ವಾಷಿಂಗ್ಟನ್: ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿಯನ್ನು ಸದ್ಯಕ್ಕೆ ಭಾರತಕ್ಕೆ ಹಸ್ತಾಂತರ ಮಾಡಲು ಸಾಧ್ಯವಿಲ್ಲ. ಅಮೆರಿಕದಲ್ಲೇ ಅತನ ವಿಚಾರಣೆ ನಡೆಯಲಿದೆ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ.
ಅಮೆರಿಕದಲ್ಲಿ ಬಂಧಿತನಾಗಿರುವ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಡೇವಿಡ್ ಹೆಡ್ಲಿಯ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಇಂದು ನಡೆದ ವಿಚಾರಣೆಯಲ್ಲಿ ಅಮೆರಿಕದ ವಕೀಲರು ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ವಾದ ಮಂಡಿಸಿದ ಅವರು, 'ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರಿಸಲಾಗದು. ಆದರೆ, ಪ್ರಕರಣದ ಸಹ ಸಂಚುಕೋರ, ಪಾಕಿಸ್ತಾನ ಮೂಲದ ಕೆನಡಾದ ವ್ಯಾಪಾರಿ ತಹಾವುರ್ ರಾಣಾ, ಹಸ್ತಾಂತರ ಕುರಿತ ವಿಚಾರಣೆಯನ್ನು ಎದುರಿಸಬೇಕು’ ಎಂದು ಅಮೆರಿಕದ ವಕೀಲ ಜಾನ್ ಜೆ ಲುಲೆಜಿಯಾನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಂತೆಯೇ ರಾಣಾನ ಜಾಮೀನು ಅರ್ಜಿಗೆ ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಣಾನನ್ನು ‘ತಲೆಮರೆಸಿಕೊಂಡ ಆರೋಪಿ’ ಎಂದು ಭಾರತ ಘೋಷಿಸಿದ್ದು, ಡೇವಿಡ್ ಹೆಡ್ಲಿಯ ಬಾಲ್ಯದ ಸ್ನೇಹಿತ, 2008ರ ಮುಂಬೈ ದಾಳಿ ಪ್ರಕರಣದ ಸಹ ಸಂಚುಕೋರ ತಹಾವುರ್ ರಾಣಾನನ್ನು (59) ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ ಜೂನ್ 10ರಂದು ಲಾಸ್ ಏಂಜಲಿಸ್ ಪಟ್ಟಣದಲ್ಲಿ ಆತನನ್ನು ಪುನಃ ಬಂಧಿಸಲಾಗಿತ್ತು.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ–ತೊಯ್ಬಾ ಗೂ ಹರ್ಕತ್ ಉಲ್–ಜಿಹಾದ್ ಎ–ಇಸ್ಲಾಮಿ ಸಂಘಟನೆಗಳು ಮುಂಬೈ ದಾಳಿಯ ಸಂಚು ರೂಪಿಸಿದ್ದವು. ಈ ದಾಳಿ ಯೋಜನೆಗೆ ರಾಣಾ ಹಾಗೂ ಹೆಡ್ಲಿ 2006ರಿಂದ 2008ರವರೆಗಿನ ಅವಧಿಯಲ್ಲಿ ಈ ಸಂಘಟನೆಗಳಿಗೆ ನೆರವಾಗಿದ್ದರು. ಈ ದಾಳಿಯಲ್ಲಿ 6 ಅಮೆರಿಕನ್ನರೂ ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದೇ ಪ್ರಕರಣದಲ್ಲಿ ಹೆಡ್ಲಿಯನ್ನು ಸರ್ಕಾರದ ಪರ ಸಾಕ್ಷಿಯದಾರನನ್ನಾಗಿಸಲಾಗಿತ್ತು. ಪ್ರಸಕ್ತ ಆತ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ರಾಣಾನನ್ನು ಹಸ್ತಾಂತರಿಸಬೇಕೆಂಬ ಭಾರತದ ಮನವಿಯ ವಿಚಾರಣೆಯನ್ನು ಅಮೆರಿಕ ಇನ್ನೂ ಆರಂಭಿಸಿಲ್ಲ. ಆದರೆ, ಶೀಘ್ರದಲ್ಲೇ ಅದನ್ನು ಅರಂಭಿಸುವ ನಿರೀಕ್ಷೆ ಇದೆ ಎಂದು ಭಾರತದ ಪರ ವಕೀಲರು ಹೇಳಿದ್ದಾರೆ.
Advertisement