ವಿಶ್ವಸಂಸ್ಥೆ : ಭಾರತ – ಪಾಕ್ ನಡುವೆ ಉದ್ವಿಗ್ನತೆಗೆ ಕಾರಣವಾಗಿರುವ ಜಮ್ಮು ಮತ್ತು ಕಾಶ್ಮೀರದ ವಿವಾದ ಮತ್ತೊಮ್ಮೆ ವಿಶ್ವಸಂಸ್ಥೆಯ ಪ್ರಧಾನ ವೇದಿಕೆಯಲ್ಲಿ ಇಂದು ಪ್ರಸ್ತಾಪವಾಗಿ ಭಾರತ – ಪಾಕ್ ನಡುವೆ ಜುಗಲ್ ಬಂದಿಗೆ ಕಾರಣವಾಗಲಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 6.30 ರ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ 74ನೇ ಮಹಾಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಒಂದು ವಾರಗಳ ಅಮೆರಿಕ ಪ್ರವಾಸ ಮುಕ್ತಾಯವಾಗಲಿದೆ.
ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ ಬಡತನ ನಿರ್ಮೂಲನೆ ಮತ್ತು ಆರೋಗ್ಯ ಸುಧಾರಣೆಗೆ ಕೈಗೊಂಡ ಕ್ರಮಗಳನ್ನು ಮೋದಿ ಇಂದಿನ ಭಾಷಣದಲ್ಲಿ ಪ್ರಸ್ತಾಪ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮೊದಲಾದ ಸಮಸ್ಯೆಗಳ ನಿವಾರಣೆಗೆ ತಮ್ಮ ಸರ್ಕಾರದ ಉಪಕ್ರಮಗಳ ಮೇಲೆ ಪ್ರಧಾನಿ ಬೆಳಕು ಚೆಲ್ಲಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಬಯಕೆ ಕುರಿತೂ ಪ್ರಧಾನಿ ಮಾತನಾಡಲಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಹುತೇಕ ಅಂತಾರಾಷ್ಟ್ರೀಯ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ವೃದ್ಧಿಸಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಮೋದಿ ಅವರು ಭಾಷಣ ಮಾಡಿದ ಕೆಲವೇ ಗಂಟೆಗಳ ಅವಧಿಯ ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅದೇ ವೇದಿಕೆಯಲ್ಲಿ ಅದೇ ಜಾಗದಲ್ಲಿ ಭಾಷಣ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರೂ ಸಹ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡುವ ಸಾಧ್ಯತೆ ದಟ್ಟವಾಗಿದ್ದು ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರದ ವಿಷಯ ಭಾರತ ಮತ್ತು ಪಾಕ್ ನಡುವೆ ಮತ್ತೊಮ್ಮೆ ಜುಗಲ್ ಬಂದಿಗೆ ಕಾರಣವಾಗಲಿದೆ. ಇಬ್ಬರು ಪರಸ್ಪರ ವಿರೋಧಿಗಳು ಒಂದೇ ವೇದಿಕೆಯಲ್ಲಿ ಮಾತನಾಡಲಿರುವ ಅಪರೂಪದ ಘಟನೆಗೆ ನ್ಯೂಯಾರ್ಕ್ ಸಾಕ್ಷಿಯಾಗಲಿದೆ.
ವಿಶ್ವಸಂಸ್ಥೆ ಅಧಿವೇಶನದ ನೇಪಥ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಧಾನಮಂತ್ರಿಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ
Advertisement