ಮುಂದಿನ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಅನುತ್ಪಾದಕ ಸಬ್ಸಿಡಿ ಮೇಲೆ ವೆಚ್ಚ ಮಾಡದೇ ಸರ್ಕಾರ ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸುಧಾರಿಸುವ ಅಗತ್ಯ ಇದೆ ಎಂದು ಇತ್ತೀಚಿನ ಕ್ರಿಸಿಲ್ ರಿಸರ್ಚ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ನೀರಾವರಿ ಪ್ರದೇಶವನ್ನು ಹೆಚ್ಚಿಸುವುದು, ಬೆಳೆ ವಿಮೆಯನ್ನು ಮತ್ತಷ್ಟು ವಿಸ್ತರಿಸುವುದು, ನೇರ ಸಬ್ಸಿಡಿ ವರ್ಗಾವಣೆ ಹಾಗೂ ಕೃಷಿ ವಲಯದಲ್ಲಿನ ಹೂಡಿಕೆ ಹೆಚ್ಚಳ ಸೇರಿದಂತೆ ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ರಚನಾತ್ಮಕ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಈ ಬಾರಿ ಬಜೆಟ್ ನಲ್ಲೂ ಕೃಷಿಗೆ ಹೆಚ್ಚಿನ ಆದ್ಯತೆ ಸಿಗಬೇಕಾದ ಅಗತ್ಯ ಇದೆ.2015ರಲ್ಲಿ - 16ರಲ್ಲಿ ಕೇಂದ್ರ ಸರ್ಕಾರ ಕೃಷಿಗೆ ನೀಡಿದ್ದ 2,600 ಕೋಟಿ ಅನುದಾನ ನೀಡಿತ್ತು. ಆದರೆ ಈ ಬಾರಿ ಮೊತ್ತವನ್ನು ಹೆಚ್ಚಿಸುವ ಮತ್ತು ಬೆಳೆ ವಿಮೆಯನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಬೆಳೆ ಹಾನಿಯಿಂದ ಸಂಕಷ್ಟಕ್ಕಿಡಾಗಿರುವ ರೈತರನ್ನು ರಕ್ಷಿಸಬೇಕಿದೆ.
ಈ ಮಧ್ಯೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 2016-17ರಿಂದ ಜಾರಿಗೆ ಬರುತ್ತಿದ್ದು, ಅದನ್ನು ಸಹ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಮತ್ತು ಮೊದಲ ಎರಡು ವರ್ಷಗಳಲ್ಲೇ ಶೇ,50ರಷ್ಟು ಗುರು ತಲುಪಬೇಕು ವರದಿ ಹೇಳಿದೆ.
ಸದ್ಯ ಶೇ.25ರಷ್ಟು ರೈತರಿಗೆ ಮಾತ್ರ ರಾಷ್ಟ್ರೀಯ ಬೆಳೆ ವಿಮೆ ಯೋಜನೆಯ ಲಾಭ ದೊರೆಯುತ್ತಿದೆ ಮತ್ತು ಶೇ.20ರಷ್ಟು ಪ್ರದೇಶಗಳ ಪರಿಸ್ಥಿತಿಯನ್ನು ಅವಲಂಭಿಸಿದೆ. ಅಲ್ಲದೆ ಬೆಳೆ ವಿಮೆ ಯೋಜನೆ ಸಂಪೂರ್ಣ ಲಾಭ ಇಂದಿಗೂ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಬರ ಮುಕ್ತ ದೇಶಕ್ಕಾಗಿ ಸರ್ಕಾರ ಸಣ್ಣ ನೀರಾವರಿ ಯೋಜನೆ, ಮಳೆನೀರು ಕೊಯ್ಲು ಮತ್ತು ನೀರು ಸಂಗ್ರಹಣೆಗಾಗಿ ಸ್ವತ್ತುಗಳನ್ನು ಸೃಷ್ಟಿಸುವ ಅಗತ್ಯವಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯ ಇದ್ದು, ಈ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಸಬಹುದಾಗಿದೆ.