ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಅಂತರಾಷ್ಟ್ರೀಯ ಸಮುದಾಯ ಭಾರತವನ್ನು ನಂಬುತ್ತದೆಯೇ ವಿನಃ ಪಾಕಿಸ್ತಾನವನ್ನಲ್ಲ ಎಂದು ಕೊನೆಗೂ ಪಾಕಿಸ್ತಾನ ತನ್ನ ಸತ್ಯವನ್ನು ಒಪ್ಪಿಕೊಂಡಿದೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಪಾಕಿಸ್ತಾನ ಆಂತರಿಕ ಸಚಿವ ಇಜಾಜ್ ಅಹ್ಮದ್ ಶಾ ಅವರು, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ವ್ಯಾಖ್ಯಾನವನ್ನು ಅಂತರಾಷ್ಟ್ರೀಯ ಸಮುದಾಯ ನಂಬುವುದಿಲ್ಲ. ಕೇವಲ ಭಾರತವನ್ನಷ್ಟೇ ನಂಬುತ್ತದೆ ಎಂದು ಹೇಳಿದ್ದಾರೆ.
ಜನರು ನಮ್ಮನ್ನು ನಂಬುತ್ತಿಲ್ಲ. ಅಂತರಾಷ್ಟ್ರೀಯ ಸಮುದಾಯದಲ್ಲಿ ನಾವು ನೀಡುತ್ತಿರುವ ವ್ಯಾಖ್ಯಾನವನ್ನು ಯಾರೂ ನಂಬುತ್ತಿಲ್ಲ. ಕಾಶ್ಮೀರದಲ್ಲಿ ಕರ್ಫ್ಯೂ ಹಾಕಲಾಗಿದೆ. ಅಲ್ಲಿನ ಜನರಿಗೆ ಔಷಧಿಗಳನ್ನು ನೀಡಲಾಗುತ್ತಿಲ್ಲ. ಜನರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಆಹಾರ ನೀಡಲಾಗುತ್ತಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆದರೆ, ಅದನ್ನು ಯಾರೂ ನಂಬುತ್ತಿಲ್ಲ. ಎಲ್ಲರೂ ಭಾರತವನ್ನೇ ನಂಬುತ್ತಿದ್ದಾರೆ. ದೇಶದಲ್ಲಿ ಆಡಳಿತ ನಡೆಸುತ್ತಿರುವವರು ದೇಶದ ವರ್ಚಸ್ಸು ಹಾಗೂ ಹೆಸರನ್ನು ನಾಶಪಡಿಸಿದ್ದಾರೆ. ನಾವು ಸೋತಿದ್ದೇವೆ. ನಮ್ಮದು ಜವಾಬ್ದಾರಿಯುತ ದೇಶವಲ್ಲ ಎಂದು ಹೇಳುತ್ತಿದ್ದಾರೆಂದು ಹೇಳಿದ್ದಾರೆ.
ದೇಶದ ವರ್ಚಸ್ಸು ಹಾಳಾಗಲು ಇಮ್ರಾನ್ ಖಾನ್, ಬೆನಜೀರ್ ಭುಟ್ಟೋ, ಪರ್ವೇಜ್ ಮುಷರಫ್ ಕಾರಣರೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಇದು ಕೇವಲ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಪಾಕಿಸ್ತಾನದಲ್ಲಿರುವ ಪ್ರತೀಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
Advertisement