1971ರ ವಿಜಯೋತ್ಸವ: ಭಾರತ, ರಷ್ಯಾದ 31 ಸೈನಿಕರಿಗೆ ಬಾಂಗ್ಲಾದೇಶದ ಸನ್ಮಾನ

ಭಾರತ ಹಾಗೂ ರಷ್ಯಾ ದೇಶಗಳು 1971 ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ನಿರ್ವಹಿಸಿದ ಪಾತ್ರಗಳಿಗಾಗಿ ಬಾಂಗ್ಲಾದೇಶವು ಭಾರತ ಮತ್ತು ರಷ್ಯಾದ 31 ಸೈನಿಕರನ್ನು ಗೌರವಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಢಾಕಾ: ಭಾರತ ಹಾಗೂ ರಷ್ಯಾ ದೇಶಗಳು 1971 ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ನಿರ್ವಹಿಸಿದ ಪಾತ್ರಗಳಿಗಾಗಿ ಬಾಂಗ್ಲಾದೇಶವು ಭಾರತ ಮತ್ತು ರಷ್ಯಾದ 31 ಸೈನಿಕರನ್ನು ಗೌರವಿಸಿದೆ. 
  
ರಾಜಧಾನಿ ಢಾಕಾ ಹೋಟೆಲ್‌ನಲ್ಲಿ 31 ಸೈನಿಕರ  ಗೌರವಾರ್ಥವಾಗಿ ಹೋಟೆಲ್‍ ನಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ಸಿಂಗ್ ಕದ್ಯಾನ್ ಅವರು 26 ಸದಸ್ಯರ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಐದು ಸದಸ್ಯರ ರಷ್ಯಾದ ನಿಯೋಗವನ್ನು ವಾಸಿಲಿ ಮಿಹಲೋವಿಕ್ ನೇತೃತ್ವ ವಹಿಸಿದ್ದರು.
 
 ವಿಜಯೋತ್ಸವದ ಸಂದರ್ಭದಲ್ಲಿ ಸರ್ಕಾರದ ಆಹ್ವಾನದ ಮೇರೆಗೆ ಈ ಸೈನಿಕರು ಡಿಸೆಂಬರ್ 14 ರಂದು ಬಾಂಗ್ಲಾದೇಶಕ್ಕೆ ಆಗಮಿಸಿ, ತಮ್ಮ ಭೇಟಿಯ ಸಮಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಮೋಚನಾ ಯುದ್ಧ ವ್ಯವಹಾರಗಳ ಸಚಿವ ಎಕೆಎಂ ಮೊಜಮ್ಮೆಲ್ ಹಕ್ ಭಾರತ ಮತ್ತು ರಷ್ಯಾಕ್ಕೆ ಕೃತಜ್ಞತೆ ಸಲ್ಲಿಸಿದರು. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂದಿರಾ ಗಾಂಧಿ, ಭಾರತದ ಜನರು ಮತ್ತು ಮಿತ್ರ ಪಡೆಗಳು ನೀಡಿದ ಸಹಾಯವು ವಿಶ್ವ ಇತಿಹಾಸದಲ್ಲಿ ಅಪರೂಪ ಎಂದು ಅವರು ಹೇಳಿದರು.

ಬಾಂಗ್ಲಾದೇಶದ ವಿಜಯವು ಸನ್ನಿಹಿತವಾಗಿದ್ದಾಗ ಕದನವಿರಾಮಕ್ಕಾಗಿ ಯುಎಸ್ ಪ್ರಸ್ತಾಪವನ್ನು ಅಂದಿನ ಸೋವಿಯತ್ ಒಕ್ಕೂಟ ಹೇಗೆ ವೀಟೋ ಮಾಡಿತು ಎಂದು ಅವರು ನೆನಪಿಸಿಕೊಂಡರು. ಚಟ್ಟೋಗ್ರಾಮ್ ಬಂದರಿನಲ್ಲಿ ಪಾಕಿಸ್ತಾನ ಆಕ್ರಮಣ ಪಡೆಗಳು ನೆಟ್ಟ ಗಣಿಗಳನ್ನು ತೆಗೆಯುವಾಗ ಸ್ಫೋಟದಲ್ಲಿ ಸಾವನ್ನಪ್ಪಿದ ಸೋವಿಯತ್ ಸೈನಿಕರನ್ನು ಸಚಿವರು ನೆನಪಿಸಿಕೊಂಡರು.  "ವಿಮೋಚನೆಗಾಗಿ ಹರಿದ ರಕ್ತದೊಡನೆ ಭಾರತ, ರಷ್ಯಾ ಹಾಗೂ ಬಾಂಗ್ಲಾದೇಶದ ಸಂಬಂಧ ಬೆರೆತಿದ್ದು, ಇದನ್ನು ಎಂದಿಗೂ ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com