ಗದಗ: ಕೋವಿಡ್ ಲಾಕ್ ಡೌನ್ ನಿಂದ ಉದ್ಯೋಗ ನಷ್ಟ; 110 ನಿರುದ್ಯೋಗಿ ಗ್ರಾಮಸ್ಥರಿಗೆ ಉದ್ಯೋಗ ನೀಡಿದ ಉದ್ಯಮಿ!

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಕಳೆದುಕೊಂಡ ಅನೇಕರು ನಿರುದ್ಯೋಗಿಗಳಾಗಿ ಮುಂದೇನು ಎಂಬ ಪ್ರಶ್ನೆ ಎದುರಿಸುತ್ತಿದ್ದಾರೆ.
ಮಹದೇವ್ ಬದಾಮಿ
ಮಹದೇವ್ ಬದಾಮಿ

ಗದಗ: ಕೋವಿಡ್-19 ನಿಂದ ಉಂಟಾಗಿರುವ ಅವಾಂತರ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಪ್ರಭಾವ ತೋರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಕಳೆದುಕೊಂಡ ಅನೇಕರು ನಿರುದ್ಯೋಗಿಗಳಾಗಿ ಮುಂದೇನು ಎಂಬ ಪ್ರಶ್ನೆ ಎದುರಿಸುತ್ತಿದ್ದಾರೆ. ಆದರೆ ಗದಗದ ಶಿಗ್ಲಿ ಗ್ರಾಮದ ಮಹದೇವ್ ಬದಾಮಿ ಎಂಬ ಉದ್ಯಮಿ 110 ನಿರುದ್ಯೋಗಿ ಗ್ರಾಮಸ್ಥರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವುದಕ್ಕೆ ಸಹಕರಿಸಿ ತಾವೂ ಅಭಿವೃದ್ಧಿ ಹೊಂದಿದ್ದಾರೆ. 

ವಸ್ತ್ರ ವಿನ್ಯಾಸಕಾರ ಹಾಗೂ ಟೈಲರ್ ಆಗಿರುವ ಮಹಾದೇವ ಬದಾಮಿ ಅನುಪಮಾ ಡ್ರೆಸೆಸ್ ನ ಮಾಲಿಕರಾಗಿದ್ದಾರೆ. ಗದಗ, ಶಿಗ್ಲಿ ಆಸುಪಾಸಿನಲ್ಲಿ ಸಾಂಪ್ರದಾಯಿಕ ಸ್ಕರ್ಟ್ ಹೊಲಿಗೆ, ವೇಲ್ ತಯಾರಿಸುವಿಕೆ, ಮಕ್ಕಳ ಬಟ್ಟೆ ಹೊಲಿಯುವುದಕ್ಕೆ ಮಹದೇವ ಬದಾಮಿ ಹೆಸರುವಾಸಿಯಾಗಿರುವ ಟೈಲರ್. ತಮಗೆ ಹೆಚ್ಚು ಬೇಡಿಕೆ ಇದ್ದ ಕಾರಣಾದಿಂದಾಗಿ ಹೊಲಿಗೆ ಕೆಲಸಕ್ಕೆ ಹಲವಾರು ಕೌಶಲ್ಯಯುಕ್ತ ಹೊಲಿಗೆ ಕಾರ್ಮಿಕರನ್ನು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದರು. 

ಆದರೆ ಲಾಕ್ ಡೌನ್ ನಿಂದಾಗಿ ಹೊರಗುತ್ತಿಗೆ ಆಧಾರದಲ್ಲಿ ಅನುಪಮಾ ಡ್ರೆಸೆಸ್ ಗೆ ಪೂರೈಕೆ ಮಾಡುತ್ತಿದ್ದ ಟೈಲರ್ ಗಳಿಗೆ ಸಾರಿಗೆ ವ್ಯವಸ್ಥೆ ಸವಲಾಗಿ ಪರಿಣಮಿಸಿ ಪೂರೈಕೆ ಸ್ಥಗಿತಗೊಂಡಿತು. ಇದನ್ನೇ ಸಕಾರಾತ್ಮಕವಾಗಿ ಬಳಸಿಕೊಂಡ ಮಹದೇವ ಬದಾಮಿ, ತಮ್ಮದೇ ಗ್ರಾಮದಲ್ಲಿ ಪ್ರಾರಂಭಿಕ ಹಂತದಲ್ಲಿ ಒಂದಷ್ಟು ಜನ ಗ್ರಾಮಸ್ಥರಿಗೆ ತರಬೇತಿ ನೀಡಿ ಹೊಲಿಗೆ ಕೆಲಸಕ್ಕೆ ನಿಯೋಜನೆ ಮಾಡಿದರು. 

ಈಗ ಶಿಗ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಹದೇವ ಬದಾಮಿ ಅವರು ತರಬೇತಿ ನೀಡಿದ 110 ಗ್ರಾಮೀಣ ಭಾಗದ ಜನರು ಟೈಲರಿಂಗ್ ಕೆಲಸದಲ್ಲಿ ನಿರತರಾಗಿದ್ದು ತಿಂಗಳಿಗೆ 6,000-8000 ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ನನ್ನೊಂದಿಗೆ ಈಗ ಹಲವಾರು ಜನರು ಕೆಲಸ ಮಾಡುತ್ತಿದ್ದಾರೆ ಎಂಬುದು ಸಂತಸದ ವಿಷಯ, ಲಾಕ್ ಡೌನ್ ನಿಂದ ಉಂಟಾದ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಅಗತ್ಯವಿದ್ದವರಿಗೆ ತರಬೇತಿ ನೀಡಿ ಉದ್ಯೋಗ ನೀಡಲು ನಿರ್ಧರಿಸಿದೆ. ಈಗ ನನ್ನೊಂದಿಗೆ ನನ್ನದೇ ಗ್ರಾಮದಲ್ಲಿ 110 ಟೈಲರ್ ಗಳಿದ್ದಾರೆ. ನನಗೆ ಉದ್ಯಮಿಯಾಗಲು ಸಹಕಾರ ನೀಡಿದ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಹಾಗೂ ಶಿವಕುಮಾರ್ ಅವರಿಗೆ ನಾನು ಕೃತಜ್ಞ ಎನ್ನುತ್ತಾರೆ ಮಹದೇವ ಬದಾಮಿ. 

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನನಗೆ ಲಾಕ್ ಡೌನ್ ಕಾರಣದಿಂದಾಗಿ ಒಂದು ತಿಂಗಳಿಗೂ ಹೆಚ್ಚಿನ ಸಮಯ ಉದ್ಯೋಗವಿರಲಿಲ್ಲ. ಇಂತಹ ಸಂದರ್ಭದಲ್ಲಿ ಮಹದೇವ್ ಅವರು ನನಗೆ ಟೈಲರಿಂಗ್ ನಲ್ಲಿ ಆಸಕ್ತಿಯಿದೆಯೇ ಎಂದು ಕೇಳಿದರು, ನಾನೂ ಒಪ್ಪಿದೆ, ಈಗ ಗ್ರಾಮೀಣ ಭಾಗದಲ್ಲೇ ಇದ್ದುಕೊಂಡು ತಿಂಗಳಿಗೆ 6,000-8,000 ರೂಪಾಯಿ ದುಡಿಯುತ್ತಿದ್ದೇನೆ, ಗ್ರಾಮೀಣ ಭಾಗದಲ್ಲಿ ಜೀವನ ನಿರ್ವಹಣೆಯ ವೆಚ್ಚ ಕಡಿಮೆ ಇರುವುದರಿಂದ ಇದು ಅತ್ಯಂತ ಉತ್ತಮವಾದ ಸಂಪಾದನೆಯಾಗಿದೆ ಎನ್ನುತ್ತಾರೆ ಶಿಗ್ಲಿಯ ಸುನೇತ್ರ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com