ಗುಜರಾತ್ ಸೇತುವೆ ಕುಸಿತ: ಸಂತ್ರಸ್ತರ ಕುಟುಂಬಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ

ಗುಜರಾತ್‌ನ ಮೊರ್ಬಿ ನಗರದಲ್ಲಿ ತೂಗು ಸೇತುವೆ ಕುಸಿದು ಮೃತಪಟ್ಟವರ ಕುಟುಂಬಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಮಾಸ್ಕೋ: ಗುಜರಾತ್‌ನ ಮೊರ್ಬಿ ನಗರದಲ್ಲಿ ತೂಗು ಸೇತುವೆ ಕುಸಿದು ಮೃತಪಟ್ಟವರ ಕುಟುಂಬಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ.

ಶತಮಾನಕ್ಕೂ ಹೆಚ್ಚು ಹಳೆಯದಾದ ಸೇತುವೆಯನ್ನು ಐದು ದಿನಗಳ ಹಿಂದಷ್ಟೇ ವ್ಯಾಪಕ ದುರಸ್ತಿ ಮತ್ತು ನವೀಕರಣದ ನಂತರ ಪುನಃ ತೆರೆಯಲಾಗಿತ್ತು. ಭಾನುವಾರ ಸಂಜೆ ಅದು ಕುಸಿದಾಗ ಜನರಿಂದ ಕಿಕ್ಕಿರಿದು ತುಂಬಿತ್ತು.

ಸೇತುವೆ ಕುಸಿತದಲ್ಲಿ ಈವರೆಗೆ 130 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಸೋಮವಾರ ಕ್ರೆಮ್ಲಿನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿರುವ ಪುಟಿನ್ ಸಂದೇಶದಲ್ಲಿ, 'ಆತ್ಮೀಯ ರಾಷ್ಟ್ರಪತಿಗಳೇ, ಪ್ರಿಯ ಪ್ರಧಾನಮಂತ್ರಿಗಳೇ, ದಯವಿಟ್ಟು ಗುಜರಾತ್ ರಾಜ್ಯದಲ್ಲಿನ ಸೇತುವೆ ಕುಸಿತದ ದುರಂತದ ಬಗ್ಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ಸ್ವೀಕರಿಸಿ' ಎಂದಿದ್ದಾರೆ.

ಪುಟಿನ್ ಅವರು ಸಂತ್ರಸ್ತರ ಕುಟುಂಬಗಳು ಮತ್ತು ಸ್ನೇಹಿತರಿಗೆ ತಮ್ಮ ಮರುಕ ಮತ್ತು ಬೆಂಬಲದ ಮಾತುಗಳನ್ನು ತಿಳಿಸಿದ್ದು, ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ TASS ವರದಿ ಮಾಡಿದೆ.

ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಮೃತರ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ.

ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com