ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ನೀರು ತುಂಬಿದ ಕಂದಕಕ್ಕೆ ವ್ಯಾನ್ ಬಿದ್ದು 12 ಮಕ್ಕಳು ಸೇರಿ 20 ಮಂದಿ ಸಾವು

ಪಾಕಿಸ್ತಾನದ ಪ್ರವಾಹ ಪೀಡಿತ ಸಿಂಧ್ ಪ್ರಾಂತ್ಯದಲ್ಲಿ ನೀರಿದ್ದ ಆಳವಾದ ಕಂದಕಕ್ಕೆ ವ್ಯಾನ್ ಬಿದ್ದು 12 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಸಿಂಧ್ ಪ್ರಾಂತ್ಯದ ಸೆಹ್ವಾನ್‌ನಲ್ಲಿ ಅಪಘಾತದ ನಂತರ ಹಾನಿಗೊಳಗಾದ ಪ್ರಯಾಣಿಕರ ಮಿನಿ ಬಸ್‌ ಅನ್ನು ಪರಿಶೀಲಿಸುತ್ತಿರುವ ಪೊಲೀಸರು. (ಚಿತ್ರ-ಎಎಫ್‌ಪಿ)
ಸಿಂಧ್ ಪ್ರಾಂತ್ಯದ ಸೆಹ್ವಾನ್‌ನಲ್ಲಿ ಅಪಘಾತದ ನಂತರ ಹಾನಿಗೊಳಗಾದ ಪ್ರಯಾಣಿಕರ ಮಿನಿ ಬಸ್‌ ಅನ್ನು ಪರಿಶೀಲಿಸುತ್ತಿರುವ ಪೊಲೀಸರು. (ಚಿತ್ರ-ಎಎಫ್‌ಪಿ)

ಕರಾಚಿ: ಪಾಕಿಸ್ತಾನದ ಪ್ರವಾಹ ಪೀಡಿತ ಸಿಂಧ್ ಪ್ರಾಂತ್ಯದಲ್ಲಿ ನೀರಿದ್ದ ಆಳವಾದ ಕಂದಕಕ್ಕೆ ವ್ಯಾನ್ ಬಿದ್ದು 12 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ಸಿಂಧ್ ಪ್ರಾಂತ್ಯದ ಖೈರ್‌ಪುರದಿಂದ ಸೆಹ್ವಾನ್ ಷರೀಫ್ ಕಡೆಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ವ್ಯಾನ್ ಖೈರ್‌ಪುರ ಬಳಿಯ ಇಂದುಸ್ ಹೆದ್ದಾರಿಯಲ್ಲಿ ಪ್ರವಾಹದ ನೀರಿನಿಂದ ತುಂಬಿದ್ದ ಕಂದಕಕ್ಕೆ ಬಿದ್ದಿದೆ.

ಘಟನೆಯಲ್ಲಿ 12 ಮಕ್ಕಳು ಸೇರಿದಂತೆ 20 ಭಕ್ತರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ದುನ್ಯಾ ಟಿವಿ ವರದಿ ಮಾಡಿದೆ.

ಪೊಲೀಸರ ಪ್ರಕಾರ, ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಸೈಯದ್ ಅಬ್ದುಲ್ಲಾ ಶಾ ಇನ್ಸ್ಟಿಟ್ಯೂಟ್ ಸೆಹ್ವಾನ್ ಷರೀಫ್‌ಗೆ ರವಾನಿಸಲಾಗಿದೆ.

ಈ ವ್ಯಾನ್ ಖೈರ್‌ಪುರ ಜಿಲ್ಲೆಯಿಂದ ಸೆಹ್ವಾನ್‌ನಲ್ಲಿರುವ ಪ್ರಸಿದ್ಧ ಸೂಫಿ ದೇಗುಲಕ್ಕೆ ಪ್ರಯಾಣಿಕರನ್ನು ಕರೆತರುತ್ತಿತ್ತು ಎಂದು ಪೊಲೀಸ್ ಅಧಿಕಾರಿ ಇಮ್ರಾನ್ ಖುರೇಷಿ ಹೇಳಿದ್ದಾರೆ.

ಮೂರು ದಶಕಗಳಲ್ಲಿಯೇ ದಾಖಲೆಯ ಮಳೆಯಿಂದಾಗಿ ಉಂಟಾದ ದೇಶದ ಅತ್ಯಂತ ಭೀಕರ ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಅಪಾರ ಪ್ರಮಾಣದ ಸಾವು-ನೋವು ಉಂಟಾಗಿದೆ. ಪ್ರವಾಹದಿಂದ 1,600ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ರಸ್ತೆಗಳು ಮತ್ತು ಸೇತುವೆಗಳಿಗೆ ಹಾನಿಯುಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಎರಡು ತಿಂಗಳಿಂದ ಕಂದಕವನ್ನು ಮುಚ್ಚದೇ ಬಿಟ್ಟಿದ್ದರಿಂದ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭೀಕರ ಅಪಘಾತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳು ಈ ಭಾರಿ ಹೆಚ್ಚು ಹಾನಿಗೊಳಲಾಗಿವೆ. ಈ ವರ್ಷ ಜುಲೈನಲ್ಲಿ ಈ ಎರಡು ಪ್ರದೇಶಗಳಲ್ಲಿ ಮಳೆ 30 ವರ್ಷಗಳ ದಾಖಲೆಯನ್ನು ಮೀರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com