಿಂದ ಮರಿಯಪ್ಪನ್ ತುಂಬಾ ಸಂತೋಷಗೊಂಡಿದ್ದಾರೆ. ನನಗೆ ಪ್ರಧಾನಿಯವರ ಮೆಚ್ಚುಗೆ ನುಡಿ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ಸಿಕ್ಕಿದಂತಾಗಿದೆ ಎಂದರು.
ಲೈಬ್ರೆರಿ ಸ್ಥಾಪಿಸಲು ನಿಮಗೆ ಪ್ರೇರಣೆ ಏನು ಎಂದು ಪ್ರಧಾನಿಯವರು ಕೇಳಿದ್ದಾಗ ಮರಿಯಪ್ಪನ್, ಬಡತನದಿಂದಾಗಿ ತಮಗೆ ಶಾಲೆಗೆ ಹೋಗಲು ಸಾಧ್ಯವಾಗದೆ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ನನಗೆ ಉತ್ತಮ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ ಎಂಬ ವಿಷಾದವಿದೆ. ಹೀಗಾಗಿ ಸಲೂನ್ ನಲ್ಲಿ ಗ್ರಂಥಾಲಯ ಸ್ಥಾಪಿಸಿ ಓದಿನ ರುಚಿಯನ್ನು ನಾನು ಹಚ್ಚಿಕೊಳ್ಳುವುದರ ಜೊತೆಗೆ ಬೇರೆಯವರಿಗೂ ಓದಲು ಪ್ರೇರೇಪಿಸುತ್ತೇನೆ. ನನಗೆ ತಿರುಕ್ಕುರಲ್ ಪುಸ್ತಕವೆಂದರೆ ಬಹಳ ಇಷ್ಟ ಎಂದರು.