ಕಠ್ಮಂಡು: ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಒಲಿಗೆ ದೊಡ್ಡ ಹಿನ್ನಡೆಯೊಂದರಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ 20 ಸಚಿವರ ನೇಮಕ ಅಸಂವಿಧಾನಿಕ ಎಂದು ತೀರ್ಪು ನೀಡಿದೆ, ಇದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ವಿಸರ್ಜನೆಯ ನಂತರ ಅವರ ಇತ್ತೀಚಿನ ಎರಡು ಸಂಪುಟ ವಿಸ್ತರಣೆಗಳನ್ನು ಅಮಾನ್ಯಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಕೋಲೆಂದ್ರ ಶುಮೇಶರ್ ರಾಣಾ ಮತ್ತು ನ್ಯಾಯಮೂರ್ತಿ ಪ್ರಕಾಶ್ ಕುಮಾರ್ ಧುಂಗಾನಾ ಅವರ ವಿಭಾಗೀಯ ಪೀಠವು ಸದನವನ್ನು ವಿಸರ್ಜಿಸಿದ ನಂತರ ಸಂಪುಟ ವಿಸ್ತರಣೆ ಅಸಂವಿಧಾನಿಕವಾಗಿದೆ ಮತ್ತು ಆದ್ದರಿಂದ ಸಚಿವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ ಎಂದು ಕಠ್ಮಂಡು ಪೋಸ್ಟ್ನ ವರದಿಯಲ್ಲಿ ತಿಳಿಸಲಾಗಿದೆ.
ಇಬ್ಬರು ಉಪ ಪ್ರಧಾನ ಮಂತ್ರಿಗಳು, ಜನತಾ ಸಮಾಜವಾದಿ ಪಕ್ಷದ ರಾಜೇಂದ್ರ ಮಹತೋ ಮತ್ತು ಒಲಿಯ ಸಿಪಿಎನ್-ಯುಎಂಎಲ್ ನ ರಘುಬೀರ್ ಮಹಾಸೆತ್ ಹುದ್ದೆಗಳನ್ನು ಕಳೆದುಕೊಂಡವರಲ್ಲಿ ಸೇರಿದ್ದಾರೆ.
ಆದೇಶದ ನಂತರ , ಒಲಿ ಅವರ ಸಂಪುಟದಲ್ಲಿ ಪ್ರಧಾನಿ ಸೇರಿದಂತೆ ಕೇವಲ ಐದು ಮಂತ್ರಿಗಳು ಮಾತ್ರ ಉಳಿದಿದ್ದಾರೆ.
ಉಸ್ತುವಾರಿ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಿರಿಯ ವಕೀಲ ದಿನೇಶ್ ತ್ರಿಪಾಠಿ ಸೇರಿದಂತೆ ಆರು ಮಂದಿ ಜೂನ್ 7 ರಂದು ಸಲ್ಲಿಸಿದ್ದ ಅರ್ಜಿಗಳ ಕುರಿತು ನ್ಯಾಯಾಲಯ ತೀರ್ಪು ನೀಡಿತು.
ಕಳೆದ ತಿಂಗಳು ಸದನದಲ್ಲಿ ವಿಶ್ವಾಸಮತ ಕಳೆದುಕೊಂಡ ನಂತರ ಅಲ್ಪಸಂಖ್ಯಾತ ಸರ್ಕಾರದ ನೇತೃತ್ವ ವಹಿಸಿರುವ 69 ವರ್ಷದ ಓಲಿ, ಜೂನ್ 4 ಹಾಗೂ ಜೂನ್ 10ರಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿ 17 ಮಂತ್ರಿಗಳನ್ನು ಸೇರಿಸಿಕೊಂಡರು. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.
ಸದನ ವಿಸರ್ಜನೆಯ ನಂತರ ನೇಮಕಗೊಂಡಿರುವ ಮಂತ್ರಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡದಂತೆ ಕೋರಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ ಎಂದು ಹಿರಿಯ ವಕೀಲ ತ್ರಿಪಾಠಿ ಹೇಳಿದ್ದಾರೆ. ನೇಮಕಾತಿಗಳನ್ನು ರದ್ದುಗೊಳಿಸುವ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ 77 (3) ನೇ ವಿಧಿಯನ್ನು ಉಲ್ಲೇಖಿಸಿದೆ.
ಪ್ರಧಾನ ಮಂತ್ರಿ ವಿಶ್ವಾಸಮತವನ್ನು ಗೆಲ್ಲಲು ವಿಫಲವಾದರೆ ಅಥವಾ ರಾಜೀನಾಮೆ ನೀಡಿದ ನಂತರ ಪ್ರಧಾನ ಮಂತ್ರಿಗಳ ಕಚೇರಿ ಖಾಲಿ ಬಿದ್ದರೆ, ಅದೇ ಮಂತ್ರಿ ಮಂಡಲ ಅಥವಾ ಮತ್ತೊಂದು ಮಂತ್ರಿ ಮಂಡಲ ರಚನೆಯಾಗುವವರೆಗೂ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ವರದಿ ಹೇಳಿದೆ. ಚುನಾವಣೆಗಳ ಘೋಷಣೆಯ ನಂತರ ಸರ್ಕಾರವು ಈಗಾಗಲೇ ಉಸ್ತುವಾರಿ ಸ್ಥಾನಮಾನಕ್ಕೆ ಇಳಿದಿರುವ ಕಾರಣ ಅಂತಹ ಪ್ರಧಾನಿ ಹೊಸ ಮಂತ್ರಿಗಳನ್ನು ನೇಮಿಸಲು ಸಂವಿಧಾನವು ಅನುಮತಿಸುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಪ್ರಧಾನ ಮಂತ್ರಿ ಒಲಿ ಅವರ ಶಿಫಾರಸ್ಸಿನ ಮೇರೆಗೆ ಮೇ 22 ರಂದು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ವಿಸರ್ಜಿಸಿದ 275 ಸದಸ್ಯರ ಸದನವನ್ನು ಪುನಃ ಸ್ಥಾಪಿಸುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವಾಗ ಈ ಬೆಳವಣಿಗೆ ಸಂಭವಿಸಿದೆ ನವೆಂಬರ್ 12 ಮತ್ತು ನವೆಂಬರ್ 19 ರಂದು ಅಧ್ಯಕ್ಷೆ ತ್ವರಿತ ಚುನಾವಣೆಗಳನ್ನು ಘೋಷಿಸಿದ್ದರು.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ವಿಸರ್ಜಿಸುವ ತನ್ನ ಸರ್ಕಾರದ ವಿವಾದಾತ್ಮಕ ನಿರ್ಧಾರವನ್ನು ಒಲಿ ಕಳೆದ ವಾರ ಸಮರ್ಥಿಸಿಕೊಂಡರು ಮತ್ತು ರಾಷ್ಟ್ರದ ಶಾಸಕಾಂಗ ಮತ್ತು ಕಾರ್ಯಕಾರಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ ಪ್ರಧಾನಿಯನ್ನು ನೇಮಕ ಮಾಡುವುದು ನ್ಯಾಯಾಂಗಕ್ಕೆ ಬಿಟ್ಟದ್ದಲ್ಲ ಎಂದು ಸುಪ್ರೀಂಕೋರ್ಟ್ಗೆ ತಿಳಿಸಿದರು. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್ಸಿಪಿ) ಅಧಿಕಾರಕ್ಕಾಗಿ ಜಗಳದ ಮಧ್ಯೆ, ಅಧ್ಯಕ್ಷೆ ಭಂಡಾರಿ ಅವರು ಸದನವನ್ನು ವಿಸರ್ಜಿಸಿ, ಏಪ್ರಿಲ್ 30 ಮತ್ತು ಮೇ 10 ರಂದು ಪ್ರಧಾನಿ ಓಲಿಯವರ ಶಿಫಾರಸ್ಸಿನ ಮೇರೆಗೆ ಹೊಸ ಚುನಾವಣೆಗಳನ್ನು ಘೋಷಿಸಿದ ನಂತರ ನೇಪಾಳ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದೆ.
Advertisement