'ನಾವೂ 12 ಪದಕ ಗೆದ್ದಿದ್ದೇವೆ' ಎಂದು ಪ್ರಧಾನಿ ಮೋದಿಗೆ ನೆನಪಿಸಿದ ಪ್ಯಾರಾ ಬ್ಯಾಡ್ಮಿಂಟನ್ ತಾರೆ
ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ಹಾಗೂ ಗೌರವವನ್ನು ತಂದ ಮಾನಸಿ ಜೋಶಿ ಅವರಿಗೆ ಇದೀಗ ಟ್ವಿಟ್ಟರ್ ನಲ್ಲಿ ಅಭಿನಂದನೆಗಳ ಸುರಿಮಳೆ ಆಗಿತ್ತಿದೆ. ಆದರೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಅವರಿಗೆ ಹೋಲಿಸಿದರೆ ಶನಿವಾರದಂದು ನಡೆದ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಬಂಗಾರ ಗೆದ್ದ ಮಾನಸಿ ಬಗೆಗೆ ಮಾದ್ಯಮಗಳಲ್ಲಿ ಹೆಚ್ಚು ಪ್ರಚಾರ ಲಭಿಸಿಲ್ಲ.
ಮಾನಸಿ ಕಂಪಾಟ್ರಿಯೋಟ್ ಪಾರುಲ್ ಪಾರ್ಮೆರ್ ಅವರನ್ನು ಫೈನಲ್ ನಲ್ಲಿ 21-12, 21-7 ಸೆಟ್ಗಳಿಂದ ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದಾರೆ.
"ಪಿವಿ ಸಿಂಧು ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಪಡೆದು ಮಿಂಚಿದ್ದಾರೆ. ಅವ್ರನ್ನು ಅಭಿನಂದಿಸುವ ಭರದಲ್ಲಿ ವಿಶ್ವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮಾನಸಿ ಜೋಶಿಯವರನ್ನು ನಾವು ಅಭಿನಂದಿಸಲು ಮರೆತಿದ್ದೇವೆ! ಇದು ನನ್ನ ಹಾರೈಕೆ!" ಹೀಗೆಂದು ಪುದುಚೇರಿಯ ಗವರ್ನರ್ ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟಿ ತಾಪ್ಸಿ ಪನ್ನು ಸಹ "ಈ ಚಿನ್ನವನ್ನು ಸಹ ಒಪ್ಪಿಕೊಳ್ಳಲು ನಾವು ಮರೆಯಬಾರದು! ಮಾನಸಿ ಜೋಶಿ ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್" ಎಂದು ಟ್ವೀಟ್ ಮಾಡಿದ್ದಾರೆ.
ಈ ಬಾರಿಯ ಪ್ಯಾರಾ-ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಒಟ್ಟಾರೆ ಹನ್ನೆರಡು ಪದಕ ಗೆದ್ದಿದೆ.
ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ವಿಜೇತರಿಗೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಮಂಗಳವಾರ 1.82 ಕೋಟಿ ರೂ.ನೀಡಿ ಗೌರವಿಸಿದ್ದಾರೆ. ಇದರಲ್ಲಿ ಚಿನ್ನದ ಪದಕ ವಿಜೇತರಿಗೆ ತಲಾ 20 ಲಕ್ಷ ರೂ., ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು ಕ್ರಮವಾಗಿ 14 ಲಕ್ಷ ಮತ್ತು 8 ಲಕ್ಷ ರೂ. ಪಡೆಯಲಿದ್ದಾರೆ. ಡಬಲ್ಸ್ ಸ್ಪರ್ಧೆಯಲ್ಲಿ ಗೆದ್ದವರಿಗೆ ಚಿನ್ನಕ್ಕೆ ತಲಾ 15 ಲಕ್ಷ, ಬೆಳ್ಳಿಗೆ ತಲಾ 10.5 ಲಕ್ಷ ಮತ್ತು ಕಂಚಿಗೆ ತಲಾ 6 ಲಕ್ಷ ರೂ. ಬಹುಮಾನವನ್ನು ನೀಡಲಾಗಿದೆ.
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೇರಿದ ಪಿವಿ ಸಿಂಧುಗೆ ರಿಜಿಜು 10 ಲಕ್ಷ ರೂ.ಬಹುಮಾನ ನೀಡಿದ್ದಾರೆ.
ಪ್ರಧಾನಿ ಗಮನ ಸೆಳೆದ ಪ್ಯಾರಾ ಕ್ರೀಡಪಟು
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಾಧನೆ ಪ್ರಶಂಸಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾರಾ ಬ್ಯಾಡ್ಮಿಂಟನ್ ತಂಡದ ಸುಕಾಂತ್ ಅವರುತಮ್ಮ ತಂಡದ ಸಾಧನೆಯನ್ನು ಪ್ರಧಾನಿ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ."ಮೋದಿಯವರೇ ಪ್ಯಾರಾ ಬ್ಯಾಡ್ಮಿಂಟನ್ ತಂಡವಾದ ನಾವೂ ಈ ಬಾರಿ ದೇಶಕ್ಕೆ ಹನ್ನೆರಡು ಪದಕಗಳನ್ನು ತಂದಿದ್ದೇವೆ.ನಮಗೆ ನಿಮ್ಮ ಆಶೀರ್ವಾದದ ಅಗತ್ಯವಿದೆ. . ಏಷ್ಯನ್ ಗೇಮ್ಸ್ ಬಳಿಕ ನಮಗೆ ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಿಲ್ಲ, ಈಗ ನಮಗೆ ಅವಕಾಶವನ್ನು ಒದಗಿಸಿಕೊಡಬೇಕೆಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದು ಸುಶಾಂತ್ ಟ್ವೀಟ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ.
Advertisement