ಟೋಕಿಯೊ: ಭಾರತದ ಮೊದಲ ಮಹಿಳಾ ಗಾಲ್ಫರ್ ಅದಿತಿ ಅಶೋಕ್ ಅವರು ವಿರೋಚಿತ ಸೆಣಸಾಡಿ ಶನಿವಾರ ನಡೆದ ಟೋಕಿಯೊ ಒಲಿಂಪಿಕ್ ಪಂದ್ಯದಲ್ಲಿ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ಕೈತಪ್ಪಿ ಹೋಗಿದೆ.
ಉತ್ತಮ ಸಾಧನೆ ಪ್ರದರ್ಶಿಸಿದ ಬೆಂಗಳೂರು ಮೂಲದ 23 ವರ್ಷದ ಅದಿತಿ ಅಶೋಕ್ ಕೊನೆಯ ಸುತ್ತಿನ ಅಂತ್ಯಕ್ಕೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಒಲಿಂಪಿಕ್ ಪಂದ್ಯದಲ್ಲಿ ಉತ್ತಮ ಸಾಧನೆ ಮೆರೆದು ನಿರ್ಗಮಿಸಿದ್ದಾರೆ. ಆದರೆ ಅವರ ಪ್ರದರ್ಶನ ಕೊಂಡಾಡುವಂತಿತ್ತು.
ಮೂರನೇ ಹಂತದವರೆಗೂ ಅದಿತಿ ನ್ಯೂಜಿಲ್ಯಾಂಡ್ ನ ಕೊ ಲಿಡಿಯಾ ಮತ್ತು ಜಪಾನ್ ನ ಇನಾಮಿ ಮೊನಿಗೆ ಪ್ರಬಲ ಪೈಪೋಟಿ ನೀಡುತ್ತಲೇ ಬಂದರು. ಕೊನೆಯ ಎರಡು ಹೋಲ್ ಗಳಲ್ಲಿ ನ್ಯೂಜಿಲ್ಯಾಂಡ್ ನ ಕೊ ಲಿಡಿಯಾ, ಜಪಾನ್ ನ ಇನಾಮಿ ಮೊನಿ ಮುನ್ನಡೆ ಸಾಧಿಸಿದರು. ಹೀಗಾಗಿ ಅದಿತಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಅದಿತಿ 3ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದರು. ಶನಿವಾರ ನಡೆದ ಸುತ್ತಿನಲ್ಲಿ ಅದಿತಿ ಮೂರನೇ ಸ್ಥಾನ ಪಡೆದುಕೊಂಡರಾದರೂ ನ್ಯೂಜಿಲೆಂಡ್ನ ಲೈಡಿಯಾ ಕೊ ಜೊತೆ ಟೈ ಆಯಿತು. ಎರಡನೇ ಸ್ಥಾನದಲ್ಲಿ ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ಅಮೆರಿಕಾ ಇತ್ತು. ಇದೇ ವೇಳೆ ಮಳೆ ಬಂದ ಪರಿಣಾಮ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು.
ಸ್ವಲ್ಪ ಸಮಯದ ಬಳಿಕ ಮಳೆ ನಿಂತ ಪರಿಣಾಮ ಅಂತಿಮ ಫೈನಲ್ ರೌಂಡ್ ಆರಂಭಿಸಲಾಯಿತು. ಇದರಲ್ಲಿ ಅದಿತಿ 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ರಾಷ್ಟ್ರಪತಿ ಶ್ಲಾಘನೆ: ಅದಿತಿ ಅಶೋಕ್ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಭಾರತದ ಮತ್ತೊಬ್ಬ ಹೆಣ್ಣುಮಗಳು ಒಲಿಂಪಿಕ್ ನಲ್ಲಿ ಗುರುತು ಸಾಧಿಸಿದ್ದಾರೆ. ಭಾರತದ ಗಾಲ್ಫ್ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ತೋರಿಸುತ್ತಲೇ ಇದ್ದರು. ನಿಮಗೆ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೊಂಡಾಡಿದ್ದಾರೆ.
ಪ್ರಧಾನಿ ಅಭಿನಂದನೆ: ನೀವು ಚೆನ್ನಾಗಿ ಆಡಿದ್ದೀರಿ ಅದಿತಿಯವರೇ, ಆಟದುದ್ದಕ್ಕೂ ಉತ್ತಮ ಕೌಶಲ್ಯ ತೋರಿಸಿದ್ದೀರಿ, ಆಕಸ್ಮಿಕವಾಗಿ ಪ್ರಶಸ್ತಿ ಕೈತಪ್ಪಿ ಹೋಗಿದೆ, ಆದರೆ ನೀವು ಇದುವರೆಗೆ ಯಾವ ಭಾರತೀಯರೂ ಮಾಡದಿದ್ದ ಸಾಧನೆಯನ್ನು ಗಾಲ್ಫ್ ನಲ್ಲಿ ಮಾಡಿದ್ದೀರಿ, ನಿಮ್ಮ ಭವಿಷ್ಯದ ಅಭಿಯಾನಕ್ಕೆ ಶುಭಾಶಯಗಳು ಎಂದು ಪ್ರಧಾನಿ ಶುಭಾಶಯ ತಿಳಿಸಿದ್ದಾರೆ.
Advertisement