ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲ: ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ಕಟ್ಟಿ, ಉದ್ಘಾಟನೆ ಮಾಡಿದ ಸ್ವಾಭಿಮಾನಿ ಕನ್ನಡಿಗ ಸೈಯದ್ ಇಸಾಕ್!
ಬೆಂಕಿ ಬಿದ್ದು ಭಸ್ಮವಾಗಿದ್ದ ಗ್ರಂಥಾಲಯವನ್ನು ಪುನರ್ ನಿರ್ಮಿಸುವ ಭರವಸೆಯನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದರಿಂದ ನೊಂದು ಛಲ ಬಿಡದ ಸೈಯದ್ ಇಸಾಕ್ ಅವರು ಗ್ರಂಥಾಲಯವನ್ನು ಪುನರ್ ನಿರ್ಮಾಣ ಮಾಡಿ ಕೊನೆಗೂ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
Published: 27th January 2022 11:28 AM | Last Updated: 28th January 2022 05:16 PM | A+A A-

ಮರುನಿರ್ಮಾಣಗೊಂಡಿರುವ ಗ್ರಂಥಾಲಯ
ಮೈಸೂರು: ಬೆಂಕಿ ಬಿದ್ದು ಭಸ್ಮವಾಗಿದ್ದ ಗ್ರಂಥಾಲಯವನ್ನು ಪುನರ್ ನಿರ್ಮಿಸುವ ಭರವಸೆಯನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದರಿಂದ ನೊಂದು ಛಲ ಬಿಡದ ಸೈಯದ್ ಇಸಾಕ್ ಅವರು ಗ್ರಂಥಾಲಯವನ್ನು ಪುನರ್ ನಿರ್ಮಾಣ ಮಾಡಿ ಕೊನೆಗೂ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
ಶಿಕ್ಷಣದಿಂದ ವಂಚಿತರಾಗಿದ್ದ ಸೈಯದ್ ಇಸಾಕ್ ಅವರು, ಇತರರಿಗೆ ತಮ್ಮ ಪರಿಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಗ್ರಂಥಾಲಯವನ್ನು ಆರಂಭಿಸಿದ್ದರು. ಮನೆ ಸಮೀಪದ ಉದ್ಯಾನವನದ ಮೂಲೆಯಲ್ಲಿ 20x20 ಚದರ ಅಡಿ ಜಾಗದಲ್ಲಿ ಸ್ವಂತ ಹಣ ಖರ್ಚು ಮಾಡಿ ಗ್ರಂಥಾಲಯ ನಿರ್ಮಿಸಿದ್ದರು. ಗ್ರಂಥಾಲಯದಲ್ಲಿ 3,000-ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳು ಮತ್ತು ಭಗವದ್ಗೀತೆಗಳು ಸೇರಿದಂತೆ 11,000 ಕ್ಕೂ ಹೆಚ್ಚು ಪುಸ್ತಕಗಳನ್ನು ಕಷ್ಟಪಟ್ಟು ಸಂಗ್ರಹಿಸಿದ್ದರು. ಆದರೆ, ಏಪ್ರಿಲ್ 9 ರಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸಿಗರೇಟ್ ತುಂಡುಗಳನ್ನು ಸತತವಾಗಿ ಎಸೆದಿದ್ದರಿಂದ ಅವರ ಕನಸಿನ ಈ ಗ್ರಂಥಾಲಯ ಸುಟ್ಟು ಭಸ್ಮವಾಗಿತ್ತು.
ಇದನ್ನೂ ಓದಿ: ಸರ್ಕಾರ ಕಟ್ಟಿಕೊಡುತ್ತದೆ ಎಂದು ಕಾದಿದ್ದೇ ಬಂತು: ಸುಸ್ತಾಗಿ ತಾವೇ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾದ ಮೈಸೂರಿನ ಸೈಯದ್ ಇಸಾಕ್
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯನ್ನು ಪ್ರಕಟಿಸಿತ್ತು. ನಂತರ ಟೆಕ್ಕಿ ಫತಾಹೀನ್ ಮಿಸ್ಬಾ ಆನ್ಲೈನ್ ಮೂಲಕ ನಿಧಿಸಂಗ್ರಹಿಸಲು ಆರಂಭಿಸಿದ್ದರು. ಇದಕ್ಕೆ ಎಲ್ಲೆಡೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಕೇವಲ ಮೂರ್ನಾಲ್ಕು ದಿನಗಳಲ್ಲಿ ಸುಮಾರು 29 ಲಕ್ಷ ರೂಪಾಯಿಗಳನ್ನು ಸಂಗ್ರಹಿವಾಗಿತ್ತು. ಆದರೆ, ರಾಜ್ಯ ಸರ್ಕಾರವು ಎಲ್ಲಾ ದಾನಿಗಳಿಗೆ ಹಣವನ್ನು ಮರುಪಾವತಿ ಮಾಡಿತ್ತು. ಇಸಾಕ್ ಮಾಡಿದ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಂಥಾಲಯವನ್ನು ಮರುನಿರ್ಮಾಣ ಮಾಡುವ ಭರವಸೆ ನೀಡಿತ್ತು.
ಭರವಸೆ ನೀಡಿ ಹಲವು ತಿಂಗಳು ಕಳೆದರೂ ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ತನೆಯಿಂದ ಕೋಪಗೊಂಡು ಇಸಾಕ್ ಅವರು, ಶಾಸಕ ಜಮೀರ್ ಅಹಮದ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಇತರರು ನೀಡಿದ 4 ಲಕ್ಷ ರೂ ದಿಂದಲೇ ಗ್ರಂಥಾಲಯವನ್ನು ಮರುನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು: ಗ್ರಂಥಾಲಯ ಮರು ನಿರ್ಮಾಣಕ್ಕೆ ಸರ್ಕಾರ ನೆರವು; ದಾನಿಗಳ ರೂ.28 ಲಕ್ಷ ವಾಪಸ್ ನೀಡಲು ನಿರ್ಧಾರ
ಗಣರಾಜ್ಯೋತ್ಸವದ ಅಂಗವಾಗಿ ನಿನ್ನೆ ಸೈಯದ್ ಇಸಾಕ್ ಅವರು, ಹತ್ತಿರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆಗೆ ಆಗಮಿಸಿದ್ದ ವಿದ್ಯಾರ್ಥಿಗಳು, ಈ ವೇಳೆ ಓದಲು ಗ್ರಂಥಾಲಯಕ್ಕೆ ಆಗಾಗ್ಗೆ ಭೇಟಿ ನೀಡುವುದಾಗಿ ಪ್ರತಿಜ್ಞೆ ಮಾಡಿದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಇತರರು ಹಾಜರಿದ್ದರು.
ಅಧಿಕಾರಿಗಳು ಗ್ರಂಥಾಲಯ ಮರು ನಿರ್ಮಾಣ ಕಾರ್ಯಕ್ಕೆ ಮುಂದಾಗಲಿಲ್ಲ. ಜನರು ಕಾದು ಕುಳಿತುಕೊಳ್ಳುವಂತೆ ಮಾಡುವುದು ನನಗಿಷ್ಟವಿರಲಿಲ್ಲ. ಗ್ರಂಥಾಲಯ ಮರುನಿರ್ಮಾಣವಾಗಿದ್ದಕ್ಕೆ ನನಗೆ ಸಂತಸವಿದೆ. ಜನರಿಗಾಗಿ ಈ ಗ್ರಂಥಾಲಯ ಸೇವೆ ಸಲ್ಲಿಸಲಿದೆ. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸೈಯಲ್ ಇಸಾಕ್ ಅವರು ಹೇಳಿದ್ದಾರೆ.