ಭಾರತೀಯ ರಾಯಭಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ: ಆರೋಪ ನಿರಾಕರಿಸಿದ ಪಾಕಿಸ್ತಾನ

ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಅಪಹರಿಸಿ, ಅವರ ಮೇಲೆ ದೌರ್ಜನ್ಯ ನಡೆಸಿದ ಭಾರತದ ಆರೋಪವನ್ನು ಪಾಕಿಸ್ತಾನ ಬುಧವಾರ ನಿರಾಕರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಅಪಹರಿಸಿ, ಅವರ ಮೇಲೆ ದೌರ್ಜನ್ಯ ನಡೆಸಿದ ಭಾರತದ ಆರೋಪವನ್ನು ಪಾಕಿಸ್ತಾನ ಬುಧವಾರ ನಿರಾಕರಿಸಿದೆ. 

ಭಾರತೀಯ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಅಪಹರಿಸಿದ್ದ ಪಾಕಿಸ್ತಾನ, ಅವರನ್ನು 12 ತಾಸುಗಳ ಬಳಿಕ ಬಿಡುಗಡೆ ಮಾಡಿತ್ತು. 

ತನ್ನ ವಶದಲ್ಲಿದ್ದ ಆ ಇಬ್ಬರು ಅಧಿಕಾರಿಗಳ ಮೇಲೆ ದೌರ್ಜನ್ಯವೆಸಗಿದ್ದ ಪಾಕಿಸ್ತಾನದ ಅಧಿಕಾರಿಗಳು, ಕೊಳಕು ನೀರನ್ನು ಕುಡಿಸಿತ್ತು. ಕಚೇರಿಗೆ ಇಬ್ಬರು ಸಿಬ್ಬಂದಿಗಳು ತೆರಳುತ್ತಿದ್ದ ವೇಳೆ, ಪೆಟ್ರೋಲ್ ಬಂಕ್ ಒಂದರಲ್ಲಿ 6 ವಾಹನಗಳಲ್ಲಿ ಬಂದ 15-16 ಬಂದೂಕುಧಾರಿ ವ್ಯಕ್ತಿಗಳು ಇಬ್ಬರೂ ಅಧಿಕಾರಿಗಳ ಕಣ್ಣುಕಟ್ಟಿ, ಮುಖದ ಮೇಲೆ ಚೀಲ ಹಾಕಿದ್ದರು. ಬಳಿಕ ಕೈಕೋಳ ತೊಡಿಸಿ ಅಜ್ಞಾತ ಸ್ಥಳಕ್ಕೆ ಅಪಹರಿಸಿದ್ದರು. 

6 ತಾಸು ಆ ಅಜ್ಞಾತಸ್ಥಳದಲ್ಲಿ ವಿಚಾರಣೆ ನಡೆಸಿದ್ದರು. ಈ ವೇಳೆ ಕಟ್ಟಿಗೆ, ಕಬ್ಬಿಣದ ಸರಳುಗಳಿಂದ ಹೊಡೆದು, ಕೊಳಕು ನೀರು ಕುಡಿಸಿದ್ದರು ಎಂದು ಹೇಳಲಾಗುತ್ತಿದೆ. 

ವಿಚಾರಣೆ ವೇಳೆ ನೀವು ಅಪಘಾತ ಎಸಗಿದ್ದೀರಿ ಎಂದು ಒಪ್ಪಿಕೊಳ್ಳಿ ಎಂದು ಬಲವಂತಪಡಿಸಿ, ಚಿತ್ರೀಕರಣ ಮಾಡಿಕೊಂಡರು. ಅಲ್ಲದೆ, ಕಚೇರಿಯ ಕೆಲಸಗಳ ರಹಸ್ಯಗಳನ್ನು ತಿಳಿದುಕೊಳ್ಳಲು ಯತ್ನಿಸಿದ್ದು, ಮುಂದಿನ ದಿನಗಳಲ್ಲಿ ರಾಯಭಾರಿ ಕಚೇರಿಯ ಇತರೆ ಅಧಿಕಾರಿಗಳಿಗೂ ಇದೇ ಗತಿ ಬರಲಿದೆ ಎಂದೂ ಬೆದರಿಕೆ ಹಾಕಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಈ ಘಟನೆಗೆ ಭಾರತ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು, ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು. 

ಘಟನೆ ಬಳಿಕ ಸೋಮವಾರ ರಾತ್ರಿ ಇಬ್ಬರೂ ಅಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿಗೆ ಮರಳಿದ್ದಾರೆ. ಆದರೆ, ದೇಹದ ಮೇಲೆ ಏಟು ತಿಂದ ಗುರುತುಗಳು ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ.  

ಭಾರತದ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಇದೊಂದು ಆಧಾರ ರಹಿತ ಆರೋಪವಾಗಿದೆ. ಹಿಟ್ ಆ್ಯಂಡ್ ರನ್ ಕೇಸ್ ಅಡಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ನಂತರ ಆ ಇಬ್ಬರೂ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು ಎಂದು ತಿಳಿದ ಬಳಿಕ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದೆ. 

ಆರೋಪ ಕುರಿತು ಪಾಕಿಸ್ತಾನದ ವಿದೇಶಾಂಗ ಕಚೇರಿಯು ಹೇಳಿಕೆ ನೀಡಿದ್ದು, ಸತ್ಯವನ್ನು ತಿರುಚುವ ಯತ್ನ ಇದಾಗಿದ್ದು, ಅಧಿಕಾರಿಗಳ ಅಪರಾಧವನ್ನು ನಿರಾಕರಿಸುವುದೂ ಕೂಡ ಕಾನೂನು ಬಾಹಿರವಾಗಿದೆ ಎಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com