ಇಮ್ರಾನ್ ಖಾನ್ ಭಾಷಣದಲ್ಲಿನ ಟೀಕೆಯನ್ನು ವಿರೋಧಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ ಹೊರನಡೆದ ಭಾರತ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದಲ್ಲಿ ಭಾರತದ ಕುರಿತ ಟೀಕೆಗಳನ್ನು ವಿರೋಧಿಸಿ ಭಾರತ ಸಭೆಯಿಂದ ಹೊರನಡೆದಿದೆ.
ಅಸೆಂಬ್ಲಿ ಚೇಂಬರ್ ನಲ್ಲಿ ಕುಳಿತಿದ್ದ ಫಸ್ಟ್ ಸೆಕ್ರೆಟರಿ ಮಿಜಿತೋ ವಿನಿತೋ ಪಾಕ್ ಪ್ರಧಾನಿಯ ಭಾಷಣ ಪ್ರಾರಂಭವಾಗಿ ಭಾರತದೆಡೆಗೆ ಟೀಕಾ ಪ್ರಹಾರ ನಡೆಸುತ್ತಿದ್ದಂತೆಯೇ ಸಭೆಯಿಂದ ಎದ್ದು ಹೊರನಡೆದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರ್ ಎಸ್ಎಸ್ ನ್ನು ಗುರಿಯಾಗಿರಿಸಿಕೊಂಡು ಭಾರತವನ್ನು ಟೀಕಿಸಲು ಮುಂದಾದರು.
ಈ ಕುರಿತು ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ "ಇಮ್ರಾನ್ ಖಾನ್ ಅವರ ಹೇಳಿಕೆಗಳನ್ನು ಯುದ್ಧೋನ್ಮತ್ತ ಹಾಗೂ ಅಸ್ಪಷ್ಟತೆಯಿಂದ ಕೂಡಿದವಾಗಿವೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರ ಪ್ರೀ ರೆಕಾರ್ಡೆಡ್ ವಿಡಿಯೋವನ್ನು ಪ್ರಸಾರ ಮಾಡಲಾಗಿತ್ತು. 34 ನಿಮಿಷಗಳ ಭಾಷಣದಲ್ಲಿ ಬಹುತೇಕ ಮೂರನೇ ಒಂದರಷ್ಟು ಭಾಗ ಭಾರತದ ವಿರುದ್ಧ ಆರೋಪ ಮಾಡುವುದಕ್ಕಾಗಿಯೇ ತೆಗೆದುಕೊಂಡಿದ್ದರು ಇಮ್ರಾನ್ ಖಾನ್. ತಮ್ಮ ಭಾಷಣದಲ್ಲಿ ಕಾಶ್ಮೀರದ ಬಗ್ಗೆಯೂ ಉಲ್ಲೇಖಿಸಿರುವ ಇಮ್ರಾನ್ ಖಾನ್ ಕಾಶ್ಮೀರದಲ್ಲಿ ವಿಶ್ವಸಂಸ್ಥೆ ಭದ್ರತಾ ಸಂಸ್ಥೆ ಶಾಂತಿಪಾಲನಾ ಪಡೆಯನ್ನು ಕಳಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಶ್ಮೀರದಲ್ಲಿನ ವಿಪತ್ತು ಸಂಘರ್ಷ ಪರಿಸ್ಥಿತಿಯನ್ನು ವಿಶ್ವಸಂಸ್ಥೆ ನಿಯಂತ್ರಿಸಬೇಕು ಈಸ್ಟ್ ಟಿಮೋರ್ ನಲ್ಲಿ ಮಾಡಿದಂತೆ ತನ್ನದೇ ಆದ ನಿರ್ಣಯಗಳನ್ನು ವಿಶ್ವಸಂಸ್ಥೆ ಕಾಶ್ಮೀರದಲ್ಲೂ ಜಾರಿಗೊಳಿಸಬೇಕೆಂದು ಖಾನ್ ಮನವಿ ಮಾಡಿದ್ದಾರೆ.