ಕಾಶ್ಮೀರ ವಿವಾದ ಅಂತ್ಯ ಕಾಣದ ಹೊರತು ಭಾರತದೊಂದಿಗೆ ಶಾಂತಿಯುತ ಮಾತುಕತೆ ಸಾಧ್ಯವಿಲ್ಲ: ಪಾಕಿಸ್ತಾನ
ವಾಷಿಂಗ್ಟನ್: ಕಾಶ್ಮೀರ ವಿವಾದ ಅಂತ್ಯ ಕಾಣದ ಹೊರತು ಭಾರತದೊಂದಿಗೆ ಯಾವುದೇ ಕಾರಣಕ್ಕೂ ಶಾಂತಿಯುತ ಮಾತುಕತೆ ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ ಹೇಳಿದ್ದಾರೆ.
ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ ನ್ಯಾಷನಲ್ ಸ್ಟಡೀಸ್ (ಸಿಎಸ್ಐಎಸ್) ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕಾಶ್ಮೀರ ವಿವಾದ ಅಂತ್ಯ ಕಾರಣದ ಹೊರತು ಭಾರತದೊಂದಿಗೆ ಶಾಂತಿಯುತ ಮಾತುಕತೆ ಸಾಧ್ಯವಿಲ್ಲ. ವಿವಾದ ಬಗೆಹರಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಹೇಳಿದ್ದಾರೆ.
ನೆರೆರಾಷ್ಟ್ರದೊಂದಿಗೆ ನಮ್ಮ ಸರ್ಕಾರ ಶಾಂತಿಯನ್ನು ಬಯಸುತ್ತಿದ್ದೆ. ಆರ್ಥಿಕ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ನಮ್ಮದೇಶೀಯ ಕಾರ್ಯಸೂಚಿಯನ್ನು ಸಾಧಿಸುವತ್ತ ಗಮನಹರಿಸಲು ನಮಗೆ ಶಾಂತಿಯ ಅಗತ್ಯವಿದೆ. ಆದರೆ, ಶಾಂತಿಗಾಗಿ ನಾವು ಭಾರತಕ್ಕೆ ಯಾವುದೇ ಬೆಲೆಯನ್ನೂ ತೆರುವುದಿಲ್ಲ. ನಮ್ಮ ಗೌರವವನ್ನೂ ನಾವು ಬಿಡುವುದಿಲ್ಲ. ಕಾಶ್ಮೀರ ವಿವಾದ ಅಂತ್ಯ ಕಾಣದ ಹೊರತು ನಾವು ಭಾರತದೊಂದಿಗೆ ಶಾಂತಿ ಬಯಸುವುದಿಲ್ಲ.
ದೇಶದಲ್ಲಿರುವ ಬಡತನ ಹಾಗೂ ಹಸಿವಿನ ವಿರುದ್ಧ ಹೋರಾಡುವ ಬದಲು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಆರ್ಎಸ್ಎಸ್ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ. ಆಗಸ್ಟ್ 5 ರಂದು ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ರದ್ದುಪಡಿಸಿತ್ತು. ಇದರಿಂದ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘನೆ ಮಾಡಿದೆ. ಕಾಶ್ಮೀರ ತಮ್ಮ ಆಂತರಿಕ ವಿಚಾರವೆಂದು ಭಾರತ ಹೇಳುತ್ತಿದೆ. ಹಾಗೆಯೇ ಆಗಿದ್ದರೆ, ಫ್ರೆಂಚ್ ಅಧ್ಯಕ್ಷರೇಕೆ ಭಾರತದ ಪ್ರಧಾನಮಂತ್ರಿಗಳೊಂದಿಗೆ ಕಾಶ್ಮೀರ ವಿಚಾರ ಕುರಿತು ಮಾತುಕತೆ ನಡೆಸಿದ್ದಾರೆ? ಕಾಶ್ಮೀರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಅವರು ಪದೇ ಪದೇ ಹೇಳುತ್ತಾರೆ. ಅದನ್ನು ನಾವು ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.