ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ನಡೆದುಬಂದ ಹಾದಿ
ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1949ರ ಮೇ 3 ರಂದು ಕಾರ್ಕಳ ತಾಲೂಕಿನ ವರಂಗದಲ್ಲಿ ಜನಿಸಿದ್ದರು. 20ನೇ ವಯಸ್ಸಿನಲ್ಲೇ ಅಂದರೆ 1970ರಲ್ಲಿ ಧರ್ಮಾಚಾರ್ಯ ಪೀಠವನ್ನು ಅಲಂಕರಿಸಿದ್ದರು.
Published: 24th March 2023 12:38 AM | Last Updated: 24th March 2023 07:34 PM | A+A A-

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1949ರ ಮೇ 3 ರಂದು ಕಾರ್ಕಳ ತಾಲೂಕಿನ ವರಂಗದಲ್ಲಿ ಜನಿಸಿದ್ದರು. 20ನೇ ವಯಸ್ಸಿನಲ್ಲೇ ಅಂದರೆ 1970ರಲ್ಲಿ ಧರ್ಮಾಚಾರ್ಯ ಪೀಠವನ್ನು ಅಲಂಕರಿಸಿದ್ದರು.
ಶ್ರೀಗಳ ಪೂರ್ವಾಶ್ರಮದ ಹೆಸರು ರತ್ನಾಕರ ಆಗಿದೆ. ತಂದೆಯ ಹೆಸರು ಕೀರ್ತಿಶೇಷ ಚಂದ್ರರಾಜ. ತಾಯಿಯ ಹೆಸರು ಮಾತೃಶ್ರೀ ಕಾಂತಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಪ್ರಾರಂಭಿಸಿ, ಹೊಂಬುಜ ಹಾಗೂ ವಿವಿಧ ಜೈನ ಮಠಗಳಲ್ಲಿ ಕನ್ನಡ, ಸಂಸ್ಕೃತ, ಪ್ರಾಕೃತ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಸತತ ಜೈನ ಧರ್ಮದ ತತ್ವಶಾಸ್ತ್ರ ಅಧ್ಯಯನ ಕೈಗೊಂಡರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ.ತತ್ವಶಾಸ್ತ್ರಗಳ ಸ್ನಾತಕೋತ್ತರ ಪದವಿಗಳನ್ನು ಪಡೆದರು.
ಶ್ರೀಗಳು 12-12-1969ರಲ್ಲಿ ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದರು. 1970ರಲ್ಲಿ ಶ್ರವಣಬೆಳಗೊಳದ ಮಠದ ಮಠಾಧೀಶರಾದರು. ಬಳಿಕ ಎಸ್.ಡಿ.ಜೆ.ಎಂ.ಐ ಟ್ರಸ್ಟ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರಿಂಗ್ ಕಾಲೇಜು ಶಿಕ್ಷಣದವರೆಗೆ ಅದನ್ನು ಕೊಂಡೊಯ್ಯದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ. ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಪ್ರಾಕೃತ ಭಾಷೆಗೆ ಮರುಜೀವ ತುಂಬಿದರು. ಪ್ರಾಕೃತ ವಿದ್ವಾಂಸರಿಗೆ- ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ, ಜೈನ ಸಾಹಿತ್ಯ ಸಂಸ್ಕೃತಿಗಳಿಗೆ- ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ, ಕನ್ನಡ ಜೈನ ಸಾಹಿತ್ಯ ಸೇವೆಗೆ- ಚಾವುಂಡರಾಯ ಪ್ರಶಸ್ತಿಗಳನ್ನು ಸ್ಥಾಪಿಸಿ, ವಿಶೇಷ ಸಾಧಕರಿಗೆ ಅವುಗಳನ್ನು ನೀಡಿ ಗೌರವಿಸುತ್ತ ಬರುತ್ತಿದ್ದರು. ಮಹಾಧವಲಾ ಗ್ರಂಥಗಳ 42 ಸಂಪುಟಗಳ ಕನ್ನಡ ಅನುವಾದ ಮಾಡಿಸಿ, ಅವುಗಳನ್ನು ಪ್ರಕಟಿಸಿ ಅವಿಸ್ಮರಣೀಯ ಕಾರ್ಯ ಕೈಗೊಂಡರು.
ಇದನ್ನೂ ಓದಿ: ಜೈನ ಸಂಪ್ರದಾಯ, ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಅಂತ್ಯಕ್ರಿಯೆ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಇತಿಹಾಸ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂಎ ತತ್ವಶಾಸ್ತ್ರ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದರು. ಶ್ರೀಗಳು ಕನ್ನಡ, ಸಂಸ್ಕೃತ, ಮತ್ತು ಪ್ರಾಕೃತದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಶ್ರವಣಬೆಳಗೊಳದಲ್ಲಿ ಇದ್ದುಕೊಂಡೇ ಮಠದ ಸಮಸ್ತ ಕಾರ್ಯನಿರ್ವಹಣೆಯೊಂದಿಗೆ ಗೊಮ್ಮಟೇಶ್ವರ ಮೂರ್ತಿಯ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. 1981ರಲ್ಲಿ ಗೊಮ್ಮಟೇಶ್ವರ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದರು. ಅಂದಿನ ಪ್ರಧಾನಿ ಇಂದಿಗಾರಾಂಧಿ ಶ್ರೀಗಳಿಗೆ ಕರ್ಮಯೋಗಿ ಎಂಬ ಬಿರುದು ನೀಡಿ ಗೌರವಿಸಿದ್ದರು.
ಇನ್ನು 1981, 1993, 2006, 2018ರಲ್ಲಿ ಸಹ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದರು. ಸ್ವಾಮೀಜಿಗಳು 40ಕ್ಕೂ ಹೆಚ್ಚು ಜಿನಾಲಯಗಳನ್ನೂ ಜೀರ್ಣೋದ್ಧಾರ ಮಾಡಿದ್ದಾರೆ. ಶ್ರವಣಬೆಳಗೊಳದ ಸುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನೂ ಸಹ ಮಠದಿಂದ ಸ್ಥಾಪಿಸಿದ್ದರು.
ಪ್ರಾಕೃತ ಭಾಷೆಯ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಪ್ರಾಕೃತ ಜ್ಞಾನ ಭಾರತ ಟ್ರಸ್ಟ್ ಅನ್ನು ಸ್ಥಾಪಿಸಿದ್ದರು. ಶ್ರವಣಬೆಳಗೊಳದಲ್ಲಿ ಸಂಚಾರಿ ಆಸ್ಪತ್ರೆ, ಆರ್ಯುವೇದಿಕ್ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ, ರಾಷ್ಟ್ರೀಯ ಪ್ರಾಕೃತ ಅಧ್ಯಯನ-ಸಂಶೋಧನಾ ಸಂಸ್ಥೆಯಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಹಾಗೂ ಪ್ರಾಕೃತ ಗ್ರಂಥಗಳ ಕನ್ನಡ ಅನುವಾದದ ವ್ಯವಸ್ಥೆಯನ್ನು ಸಹ ಜಾರಿಗೆ ತಂದಿದ್ದರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ʻಕರ್ಮಯೋಗಿʼ ಎಂಬ ಬಿರುದೂ ಪಡೆದಿದ್ದರು. ಶ್ರವಣ ಬೆಳಗೊಳದಲ್ಲಿ ನಡೆದ ನಾಲ್ಕು ಮಹಾಮಸ್ತಕಾಭಿಷೇಕ ಇದೇ ಶ್ರೀಗಳ ಉಸ್ತುವಾರಿಯಲ್ಲಿ ನೆರವೇರಿತ್ತು. ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಯವರಿಗೆ ಅಪಾರ ಶಿಷ್ಯವರ್ಗವಿದೆ.
ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ ವ್ಯವಹಾರ ನಿರ್ವಹಣೆಗೆ ನಿವೃತ್ತ ಕೆಎಎಸ್ ಅಧಿಕಾರಿ ನೇಮಿಸಲು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಯಸಿದ್ದರು!
ಶ್ರೀಗಳು 1949ರ ಮೇ 3ರಂದು ಜನಿಸಿದ್ದರು. ಶ್ರೀ ಮಠದ ಪೀಠಾಧಿಪತಿಗಳಾಗಿ 1970ರಲ್ಲಿ ನೇಮಕಗೊಂಡಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಅವರು ಬಳಿಕ ಮೈಸೂರು ವಿವಿಯಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಪ್ರಶಸ್ತಿಗಳು:
ಪೂಜ್ಯ ಶ್ರೀಗಳ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರದಲ್ಲಿನ ಸೇವೆಗಾಗಿ: ಕರ್ಮಯೋಗಿ, ಅಧ್ಯಾತ್ಮ ಯೋಗಿ, ಭಟ್ಟಾರಕ ಶಿರೋಮಣಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಮಾಜಮುಖಿ
ಶ್ರೀ ಬಾಹುಬಲಿ ಮಕ್ಕಳ ಆಸ್ಪತ್ರೆ, ವೃದ್ದಾಶ್ರಮಗಳಂಥ ಸಮಾಜಮುಖಿ ಹಾಗೂ ಇನ್ನೂ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸುತ್ತಾ ಈ ನಾಡಿನಲ್ಲಿ ಶಾಂತಿ ನೆಲೆಸಲು ಸತತ 50 ವರ್ಷಗಳ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಾ ಬಂದಿದ್ದಾರೆ. ಇದನ್ನು ಅರಿತ ಕನಾ೯ಟಕ ಸರ್ಕಾರವು 2018ರ ರಾಷ್ಟ್ರೀಯ ಶ್ರೀ ಭ.ಮಹಾವೀರ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇದು 10 ಲಕ್ಷ ರೂ ನಗದು ಹಾಗೂ ಫಲಕವನ್ನು ಹೊಂದಿದೆ.