ನವದೆಹಲಿ: ಛತ್ರಾಸಲ್ ಕ್ರೀಡಾಂಗಣದಲ್ಲಿ ಯುವ ಕುಸ್ತಿಪಟು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ರ ನ್ಯಾಯಾಂಗ ಬಂಧನವನ್ನು ಜುಲೈ 9ರವರೆಗೆ ವಿಸ್ತರಿಸಿದೆ.
ಸುಶೀಲ್ ಕುಮಾರ್ ಕೊಲೆ ಮತ್ತು ಅಪಹರಣದ ಆರೋಪ ಎದುರಿಸುತ್ತಿದ್ದು, 14 ದಿನಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಂಡಿದ್ದರಿಂದ ಇಂದು ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮಾಯಾಂಕ್ ಅಗರ್ವಾಲ್ ಅವರ ಮುಂದೆ ಹಾಜರುಪಡಿಸಲಾಯಿತು.
ಯುವ ಕುಸ್ತಿಪಟು ಸಾಗರ್ ರಾಣಾ ಮೇಲೆ ಮೇ 4ರಂದು ಸುಶೀಲ್ ಕುಮಾರ್ ಸೇರಿದಂತೆ ಅವರ ನಾಲ್ವರು ಸಹಚರರು ಹಲ್ಲೆ ನಡೆಸಿದ್ದರು. ಪರಿಣಾಮ ಸಾಗರ್ ರಾಣಾ ಸಾವನ್ನಪ್ಪಿದ್ದು ಸಾಗರ್ ಜೊತೆಗಿದ್ದ ಇಬ್ಬರಿಗೆ ಮಾರಣಾಂತಿಕ ಗಾಯಗಳಾಗಿತ್ತು.
ಸುಶೀಲ್ ಕುಮಾರ್ ಈ ಹತ್ಯೆಯ 'ಮುಖ್ಯ ಅಪರಾಧಿ ಮತ್ತು ಮಾಸ್ಟರ್ ಮೈಂಡ್' ಎಂದು ಪೊಲೀಸರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಮೊಬೈಲ್ ದೃಶ್ಯವಾಳಿ ಪುರಾವೆಗಳು ಸಿಕ್ಕಿವೆ. ದೃಶ್ಯಗಳಲ್ಲಿ ಸುಶೀಲ್ ಕುಮಾರ್ ಹೊಡೆಯುವುದನ್ನು ಕಾಣಬಹುದು.
ಸುಶೀಲ್ ಕುಮಾರ್ ಮತ್ತು ಸಹ ಆರೋಪಿ ಅಜಯ್ ಕುಮಾರ್ ಸೆಹ್ರಾವತ್ ರನ್ನು ಮೇ 23ರಂದು ಬಂಧಿಸಲಾಯಿತು. ಇಲ್ಲಿಯವರೆಗೆ, ಅವರು ಕ್ರಮವಾಗಿ 10 ಮತ್ತು 23 ದಿನ ಪೊಲೀಸ್ ಮತ್ತು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಸೇರಿದಂತೆ ಒಟ್ಟು 10 ಜನರನ್ನು ಈವರೆಗೆ ಬಂಧಿಸಲಾಗಿದೆ.
Advertisement