ಸಿಂಗಾಪುರ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸಿಂಗಾಪುರ ಕೂಡ ತತ್ತರಿಸಿ ಹೋಗಿದ್ದು, ನಿನ್ನೆ ಒಂದೇ ದಿನ ಸಿಂಗಾಪುರದಲ್ಲಿ 233 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ 59 ಮಂದಿ ಭಾರತೀಯರಲ್ಲೂ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಿಂಗಾಪುರದಲ್ಲಿ ಭಾನುವಾರ 233 ಹೊಸ ಪ್ರಕರಣ ದಾಖಲಾಗಿದ್ದು, ಈ ಪೈಕಿ 59 ಭಾರತೀಯರಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಈ ಮೂಲಕ ಸಿಂಗಾಪುರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,532ಕ್ಕೆ ಏರಿಕೆ ಆಗಿದೆ. 233 ಸೋಂಕಿತರ ಪೈಕಿ 51 ಜನರು ಒಂದೇ ಕಡೆ ಸೇರಿದ್ದರು. ಹೀಗಾಗಿ ಇವರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಇನ್ನು, 15 ಮಂದಿ ಕೊರೋನಾ ಸೋಂಕಿತರ ಜೊತೆ ನೇರ ಸಂಪರ್ಕ ಹೊಂದಿದ್ದರು. ಆದರೆ, ಉಳಿದ 167 ಮಂದಿ ಯಾರ ಜೊತೆ ಸಂಪರ್ಕದಲ್ಲಿದ್ದರು, ಅವರಿಗೆ ಕೊರೋನಾ ವೈರಸ್ ಅಂಟಿದ್ದು ಹೇಗೆ ಎನ್ನುವುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ.
ಕೊರೊನಾ ಪೀಡಿತರು ಪಂಚತಾರಾ ಕ್ಯಾಸಿನೋ ರೆಸ್ಟೋರೆಂಟ್, ಮೆಕ್ಡಿ ಸೇರಿ ವಿವಿಧ ಭಾಗಗಳಲ್ಲಿ ಇವರು ಸುತ್ತಾಟ ನಡೆಸಿದ್ದರು. ಈ ವೇಳೆ ಕೊರೋನಾ ವೈರಸ್ ಹರಡಿದೆ ಎನ್ನಲಾಗಿದೆ. ಸದ್ಯ, ಸಿಂಗಾಪುರದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಆದಾಗ್ಯೂ, ಈ ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ. ಸದ್ಯ, ಉತ್ತಮ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ.
ಅಂತೆಯೇ ಸಿಂಗಾಪುರಲ್ಲಿ ಪ್ರಸ್ತುತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2,532ಕ್ಕೆ ಏರಿಕೆಯಾಗಿದೆ. ಅಂತೆಯೇ ಸೋಂಕಿತರ ಪೈಕಿ ಈ ವರೆಗೂ ಸಿಂಗಾಪುರದಲ್ಲಿ 8 ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಸಿಂಗಾಪುರದಲ್ಲಿ 976 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಈ ಪೈಕಿ 31 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 988 ಮಂದಿ ರೋಗಿಗಳನ್ನು ಸಾಮಾನ್ಯ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೆಗಾ ಮುಸ್ತಾಫಾ ಸೆಂಟರ್ ಗೆ ತೆರಳಿದ್ದ ನಾಲ್ಕು ಭಾರತೀಯರಲ್ಲಿ ಸೋಂಕು ದೃಢವಾಗಿದ್ದು, ಆ ಮೂಲಕ ಸಿಂಗಾಪುರದಲ್ಲಿ ವೈರಸ್ ಗೆ ತುತ್ತಾದ ಭಾರತೀಯರ ಮೂಲದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಿಂಗಾಪುರದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಾಸ್ಕ್, ಗ್ಲೌವ್ಸ್ ಮತ್ತು ಸ್ಯಾನಿಟೈಸರ್ ಗಳ ಬಳಕೆ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯವಾಗಿದ್ದು, ಮಾಸ್ಕ್ ಮತ್ತು ಗ್ಲೌೈಸ್ ಧರಿಸದ ಸಿಬ್ಬಂದಿಗಳು ಕೆಲಸ ಮಾಡದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಸಿಂಗಾಪುರದಲ್ಲಿ ಭಾಗಶಃ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಮನೆಯಿಂದ ಹೊರಬರುವಂತೆ ಸೂಚಿಸಲಾಗಿದೆ.
ಇನ್ನು, ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿದೆ. ಇಡೀ ವಿಶ್ವದಲ್ಲಿ 18.5 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್ನಿಂದ 1.14 ಲಕ್ಷ ಮಂದಿ ಅಸುನೀಗಿದ್ದಾರೆ. ಹೀಗಾಗಿ ಕೊರೋನಾ ಅಟ್ಟಹಾಸ ಸದ್ಯದ ಮಟ್ಟಿಗಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರವಾಗುತ್ತಿಲ್ಲ.
Advertisement