ತುಳಸಿಯನ್ನು ಭಾರತದ ಅತ್ಯಂತ ಪವಿತ್ರ ಗಿಡಮೂಲಿಕೆಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಅದರ ಆರೋಗ್ಯ ಪ್ರಯೋಜನಗಳು ಮತ್ತು ಗುಣಪಡಿಸುವ ಗುಣಗಳಿಗಾಗಿ ಆಯುರ್ವೇದದಲ್ಲಿ ಇದಕ್ಕೆ ಪವಿತ್ರ ಸ್ಥಾನ ನೀಡಲಾಗುತ್ತಿದೆ.
ತುಳಸಿಯ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ಕೋಶಗಳನ್ನು ರಕ್ಷಿಸುತ್ತವೆ. ತುಳಸಿಯಿಂದ ತಯಾರಿಸಿದ ಚಹಾವು ಶಕ್ತಿಯುತವಾದ ಒತ್ತಡ-ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.
ನಮ್ಮ ಮನೆಯಂಗಳದ ತುಳಸಿಯ ಆರೋಗ್ಯದ ಲಾಭಗಳ ಬಗ್ಗೆ ಕೆಲವೊಮ್ಮೆ ನಮಗೆ ಅವಜ್ಞೆಯಿದೆ. ಶೀತ, ಕೆಮ್ಮು ನೆಗಡಿ ಸಮಸ್ಯೆಗಳಿಗೆಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಂಡು ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.
ಕಫ ಕಟ್ಟಿಕೊಳ್ಳುವ, ಬಹುಬೇಗನೆ ಶೀತ, ನೆಗಡಿಯಂತಹ ಸಮಸ್ಯೆಯಾಗುವ ಮಂದಿಗೆ, ಅಸ್ತಮಾ ತೊಂದರೆ ಇರುವವರಿಗೆ ತುಳಸೀ ಚಹಾ ಉತ್ತಮ. ಇದು ದೇಹದಲ್ಲಿ ರೋಗನಿರೋಧಕತೆಯನ್ನು ಹೆಚ್ಚಿಸಿ, ಕಟ್ಟಿಕೊಂಡ ಕಫವನ್ನು ಕರಗಿಸುವಲ್ಲಿ ನೆರವಾಗುವ ಮೂಲಕ ಉಸಿರಾಟವನ್ನು ಸುಗಮವಾಗುವಂತೆ ಮಾಡುತ್ತದೆ.
ಕೆಲವು ಸಂಶೋಧನೆಗಳ ಪ್ರಕಾರ ತುಳಸಿಯ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ತುಳಸಿ ಚಹಾ ಕಾರ್ಟಿಸೋಲ್ ಹಾರ್ಮೋನಿನ ಸಮತೋಲನಕ್ಕೆ ಸಹಾಯ ಮಾಡುವುದರಿಂದ ಒತ್ತಡ, ಖಿನ್ನತೆಯಂತಹ ಸಮಸ್ಯೆಗಳಿಗೂ ಕೊಂಚ ಮಟ್ಟಿನ ಪರಿಹಾರ ನೀಡುತ್ತದೆ.
ನಿತ್ಯವೂ ಕುಡಿಯುವ ಹಾಲು ಹಾಕಿದ ಚಹಾ ಕಾಫಿಗಿಂತ ತುಳಸಿ ಚಹಾ ಒಳ್ಳೆಯದು. ಇದು ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರುವಲ್ಲಿಯೂ ನೆರವಾಗುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಬಹಳ ಒಳ್ಳೆಯದು.
ತುಳಸಿ ಚಹಾವನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಓಡಿಸಿ ದುರ್ವಾಸನೆಯನ್ನೂ ತೊಲಗಿಸುತ್ತದೆ. ಬಾಯಿಯನ್ನು, ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಮೌತ್ ಫ್ರೆಶ್ನರ್ನಂತೆ ಕೆಲಸ ಮಾಡುತ್ತದೆ.
ತುಳಸಿಯ ಜೊತೆಗೆ ಶುಂಠಿ, ಕರಿಮೆಣಸು, ವೀಳ್ಯದೆಲೆ ಇತ್ಯಾದಿಗಳನ್ನೂ ಸೇರಿಸಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಕಷಾಯ ಮಾಡಿಕೊಂಡು ಕುಡಿದರೆ ಎದೆಯಲ್ಲಿ ಕಟ್ಟಿಕೊಂಡ ಕಫ ನೀರಾಗುತ್ತದೆ. ಒಣ ಕೆಮ್ಮು, ಕಫದ ಜೊತೆಗೆ ಬರುವ ಕೆಮ್ಮು, ಗಂಟಲು ಕೆರೆತ/ನೋವು ಇತ್ಯಾದಿಗಳಿಗೂ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ
ತುಳಸಿ ಸ್ವಲ್ಪ ಅಸಿಡಿಕ್ ಗುಣವನ್ನೂ ಹೊಂದಿರುವುದರಿಂದ ಹೆಚ್ಚು ಸೇವನೆ ಒಳ್ಳೆಯದಲ್ಲ. ದಿನಕ್ಕೊಮ್ಮೆ ಕುಡಿಯುವುದಕ್ಕೆ ಅಡ್ಡಿಯಿಲ್ಲ. ದಿನಕ್ಕೊಂದೆರಡು ಎಲೆ ಜಗಿಯುವುದರಿಂದ ಸಮಸ್ಯೆ ಬಾರದು. ಆದರೆ ಅತಿಯಾದರೆ ಒಳ್ಳೆಯದಲ್ಲ.