ಆಕೆಗಿನ್ನೂ ಹದಿಮೂರು ತುಂಬಿಲ್ಲ. ಆದರೆ ಮನದ ತುಡಿತವೆಷ್ಟೆಂದರೆ ಗೌರಿಶಂಕರ ಶಿಖರದಷ್ಟು. ಹೌದು ಮೌಂಟ್ ಎವರೆಸ್ಟ್ ಹತ್ತುವ ಕನಸು ಹೊತ್ತವಳು. ತೆಲಂಗಾಣದ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದ ಈಕೆ ಇನ್ನೂ ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿರುವ ಬಾಲಕಿ.
ತೇನ್ಸಿಂಗನ ರೋಚಕ ಅನುಭವಗಳನ್ನು ಕೇಳಿ, ತಾನೂ ಎವರೆಸ್ಟ್ ಶಿಖರವನ್ನು ಹತ್ತಬಾರದೇಕೆ ಎಂದಾಲೋಚಿಸಿದ್ದುಂಟು. ಈಕೆಯ ಆಸೆಯನ್ನು ಕೇಳಿ ಪರಿಹಾಸ ಮಾಡಿದವರುಂಟು, ವ್ಯಂಗ್ಯವಾಗಿ ಮಾತನಾಡಿದವರುಂಟು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ. ತನ್ನ ಗುರಿ ಸಾಧಿಸಿ ಹೆಸರು ಗಳಿಸಬೇಕೆಂದು ನಿರ್ಧರಿಸಿದಳು.
ಅದಕ್ಕೆ ಸರಿಯಾಗಿ 299 ರೆಸಿಡೆನ್ಸಿಯಲ್ ಶಾಲೆಗಳ 150 ಮಕ್ಕಳನ್ನು ಆರಿಸಿ, ಅವರಲ್ಲಿ ನಾಲ್ಕು ಹಂತದ ಕಠಿಣ ಪರೀಕ್ಷೆಗೆ ಗುರಿಪಡಿಸಿ, ಅದರಲ್ಲಿ 20 ಮಕ್ಕಳನ್ನು ಆಯ್ಕೆ ಮಾಡಿ ಅವರನ್ನು ಡಾರ್ಜಿಲಿಂಗ್ನ ಪರ್ವತಾರೋಹಣ ತರಬೇತಿ ಸಂಸ್ಥೆಗೆ ಕಳುಹಿಸಲಾಯಿತು. ಅಲ್ಲಿ ಬಹಳ ಶ್ರಮದಾಯಕವಾದ ತರಬೇತಿ ನೀಡಿ ಕೊನೆಯಲ್ಲಿ ಪರೀಕ್ಷೆ ನಡೆಸಿದಾಗ ಆಯ್ಕೆಯಾದವರು ಕೇವಲ ಇಬ್ಬರು.
ಅವರಲ್ಲಿ ಅತಿ ಕಿರಿಯಳು ಈ ಮಾಲವತ್ ಪೂರ್ಣ, ಇನ್ನೊಬ್ಬ ಸಾಧನಪಲ್ಲಿ ಆನಂದ ಕುಮಾರ್. ಕೃಷಿ ಕಾರ್ಮಿಕ ದಂಪತಿಗೆ ಜನಿಸಿದ ಗುಡ್ಡಗಾಡು ಜನಾಂಗದ ಈ ಪೋರಿ ಎವರೆಸ್ಟ್ ಶಿಖರ ಹತ್ತಲು ಆಯ್ಕೆಯಾದಾಗ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ. ಅಲ್ಲಿ ಭಾರತದ ಪತಾಕೆಯನ್ನು ಹಾರಿಸುವ ಅವಕಾಷ ಸಿಕ್ಕಿದ್ದೂ ತನ್ನ ಪುಣ್ಯ ಶೇಷವೆಂದೇ ಭಾವಿಸಿದಳು. 25ನೇ ಮೇ ತಿಂಗಳು 2014 ರಂದು ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಗೌರಿಶಂಕರದ ತುದಿಯೇರಿದಾಗ ಆಕೆಗಾದ ಸಂತಸ ಅಷ್ಟಿಷ್ಟಲ್ಲ.
ಆಕೆ ಹತ್ತಿದ ಒಂದು ಗಂಟೆಯ ನಂತರ ಆನಂದ್ ಸಹ ಗೌರಿ ಶಂಕರ ಶಿಖರವನ್ನೇರಿದ. ಆದರೆ ಮೊದಲು ಹತ್ತಿದ ಆನಂದನಿಗಿಂತ ಚಿಕ್ಕವಳಾದ ಆಕೆ ಮೌಂಟ್ ಎವರೆಸ್ಟ್ ಶಿಖರ ಹತ್ತಿದ ವಿಶ್ವದ ಅತೀ ಕಿರಿಯ ವಯಸ್ಸಿನ ಬಾಲಕಿಯೆಂಬ ಅಭಿದಾನಕ್ಕೆ ಪಾತ್ರಳಾಗಿದ್ದಳು. ತೆಲಂಗಾಣ ಸರ್ಕಾರ ಆಕೆಯನ್ನು ಅಭಿನಂದಿಸಿ 25ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು ನೀಡಿತಲ್ಲದೆ. ಸರ್ಕಾರಿ ಜಮೀನನ್ನೂ ಮಂಜೂರು ಮಾಡಿತು. ಮಾಲವತ್ ಪೂರ್ಣ ಹೆಚ್ಚಿನ ವಿದ್ಯಾಭ್ಯಾಸ ಮಾಡಿತ. ಭಾರತೀಯ ಪೋಲೀಸ್ ಇಲಾಖೆ ಸೇರಿ ಸೇವೆ ಮಾಡುವ ಹಿರಿದಾಸೆ ಹೊಂದಿದ್ದಾಳೆ.