1993ರ ಮುಂಬೈ ಸ್ಫೋಟದ ಅಪರಾಧಿಗಳಿಗೆ ದೇಶವೊಂದು ರಕ್ಷಣೆ ನೀಡಿ 5 ಸ್ಟಾರ್ ಆತಿಥ್ಯ ನೀಡುತ್ತಿದೆ: ಎಸ್ ಜೈಶಂಕರ್ ಆರೋಪ
1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಗಳಿಗೆ ದೇಶವೊಂದರ ಸರ್ಕಾರ ರಕ್ಷಣೆ ನೀಡುತ್ತಿದೆ ಮಾತ್ರವಲ್ಲದೆ 5-ಸ್ಟಾರ್ ಹೊಟೇಲ್ ನ ರಾಜಾಥಿತ್ಯ ನೀಡುತ್ತಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಆರೋಪಿಸಿದೆ.
Published: 13th January 2021 09:19 AM | Last Updated: 13th January 2021 12:37 PM | A+A A-

ಎಸ್ ಜೈಶಂಕರ್
ಯುನೈಟೆಡ್ ನೇಷನ್ಸ್: 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಗಳಿಗೆ ದೇಶವೊಂದರ ಸರ್ಕಾರ ರಕ್ಷಣೆ ನೀಡುತ್ತಿದೆ ಮಾತ್ರವಲ್ಲದೆ 5-ಸ್ಟಾರ್ ಹೊಟೇಲ್ ನ ರಾಜಾಥಿತ್ಯ ನೀಡುತ್ತಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಆರೋಪಿಸಿದೆ. ಈ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್ ಗೆ ಪಾಕಿಸ್ತಾನ ಸರ್ಕಾರ ಆಶ್ರಯ, ಭದ್ರತೆ, ಸೌಲಭ್ಯ ನೀಡುತ್ತಿದೆ ಎಂದು ಭಾರತ ಅಸಮಾಧಾನ, ಆಕ್ರೋಶ ಹೊರಹಾಕಿದೆ.
ನಿನ್ನೆ ವರ್ಚುವಲ್ ಸಭೆಯಲ್ಲಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಮೊದಲಿಗೆ, ಭಯೋತ್ಪಾದನೆಯನ್ನು ಎದುರಿಸಲು ನಾವೆಲ್ಲರೂ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಬೇಕು. ಭಯೋತ್ಪಾದನೆಯನ್ನು ಸಮರ್ಥಿಸುವುದಾಗಲಿ, ವೈಭವೀಕರಿಸುವ ಕೆಲಸ ಮಾಡಬಾರದು. ಎಲ್ಲಾ ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯನ್ನು ಸಾಂಪ್ರದಾಯಿಕ ಕ್ರಮಗಳಿಂದ ಮಟ್ಟಹಾಕಲು ಯತ್ನಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಯೋತ್ಪಾದನೆ ಕೃತ್ಯದಿಂದ ಅಂತಾರಾಷ್ಟ್ರೀಯ ಶಾಂತಿ, ಭದ್ರತೆಗೆ ಇರುವ ಸಮಸ್ಯೆ ಬಗ್ಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಚಿವರ ಸಭೆಯಲ್ಲಿ ಮಾತನಾಡಿದ ಎಸ್ ಜೈಶಂಕರ್, 1373 (2001) ನಿರ್ಣಯವನ್ನು ಅಂಗೀಕರಿಸಿದ 20 ವರ್ಷಗಳ ನಂತರ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಅಂತರರಾಷ್ಟ್ರೀಯ ಸಹಕಾರದ ಬಗ್ಗೆ ಪ್ರಸ್ತಾಪಿಸಿದರು.
ಭಯೋತ್ಪಾದನೆಯ ಭೀತಿಯನ್ನು ವಿಶ್ವಾಸಾರ್ಹವಾಗಿ ಪರಿಹರಿಸಲು ಮತ್ತು ಪರಿಣಾಮಕಾರಿ ಕ್ರಮವನ್ನು ಸೂಚಿಸಲು ವಿಶ್ವಸಂಸ್ಥೆ ವ್ಯವಸ್ಥೆಗೆ ಎಂಟು ಅಂಶಗಳ ಕ್ರಿಯಾ ಯೋಜನೆಯನ್ನು ಜೈಶಂಕರ್ ಪ್ರಸ್ತಾಪಿಸಿದ್ದಾರೆ.
ಭಯೋತ್ಪಾದನೆ ಮತ್ತು ಅಂತರರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಗುರುತಿಸಿ ಪರಿಹರಿಸಲು ಅವರು ಒತ್ತಿಹೇಳಿದರು.