ಸಿಂಧ್ ಪ್ರಾಂತ್ಯದ 190 ಹಿಂದೂಗಳನ್ನು ಭಾರತಕ್ಕೆ ಪ್ರಯಾಣಿಸದಂತೆ ತಡೆದ ಪಾಕ್ ಅಧಿಕಾರಿಗಳು: ವರದಿ

ಸಿಂಧ್  ಪ್ರಾಂತ್ಯದಲ್ಲಿ ವಾಸಿಸುತ್ತಿರುವ 190 ಹಿಂದೂಗಳು ನೆರೆಯ ದೇಶಕ್ಕೆ ಭೇಟಿ ನೀಡುತ್ತಿರುವ ಉದ್ದೇಶದ ಬಗ್ಗೆ ತೃಪ್ತಿಕರ ಪ್ರತಿಕ್ರಿಯೆಯನ್ನು ನೀಡದ ಕಾರಣ ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಪ್ರಯಾಣಿಸುವುದನ್ನು ತಡೆದು ನಿಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ವಾಘಾ ಗಡಿ
ವಾಘಾ ಗಡಿ

ಇಸ್ಲಾಮಾಬಾದ್: ಸಿಂಧ್  ಪ್ರಾಂತ್ಯದಲ್ಲಿ ವಾಸಿಸುತ್ತಿರುವ 190 ಹಿಂದೂಗಳು ನೆರೆಯ ದೇಶಕ್ಕೆ ಭೇಟಿ ನೀಡುತ್ತಿರುವ ಉದ್ದೇಶದ ಬಗ್ಗೆ ತೃಪ್ತಿಕರ ಪ್ರತಿಕ್ರಿಯೆಯನ್ನು ನೀಡದ ಕಾರಣ ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಪ್ರಯಾಣಿಸುವುದನ್ನು ತಡೆದು ನಿಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಸಿಂಧ್‌ ಪ್ರಾಂತ್ಯದಿಂದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ವಿವಿಧ ಹಿಂದೂ ಕುಟುಂಬಗಳು ಧಾರ್ಮಿಕ ತೀರ್ಥಯಾತ್ರೆಗಾಗಿ ವೀಸಾದಲ್ಲಿ ಭಾರತಕ್ಕೆ ತೆರಳಲು ಮಂಗಳವಾರ ವಾಘಾ ಗಡಿಯನ್ನು ತಲುಪಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಆದರೆ, ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ಗಡಿಯಲ್ಲಿಯೇ ತಡೆದಿದ್ದಾರೆ. ಏಕೆಂದರೆ ಅವರು ಭಾರತಕ್ಕೆ ಏಕೆ ಹೋಗುತ್ತಿದ್ದಾರೆ ಎಂಬುದಕ್ಕೆ ಸರಿಯಾದ ಕಾರಣವನ್ನು ನೀಡಲು ಸಾಧ್ಯವಾಗಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ಮೂಲಗಳನ್ನು ಉಲ್ಲೇಖಿಸಿರುವ ವರದಿ ಪ್ರಕಾರ, ಭಾರತಕ್ಕೆ ಪ್ರಯಾಣಿಸುವ ಹಿಂದೂ ಕುಟುಂಬಗಳು ಸಾಮಾನ್ಯವಾಗಿ ಧಾರ್ಮಿಕ ತೀರ್ಥಯಾತ್ರೆಗಾಗಿ ವೀಸಾಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನಂತರ ಅವರು ದೀರ್ಘಕಾಲದವರೆಗೆ ಭಾರತದಲ್ಲಿ ಇರುತ್ತಾರೆ. ಸದ್ಯ ರಾಜಸ್ಥಾನ ಮತ್ತು ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಹಿಂದೂಗಳು ಅಲೆಮಾರಿಗಳಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ಪಾಕಿಸ್ತಾನವು ಅಲ್ಪಸಂಖ್ಯಾತ ಹಿಂದೂ ಸಮುದಾಯದ 22,10,566 ಜನರಿಗೆ ನೆಲೆಯಾಗಿದೆ. ಇದು ದೇಶದ ಒಟ್ಟು ನೋಂದಾಯಿತ ಜನಸಂಖ್ಯೆ 18,68,90,601 ರ ಶೇ 1.18 ರಷ್ಟಿದೆ ಎಂದು ಸೆಂಟರ್ ಫಾರ್ ಪೀಸ್ ಅಂಡ್ ಜಸ್ಟಿಸ್ ಪಾಕಿಸ್ತಾನದ ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆ ಸೇರಿದಂತೆ ಅಲ್ಪಸಂಖ್ಯಾತರು ಬಡವರಾಗಿದ್ದು, ದೇಶದ ಶಾಸಕಾಂಗ ವ್ಯವಸ್ಥೆಯಲ್ಲಿ ಅತ್ಯಲ್ಪ ಪ್ರಾತಿನಿಧ್ಯವನ್ನು ಹೊಂದಿದ್ದಾರೆ.

ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ. ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಾರೆ. ಅವರು ಆಗಾಗ್ಗೆ ಉಗ್ರರಿಂದ ಕಿರುಕುಳದ ಬಗ್ಗೆ ದೂರು ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com