ನವದೆಹಲಿ: ಗಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ಆಕ್ರೋಶಗೊಂಡಿರುವ ಭಾರತ ಜಾಗತಿಕ ವೇದಿಕೆಯಲ್ಲಿ ತನ್ನ ಅಸಮಾಧಾನವನ್ನು ಹೊರ ಹಾಕಿದೆ.
ರಷ್ಯಾ-ಭಾರತ-ಚೀನಾ (ಆರ್ಐಸಿ) ವಿದೇಶಾಂಗ ಸಚಿವರ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು, ಗಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಭಾರತದ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಪರೋಕ್ಷವಾಗಿ ಚೀನಾ ಕುರಿತಂತೆ ಮಾತನಾಡಿದ ಜೈ ಶಂಕರ್, ಅಂತಾರಾಷ್ಟ್ರೀಯ ಕಾನೂನು ಗೌರವಿಸಿ, ಬಹುಪಕ್ಷೀಯತೆಯನ್ನು ಬೆಂಬಲಿಸಿದರೆ ಮಾತ್ರ ಉತ್ತಮ ಜಗತ್ತು ನಿರ್ಮಾಣ ಸಾಧ್ಯ ಎಂದು ಹೇಳಿದ್ದಾರೆ.
'ವಿಶ್ವದ ಪ್ರಮುಖ ಧ್ವನಿಗಳು ಎಲ್ಲ ರೀತಿಯಲ್ಲೂ ಮತ್ತೊಬ್ಬರಿಗೆ ಉದಾಹರಣೆಯಾಗಿರಬೇಕು. ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುವುದು, ಪಾಲುದಾರರ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಗುರುತಿಸುವುದು, ಬಹುಪಕ್ಷೀಯತೆಯನ್ನು ಬೆಂಬಲಿಸುವುದು ಮತ್ತು ಸಾಮಾನ್ಯ ಉತ್ತಮ ಕಾರ್ಯಗಳನ್ನು ಉತ್ತೇಜಿಸುವುದು ಉತ್ತಮ ಜಗತ್ತಿನ ನಿರ್ಮಾಣದ ಕ್ರಮವಾಗಿದೆ. 2ನೇ ಮಹಾ ಯುದ್ಧದ ನಂತರ ಜಾಗತಿಕ ಕ್ರಮದಲ್ಲಿ ಭಾರತಕ್ಕೆ ಸರಿಯಾದ ಮಾನ್ಯತೆ ದೊರೆತಿಲ್ಲ. ಅಲ್ಲದೆ ಕಳೆದ 75 ವರ್ಷಗಳಿಂದ ಭಾರತಕ್ಕಾದ ಐತಿಹಾಸಿಕ ಅನ್ಯಾಯವನ್ನು "ಸರಿಪಡಿಸಿಲ್ಲ" ಎಂದೂ ಜೈ ಶಂಕರ್ ಪರೋಕ್ಷವಾಗಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಷ್ಯಾದ ವಿಕ್ಟರಿ ಡೇ ಪರೇಡ್ನಲ್ಲಿ ಭಾರತದ ಸೇನಾ ತಂಡವು ರೆಡ್ ಸ್ಕ್ವೇರ್ ನಲ್ಲಿ ಪರೇಡ್ ನಡೆಸಿದೆ ಎಂದರೆ ವಿಶ್ವ ರಾಜಕೀಯದಲ್ಲಿ ಭಾರತ ಮಾಡಿರುವ ಸಾಧನೆಯನ್ನು ತೋರಿಸುತ್ತದೆ. ತ್ಯಾಗ ಮತ್ತು ಬಲಿದಾನದ ಮೂಲಕ ಅನೇಕ ದೇಶಗಳು ನಾಜಿಸಂ ಮತ್ತು ಫ್ಯಾಸಿಸಂ ವಿರುದ್ಧ ವಿಜಯ ಸಾಧಿಸಿವೆ. ಈ ವಿಜಯದಲ್ಲಿ ಭಾರತದ ಪಾತ್ರ ಮಹತ್ತರವಾಗಿದ್ದು, ಭಾರತದ 2.3 ಮಿಲಿಯನ್ ನಾಗರಿಕರು ಶಸ್ತ್ರಾಸ್ತ್ರ ಹಿಡಿದಿದ್ದರು ಮತ್ತು 14 ಮಿಲಿಯನ್ ಜನರು ಯುದ್ಧದ ಸಂದರ್ಭದಲ್ಲಿ ಉತ್ಪಾದನಾ ವಲಯದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ವಿಶ್ವ ಯುದ್ಧಭೂಮಿಗಳಾಗಿದ್ದ ಟೋಬ್ರೂಕ್, ಎಲ್ ಅಲಮೈನ್ ಮತ್ತು ಮಾಂಟೆಕಾಸ್ಸಿನೊದಿಂದ ಸಿಂಗಾಪುರ, ಕೊಹಿಮಾ ಮತ್ತು ಬೊರ್ನಿಯೊವರೆಗೂ ಭಾರತೀಯ ಯೋಧರ ರಕ್ತ ಚೆಲ್ಲಿದೆ. ವಿಶ್ವಯುದ್ಧದಲ್ಲಿ ಭಾರತದ ನಿರ್ಣಾಯಕ ಪಾತ್ರ ನಿರ್ವಹಿಸಿತ್ತು ಎಂಬುದಕ್ಕೆ ಸಾಕ್ಷಿ ಎಂದು ಜೈ ಶಂಕರ್ ಹೇಳಿದರು.
Advertisement