ಲಂಡನ್/ನ್ಯೂಯಾರ್ಕ್: ಆಫ್ಘಾನಿಸ್ತಾನದಲ್ಲಿ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವನ್ನು ಪ್ರಮುಖ ಜಾಗತಿಕ ಮಾಧ್ಯಮ ಕಾವಲು ಮತ್ತು ಹಕ್ಕುಗಳ ಗುಂಪು ಖಂಡಿಸಿದೆ.
ಡ್ಯಾನಿಶ್ ಸಿದ್ಧಿಕಿ ಹತ್ಯೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದು, ಪತ್ರಿಕಾ ಸದಸ್ಯರನ್ನು ರಕ್ಷಿಸಲು ಹೆಚ್ಚಿನದನ್ನು ಮಾಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದೆ.
ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನ್ ಪಡೆ ಮತ್ತು ತಾಲಿಬಾನಿ ಉಗ್ರರ ನಡುವಿನ ಘರ್ಷಣೆ ವೇಳೆ 38 ವರ್ಷದ ಸಿದ್ದಿಕಿ ಸಾವನ್ನಪ್ಪಿದ್ದರು.
ರಾಯಿಟರ್ಸ್ ತಂಡದ ಭಾಗವಾಗಿ ರೋಹಿಂಗ್ಯಾ ಬಿಕ್ಕಟ್ಟಿನ ವರದಿ ಮಾಡಿದ್ದ ಸಿದ್ದಿಕಿ 2018ರಲ್ಲಿ ಪುಲಿಟ್ಜೆರ್ ಪ್ರಶಸ್ತಿ ಗಳಿಸಿದ್ದರು. ಅಫ್ಘಾನಿಸ್ತಾನ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ಇತರ ಪ್ರಮುಖ ಘಟನೆಗಳನ್ನು ವ್ಯಾಪಕವಾಗಿ ಸೆರೆಹಿಡಿದಿದ್ದರು.
ಭಾರತೀಯ ಪತ್ರಕರ್ತನ ಸಾವಿಗೆ ಪ್ರತಿಕ್ರಿಯಿಸಿದ ನ್ಯೂಯಾರ್ಕ್ ಮೂಲದ ಪತ್ರಕರ್ತರ ರಕ್ಷಣಾ ಸಂಘಟನೆ(ಸಿಪಿಜೆ) ಸಿದ್ದಿಕಿ ಹತ್ಯೆಯ ಬಗ್ಗೆ ತ್ವರಿತ ಮತ್ತು ಸಮಗ್ರ ತನಿಖೆ ನಡೆಸಿ ಎಂದು ಅಫ್ಘಾನ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಮಾಧ್ಯಮ ವೃತ್ತಿಪರರ ಜಾಗತಿಕ ಜಾಲವಾದ ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ ಸಿದ್ದಿಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು ಪತ್ರಿಕೋದ್ಯಮಕ್ಕೆ 'ಅಪಾರ ನಷ್ಟ' ಎಂದು ಹೇಳಿದೆ.
Advertisement