ಸಿಂಗಾಪುರ: ನೆರೆ ರಾಷ್ಟ್ರ ತನ್ನ ಹೆಸರಿಗೆ ತಕ್ಕಂತೆ ಮುಂದೆ ಸಾಗುತ್ತಿಲ್ಲ. ಸದಾಕಾಲ ಇತರೆ ರಾಷ್ಟ್ರಗಳ ಮೇಲೆ ದುಷ್ಕೃತ್ಯವೆಸಗುವುದೇ ಅದಕ್ಕೆ ಮುಖ್ಯವಾಗಿದೆ ಎಂದು ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದೆ.
ಸಿಂಗಾಪುರದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ನಮ್ಮಲ್ಲಿ ನೆರೆ ರಾಷ್ಟ್ರವೊಂದಿದ್ದು, ಅದರ ಹೆಸರು ಪಾಕಿಸ್ತಾನ. ಆದರೆ, ಆ ರಾಷ್ಟ್ರ ಹೆಸರಿಗೆ ತಕ್ಕಂತೆ ಮುನ್ನಡೆಯುತ್ತಿಲ್ಲ. ಕೇವಲ ದುಷ್ಕೃತ್ಯವೆಸಗುವುದೇ ಅದರ ಕೆಲಸವಾಗಿ ಹೋಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದತಿಯನ್ನು ಸಮರ್ಥಿಸಿಕೊಂಡಿರುವ ಅವರು, ಈ ಹಿಂದೆ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಯೋಜಿಸಲಾಗಿರಲಿಲ್ಲ. 370ನೇ ವಿಧಿ ಇದ್ದ ಕಾರಣ ಸಾಕಷ್ಟು ಬದಲಾವಣೆಗಳಿದ್ದವು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾವು ನೀಡಿದ್ದ ಎಲ್ಲಾ ಭರವಸೆಗಳನ್ನು ಒಂದಾದಾಗಿ ಪೂರೈಸುತ್ತಿದ್ದೇವೆ. ಈ ಹಿಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡುವುದಾಗಿ ಭರವಸೆ ನೀಡಿದ್ದೆವು. ಅದನ್ನು ನಾವು ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದ್ದಾರೆ.
370ನೇ ವಿಧಿ ರದ್ಧತಿಗೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕ ವಿಧಾನಸಭೆ, ಪ್ರತ್ಯೇಕ ಧ್ವಜವೊಳಗೊಂಡಿತ್ತು. ಇದೀಗ ಎಲ್ಲದಕ್ಕೂ ಅಂತ್ಯ ಹಾಡಲಾಗಿದೆ. ಭಾರತ ಒಗ್ಗೂಡಿದೆ. ರಾಷ್ಟ್ರೀಯ ಹಿತಾಸಕ್ತಿ ಹಾಗೂ ರಾಷ್ಟ್ರದ ಹೆಮ್ಮೆ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ. ಸರ್ಕಾರ ರಚನೆ ಮಾಡುವಲ್ಲಿ ಮಾತ್ರವೇ ನಾವು ರಾಜಕೀಯ ಮಾಡುವುದಿಲ್ಲ. ರಾಷ್ಟ್ರ ಕಟ್ಟಲು ಮಾಡುತ್ತೇವೆಂದಿದ್ದಾರೆ.
ಹಲವು ವರ್ಷಗಳಿಂದಲೂ ಭಾರತೀಯ ಯೋಧರನ್ನು ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಇತಿಹಾಸದಲ್ಲಿಯೇ 300-350 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
Advertisement