ಸೇನಾಧಿಕಾರಿ ಹತ್ಯೆ: ರಕ್ತಪಾತ ಸಹಿತ ಪ್ರತೀಕಾರಕ್ಕೆ ಸಜ್ಜು, ಮಸೀದಿ ಮೇಲೆ ಕೆಂಪು ಬಾವುಟ ಹಾರಿಸಿದ ಇರಾನ್

ಇರಾನ್ ಸೇನೆಯ ಪ್ರಮುಖ ಕಮಾಂಡರ್ ಸುಲೈಮಾನಿ ಅವರನ್ನು ಅಮೆರಿಕಾ ಹತ್ಯೆ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಅಮೆರಿಕಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ತುದಿಗಾಲಲ್ಲಿ ನಿಂತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೆಹ್ರಾನ್: ಇರಾನ್ ಸೇನೆಯ ಪ್ರಮುಖ ಕಮಾಂಡರ್ ಸುಲೈಮಾನಿ ಅವರನ್ನು ಅಮೆರಿಕಾ ಹತ್ಯೆ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಅಮೆರಿಕಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ತುದಿಗಾಲಲ್ಲಿ ನಿಂತಿದೆ. 

ಇದರಂತೆ ಪ್ರತಿದಾಳಿ ನಡೆಸುವ ಸಲುವಾಗಿ ಅಮೆರಿಕಾ ರಾಷ್ಟ್ರದ ವಿವಿಧ 35 ತಾಣಗಳನ್ನು ಗುರುತಿಸಿರುವ ಇರಾನ್, ಪ್ರತೀಕಾರದ ದ್ಯೋತಕವಾಗಿ ತನ್ನ ಮಸೀದಿಯೊಂದರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸಿದೆ. 

ಶಿಯಾ ಸಂಪ್ರದಾಯದ ಪ್ರಕಾರ, ಈ ರೀತಿ ಮಸೀದಿ ಮೇಲೆ ಕೆಂಪುಬಾವುಟ ಹಾರಿಸುವುದು ರಕ್ತಪಾತ ಸಹಿತ ಪ್ರತೀಕಾರ ತೆಗೆದುಕೊಳ್ಳುವುದರ ಸೂಚನೆಯಾಗಿದೆ. 

ತಮ್ಮ ತಂದೆಯ ರಕ್ತಕ್ಕೆ ಯಾರು ಪ್ರತೀಕಾರ ತೀರಿಸಿಕೊಳ್ಳುತ್ತಾರೆಂದು ಸುಲೈಮಾನಿಯವರ ಪುತ್ರಿ ಇರಾನ್ ಅಧ್ಯಕ್ಷ ರೌಹಾನಿಯವರನ್ನು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೌಹಾನಿಯವರು, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆಂದು ಆಕೆಗೆ ಧೈರ್ಯ ತುಂಬಿದ್ದಾರೆಂದು ವರದಿಗಳು ತಿಳಿಸಿವೆ. 

ಇದರ ಬೆನ್ನಲ್ಲೇ ಅಮೆರಿಕಾದ 35 ಪ್ರಮುಖ ಆಸ್ತಿಗಳನ್ನು ಇರಾನ್ ಗುರುತಿಸಿದೆ. ಅಲ್ಲದೆ, ಟೆಹ್ರಾನ್ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಖೋಮ್ ನಗರದಲ್ಲಿರುವ ಜಮಕರನ್ ಮಸೀದಿಯಲ್ಲಿನ ಪವಿತ್ರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸುವ ಮೂಲಕ ಪ್ರತೀಕಾರ ಕೈಗೊಳ್ಳುವ ಕುರಿತು ಬಹಿರಂಗ ಸಂದೇಶ ರವಾನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com