ಕಠ್ಮಂಡು: ರಾಜೀನಾಮೆಯ ಆಗ್ರಹದ ಒತ್ತಡದ ನಡುವೆ ದೇಶವನ್ನುದ್ದೇಶಿಸಿ ಮಾತನಾಡಿರುವ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಓಲಿ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಸಹಜ, ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮತ್ತಷ್ಟು ಸಮಯ ತೆಗೆದುಕೊಳ್ಳುವ ನಿಟ್ಟಿನಲ್ಲಿ, ಶುಕ್ರವಾರ ನಡೆಯಬೇಕಿದ್ದ ಆಡಳಿತ ಪಕ್ಷ ನೇಪಾಳ ಕಮ್ಯುನಿಸ್ಟ್ ಪಕ್ಷದ ಮಹತ್ವದ ಸಭೆಯನ್ನು ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳದಲ್ಲಿ ರಾಜಕಿಯ ಅಸ್ಥಿರತೆ ಉಂಟಾಗಿದ್ದು, ದಿಢೀರ್ ದೇಶವನ್ನುದ್ದೇಶಿಸಿ ಮಾತನಾಡಿರುವ ಕೆ.ಪಿ ಶರ್ಮಾ ಓಲಿ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ತಳ್ಳಿಹಾಕಿರುವುದೂ ಅಲ್ಲದೇ, ಇಂತಹ ಆಂತರಿಕ ಭಿನ್ನಾಭಿಪ್ರಾಯಗಳು ಸಹಜ, ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ನೇಪಾಳದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಬದ್ಧ ಎಂದು ನೇಪಾಳ ಪ್ರಧಾನಿ ದೇಶದ ಜನತೆಗೆ ತಿಳಿಸಿದ್ದಾರೆ. ಸ್ವಪಕ್ಷೀಯರಿಂದಲೇ ರಾಜೀನಾಮೆಗೆ ಆಗ್ರಹ, ನೇಪಾಳ ಕಮ್ಯುನಿಸ್ಟ್ ಪಕ್ಷದ ಸ್ಥಾಯಿಸಮಿತಿ ಸಭೆ ಸತತ ನಾಲ್ಕನೇ ಬಾರಿಗೆ ಒಂದು ವಾರಗಳ ಕಾಲ ಮುಂದೂಡಲ್ಪಟ್ಟಿರುವ ಬೆಳವಣಿಗೆಗಳ ಬೆನ್ನಲ್ಲೇ ನೇಪಾಳ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. 45 ಸದಸ್ಯರುಳ್ಳ ಎನ್ ಸಿಪಿ ಸ್ಥಾಯಿಸಮಿತಿ ಸಭೆ ಶುಕ್ರವಾರ ನಡೆಯಬೇಕಿತ್ತು. ಆದರೆ ಪ್ರವಾಹ ಹಾಗೂ ಭೂಕುಸಿತಗಳಿಂದ 22 ಜನರು ಸಾವನ್ನಪ್ಪಿರುವುದನ್ನು ಮುಂದಿಟ್ಟುಕೊಂಡು ಕೊನೆಯ ಘಳಿಗೆಯಲ್ಲಿ ಒಂದು ವಾರಗಳ ಕಾಲ ಮುಂದೂಡಲಾಯಿತು.
ಭಾರತದೊಂದಿಗೆ ನೇಪಾಳದ ಗಡಿ ವಿವಾದ ಹಾಗೂ ಆ ನಂತರದ ಪರಿಸ್ಥಿತಿಗಳಲ್ಲಿ ನೇಪಾಳದ ಪ್ರಧಾನಿ ನೀಡಿದ್ದ ಭಾರತ ವಿರೋಧಿ ಹೇಳಿಕೆಗಳನ್ನು ಖಂಡಿಸಿ ಪ್ರಧಾನಿಯವರ ಸ್ವಪಕ್ಷೀಯರಾದ ಮಾಜಿ ಪ್ರಧಾನಿ ಪುಷ್ಪಕಮಲ್ ದಹಲ್ (ಪ್ರಚಂಡ) ಸೇರಿದಂತೆ ಹಲವು ನಾಯಕರು ಕೆಪಿ ಶರ್ಮಾ ಓಲಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
Advertisement