ಪಾಕ್ ಸರ್ಕಾರದ ವಿರುದ್ಧ ಅಜಾದಿ ಮಾರ್ಚ್: ಪ್ರತಿಭಟನೆಗೆ ಹೆದರಿ ರಾಜಿನಾಮೆ ನೀಡುವುದಿಲ್ಲ ಎಂದ ಇಮ್ರಾನ್ ಖಾನ್
ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರದ ವಿರುದ್ಧ ವಿಪಕ್ಷಗಳು ಹಮ್ಮಿಕೊಂಡಿರುವ ಅಜಾದಿ ಮಾರ್ಚ್ ಪ್ರತಿಭಟನೆಗೆ ಹೆದರಿ ತಾವು ರಾಜಿನಾಮೆ ನೀಡುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಹಿರಿಯ ಪತ್ರಕರ್ತರು ಮತ್ತು ವಿಶ್ಲೇಷಕರೊಂದಿಗಿನ ನಡೆದ ಸಭೆಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಜೆಯುಐ-ಎಫ್ ಮುಖ್ಯಸ್ಥ ಫಜ್ಲೂರ್ ರೆಹಮಾನ್ ಅವರ ಪ್ರತಿಭಟನೆಯ ಹಿಂದೆ ದೊಡ್ಡ ಪಿತೂರಿ ಇದೆ. ಇದು ಒಂದು ನಿರ್ದಿಷ್ಟ ಕಾರ್ಯಸೂಚಿಯಿಂದ ಈ ಪ್ರತಿಭಟನೆ ನಡೆಸಲ್ಪಡುತ್ತಿದೆ. ಜಿಯುಐ-ಎಫ್ ನ ಯಾವುದೇ ಒತ್ತಡಕ್ಕೆ ತಾವು ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆಯು ಕಾರ್ಯಸೂಚಿ ಆಧಾರಿತವಾಗಿದ್ದು, ಇದಕ್ಕೆ ವಿದೇಶಿ ಬೆಂಬಲವಿದೆ. ಮೌಲಾನಾ ಅವರ ಸಮಸ್ಯೆ ಏನು ಎಂದು ನನಗೆ ಅರ್ಥವಾಗುತ್ತಿಲ್ಲ. ವಿರೋಧ ಪಕ್ಷದ ಕಾರ್ಯಸೂಚಿ ಏನೆಂಬುದೇ ಅರ್ಥವಾಗುತ್ತಿಲ್ಲ ಎಂದು ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.
ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಆಜಾದಿ ಮಾರ್ಚ್ ಅನ್ನು ಜಿಯುಐ-ಎಫ್ ಮುಖ್ಯಸ್ಥರು ಘೋಷಿಸಿದ್ದು, ನಕಲಿ ಚುನಾವಣೆಗಳ ಮೂಲಕ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದಿದ್ದಾರೆ ಎಂದು ಮುಖಂಡ ರೆಹಮಾನ್ ಆರೋಪಿಸಿದ್ದಾರೆ.