ಕೋಟೆ ಕೊತ್ತಲಗಳ ಸ್ವರ್ಗ, ಐತಿಹಾಸಿಕ ಚಿತ್ರದುರ್ಗ!
ಅಜೇಯವಾಗಿ, ಅನೇಕ ಯುದ್ಧಗಳನ್ನು ಮತ್ತು ಅನೇಕ ಆಡಳಿತಗಾರರನ್ನು ಹೊಂದಿದ್ದ ಚಿತ್ರದುರ್ಗ ಕೋಟೆಯು ಕಳೆದುಹೋದ ಒಂದು ಯುಗದ ಸಾಕ್ಷಿಯಾಗಿದೆ ಮತ್ತು ಈಗ ಉಳಿದಿರುವುದು ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಿ ನೋಡಲೇಬೇಕಾದ ದೃಶ್ಯ ವೈಭವವಾಗಿದೆ.
Published: 08th January 2021 04:21 PM | Last Updated: 08th January 2021 04:21 PM | A+A A-

ಚಿತ್ರದುರ್ಗ ಕೋಟೆ
ಕರ್ನಾಟಕದ ಚಿತ್ರದುರ್ಗ ಪಟ್ಟಣದಲ್ಲಿರುವ ಚಿತ್ರದುರ್ಗ ಕೋಟೆಯು ಉತ್ಸಾಹಿ ಪ್ರಯಾಣಿಕರಿಗೆ ಅನೇಕ ಆಶ್ಚರ್ಯಗಳನ್ನು ತರುತ್ತದೆ. 1500 ಎಕರೆ ವಿಸ್ತೀರ್ಣವನ್ನು ಹೊಂದಿರುವ ಇಲ್ಲಿ ಎಲ್ಲೆಡೆಯೂ ಇತಿಹಾಸವನ್ನು ಕಾಣಬಹುದು ಮತ್ತು ಒಂದೊಮ್ಮೆ ಕೋಟೆಯು ಸುಸ್ಥಿಯಲ್ಲಿದ್ದಾಗಿನ ಗತ ವೈಭವವನ್ನು ಊಹಿಸಿಕೊಳ್ಳುವುದು ಸುಲಭ.
ಅಜೇಯವಾಗಿ, ಅನೇಕ ಯುದ್ಧಗಳನ್ನು ಮತ್ತು ಅನೇಕ ಆಡಳಿತಗಾರರನ್ನು ಹೊಂದಿದ್ದ ಚಿತ್ರದುರ್ಗ ಕೋಟೆಯು ಕಳೆದುಹೋದ ಒಂದು ಯುಗದ ಸಾಕ್ಷಿಯಾಗಿದೆ ಮತ್ತು ಈಗ ಉಳಿದಿರುವುದು ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಿ ನೋಡಲೇಬೇಕಾದ ದೃಶ್ಯ ವೈಭವವಾಗಿದೆ. ಇಲ್ಲಿ ಪ್ರತಿಯೊಂದಕ್ಕೂ ಶ್ರೀಮಂತ ಇತಿಹಾಸವಿದೆ ಮತ್ತು ಇದರ ಅನುಭವವು ಅಸಾಧಾರಣವಾಗಿದೆ.
ಚಿತ್ರದುರ್ಗದ ಕೋಟೆಯನ್ನು ಕಟ್ಟಲು ರಾಷ್ಟ್ರಕೂಟರು, ಚಾಲುಕ್ಯರು ಹಾಗು ನಾಯಕರು ಸಹಾಯ ಮಾಡಿದ್ದಾರೆ. ನಾಯಕರು ಮುಖ್ಯವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಂತರ ಹೈದರಾಲಿ ಹಾಗು ಅವನ ಮಗ ಟಿಪ್ಪು ಸುಲ್ತಾನ ಕೋಟೆಯ ಆಳ್ವಿಕೆಯನ್ನು ನಡೆಸುತ್ತಿದ್ದರು. ಈ ಕೋಟೆಯನ್ನು ಏಳು ಗೋಡೆಗಳ ನಡುವೆ ಕಟ್ಟಲಾಗಿದೆ.
ಕನ್ನಡದಲ್ಲಿ ಈ ಕೋಟೆಯನ್ನು ಕಲ್ಲಿನ ಕೋಟೆ, ಉಕ್ಕಿನ ಕೋಟೆ ಹಾಗು ಏಳು ಸುತ್ತಿನ ಕೋಟೆ ಎಂದು ಸಹ ಕರೆಯುತ್ತಾರೆ.
ಬನ್ನಿ, ಚಿತ್ರದುರ್ಗದ ಕೋಟೆಯೊಳಗೆ ಒಂದು ಸುತ್ತಿ ಹಾಕಿ ಬರೋಣ.
ಓಬವ್ವನ ಘಟನೆ:
ಈ ಕೋಟೆಯಲ್ಲಿ ನಡೆದ ಮುಖ್ಯವಾದ ಘಟನೆ ಕೆಚ್ಚೆದೆಯ ಮಹಿಳೆಯಾದ ಓಬವ್ವನ ಘಟನೆ. ಇವಳು ಮಹಿಳಾ ಹೋರಾಟಗಾರ್ತಿಯಾಗಿದ್ದಳು. ಒಂದು ದಿನ ಊಟದ ಸಮಯದಲ್ಲಿ ಮದ್ದ ಹನುಮಪ್ಪ ಎಂಬ ಸೈನಿಕನ ಹೆಂಡತಿಯಾದ ಓಬವ್ವ ಗೋಪುರವನ್ನು ಕಾವಲು ಕಾಯುತ್ತಿದ್ದಳು. ಅವಳು ಕೋಟೆಯ ಬಿರುಕು ಆರಂಭವನ್ನು ಕಾವಲು ಕಾಯುತ್ತಿದ್ದಳು. ಇಲ್ಲಿ ಒಬ್ಬರು ಮಾತ್ರ ರಹಸ್ಯವಾಗಿ ಬರುವಷ್ಟು ಸ್ಥಳವಿತ್ತು. ಇವಳ ಸಾಹಸ ಇಂದು ಒಂದು ಇತಿಹಾಸವಾಗಿ ಜನರ ಮನಸೆಳೆದಿದೆ. ಓಬ್ಬವ್ವ ನೀರು ತರಲು ಹೋದಾಗ ಕೆಲವು ಶತ್ರು ಸೈನಿಕರ ಕೆಳ ಧ್ವನಿಯಲ್ಲಿ ಮಾತಾಡುತ್ತಿರುವುದು ಅವಳಿಗೆ ಕೇಳಿಸಿತು. ಇದನ್ನು ಅರಿತ ಅವಳು ತಕ್ಷಣ ರಹಸ್ಯ ದಾರಿಯಿಂದ ಯಾರಿಗೂ ಕಾಣದ ಹಾಗೆ ಮರೆಯಾದಳು, ಮರೆಯಾಗಿ ಒಂದು ಒನಕೆಯನ್ನು ಕೈಯಲ್ಲಿ ಹಿದಿದು ನಿಂತಳು.
ಈ ಸಂದರ್ಭದಲ್ಲಿ ಅವಳು ಅನೇಕ ಸೈನಿಕರನ್ನು ಸಾಯಿಸಿದಳು. ಮದ್ದ ಹನುಮಪ್ಪನು ಊಟ ಮುಗಿಸಿ ಬರುವಷ್ಟರಲ್ಲಿ ಅನೇಕ ಶತ್ರು ಸೈನಿಕರನ್ನು ಕೊಂದು ರಕ್ತದ ಒಣಕೆಯನ್ನು ಕೈಯಲ್ಲಿ ಹಿಡಿದು ಸತ್ತ ಹೆಣಗಳ ಸುತ್ತ ನಿಂತಿದ್ದಳು. ಮದ್ದಪ್ಪ ನಾಯಕ ತುತ್ತೂರಿ ಊದಿ ಎಲ್ಲ ಸೈನಿಕರನ್ನು ಕರೆದನು. ನಂತರ ಉಳಿದ ಶತ್ರು ಸೈನಿಕರನ್ನು ಕೊಲ್ಲಲಾರಂಭಿಸಿದರು. ಇವಳ ಈ ಸಾಹಸ ಆ ದಿನ ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ಸೈನಿಕರ ದಾಳಿಯಿಂದ ತಪ್ಪಿಸಿತು. ಇವಳ ಈ ಸಾಹಸ ಇತಿಹಾಸದಲ್ಲಿ ಒಣಕೆ ಓಬವ್ವನ ಘಟನೆಯೆಂದು ಹೆಸರುವಾಸಿಯಾಗಿದೆ ಹಾಗು ಆ ರಹಸ್ಯ ಸ್ಥಳಕ್ಕೆ ಒನಕೆ ಕಿಂಡಿ ಎಂದು ಕರೆಯಲಾಗಿದೆ.
ಮಾಹಿತಿ-ವಿಡಿಯೋ: ಪಿ. ಸುರೇಶ್ ಕುಮಾರ್