ಭಾರತದ ಭತ್ತದ ಕಣಜದಲ್ಲಿ ಕುಸಿಯುತ್ತಿರುವ ಅಂತರ್ಜಲ: ಪರ್ಯಾಯ ಕೃಷಿಯತ್ತ ರೈತರ ಚಿತ್ತ

ಭಾರತದ ಭತ್ತದ ಕಣಜ ಎಂಬ ಕೀರ್ತಿ ಪಂಜಾಬ್ ಗಿದೆ. ಆದರೆ ಇಲ್ಲಿ ಅಂತರ್ಜಲ ಮಟ್ಟ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಚಂಡೀಗಢ: ಭಾರತದ ಭತ್ತದ ಕಣಜ ಎಂದು ಪಂಜಾಬ್ ನ್ನು ಕರೆಯಲಾಗುತ್ತದೆ. ಆದರೆ ಇಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಕೃಷಿ ಉತ್ಪಾದನೆ ಕೂಡ ಕುಸಿಯುತ್ತಿದೆ.
ಪಂಜಾಬ್ ರಾಜ್ಯದ ಕೃಷಿ ಭೂಮಿ ಬಹುತೇಕವಾಗಿ ನಂಬಿಕೊಂಡಿರುವುದು ಅಲ್ಲಿನ ಅಂತರ್ಜಲದ ಮೇಲೆ.  
ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ನೀರಿನ ಮಟ್ಟ ಪ್ರತಿ ವರ್ಷ 16ರಿಂದ 20 ಇಂಚುಗಳಷ್ಟು ಕುಸಿಯುತ್ತಿದೆ ಎಂದು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಮಣ್ಣು ಮತ್ತು ಜಲ ಎಂಜಿನಿಯರಿಂಗ್ ಇಲಾಖೆಯ ಮುಖ್ಯಸ್ಥ ರಾಜನ್ ಅಗರ್ ವಾಲ್ ಹೇಳುತ್ತಾರೆ. ಹೀಗಾಗಿ ಕೃಷಿ ಭೂಮಿ ನೀರಾವರಿಗೆ ಅಂತರ್ಜಲವನ್ನು ನಂಬಿಕೊಂಡು ಬದುಕುತ್ತಿರುವವರಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಆ ರಾಜ್ಯದ ಅಜ್ಮೀರ್ ಸಿಂಗ್ ಎಂಬ ರೈತ ಹೇಳುವ ಪ್ರಕಾರ, ಕೆಲವು ಕಡೆಗಳಲ್ಲಿ 200 ಅಡಿ ಅಥವಾ ಅದಕ್ಕಿಂತ ಕೆಳಗೆ ಬೋರ್ ವೆಲ್ ಕೊರೆಸಿದರೂ ಕೂಡ ನೀರು ಸಿಗುವುದಿಲ್ಲ ಎನ್ನುತ್ತಾರೆ. ಅವರು ಚಂಡೀಗಢದಿಂದ 150 ಕಿಲೋ ಮೀಟರ್ ದೂರದಲ್ಲಿ ಜಲಂದರ್ ಎಂಬಲ್ಲಿ ಕಳೆದ 35 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ.
ಇನ್ನೊಬ್ಬ ರೈತ ಪವಂಜೀತ್ ಸಿಂಗ್ ಎಂಬುವವರು ಹೇಳುತ್ತಾರೆ, ನೀರಿನ ಕೊರತೆಯಿಂದ ನನ್ನ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಿದ್ದೇನೆ. ನಾನು ಈ ನಿರ್ಧಾರವನ್ನು ತುಂಬಾ ನೋವಿನಿಂದ ತೆಗೆದುಕೊಂಡೆ. ನನ್ನ ಇಡೀ ಜಮೀನಿಗೆ ನೀರುಣಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಎಂದು ನನಗನಿಸಿತು ಎನ್ನುತ್ತಾರೆ.
ಮಿತಿಮೀರಿ ಅಂತರ್ಜಲ ಬಳಕೆಯೇ ನೀರಿನ ಮಟ್ಟ ಕುಸಿಯಲು ಕಾರಣ ಎನ್ನುತ್ತಾರೆ ಅಗರ್ ವಾಲ್. ಪಂಜಾಬ್ ನಲ್ಲಿ ಶೇಕಡಾ 73ರಷ್ಟು ಕೃಷಿ ಭೂಮಿ ಅಂತರ್ಜಲವನ್ನು ನಂಬಿಕೊಂಡಿವೆ ಎಂದರೆ ಇದು ಎಚ್ಚರಿಕೆಯ ಘಂಟೆ ಎನ್ನುತ್ತಾರೆ ಅವರು.
ಹೀಗಾಗಿ ಪಂಜಾಬ್ ನಲ್ಲಿ ರೈತರು ಪರ್ಯಾಯ ಕೃಷಿ ಬೆಳೆಯನ್ನು ಬೆಳೆಯಬೇಕಾದ ಪರಿಸ್ಥಿತಿ ಬಂದಿದೆ. ಹೆಚ್ಚು ನೀರಿನ ಅವಶ್ಯಕತೆಯಿರುವ ಅಕ್ಕಿ, ಗೋಧಿಗೆ ಬದಲಾಗಿ ಕಡಿಮೆ ನೀರು ಸಾಕಾಗುವ ಧಾನ್ಯಗಳು, ಮೆಕ್ಕೆಜೋಳ, ತರಕಾರಿಗಳು ಮತ್ತು ಕಬ್ಬಿನ ಬೆಳೆ ಬೆಳೆಯರು ರೈತರು ಮುಂದಾಗುತ್ತಿದ್ದಾರೆ.
ಕಡಿಮೆ ಮಳೆ: ವಾಯುವ್ಯ ಭಾರತದ ಕೇಂದ್ರ ಅಂತರ್ಜಲ ನಿಗಮದ ಸ್ಥಳೀಯ ನಿರ್ದೇಶಕ ಸುನಿಲ್ ಜೈನ್, ಪಂಜಾಬ್ ನಲ್ಲಿ 1985ರಿಂದ ಮಳೆ ಕಡಿಮೆ ಬೀಳಲು ಆರಂಭವಾಯಿತು. ಇತ್ತೀಚಿನ ವರ್ಷಗಳಲ್ಲಿ ಇನ್ನೂ ಕಡಿಮೆಯಾಗಿದೆ.10 ವರ್ಷಗಳ ಹಿಂದೆ ರಾಜ್ಯದ ಬಹುತೇಕ ಕಡೆಗಳಲ್ಲಿ 10 ಮೀಟರ್ ಆಳದಲ್ಲಿ ನೀರು ಸಿಗುತ್ತಿತ್ತು. 2015ರ ಹೊತ್ತಿಗೆ ಅದು 20 ಮೀಟರ್ ಗೆ ಕುಸಿಯಿತು, ಇನ್ನು ಕೆಲವು ಭಾಗಗಳಲ್ಲಿ 30 ಮೀಟರ್ ಆಳದಲ್ಲಿ ಕೂಡ ನೀರು ಸಿಗುತ್ತಿಲ್ಲ ಎನ್ನುತ್ತಾರೆ.
ಪಂಜಾಬ್ ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 700 ಮಿಲಿ ಮೀಟರ್ ಗಿಂತ ಕಡಿಮೆ ಮಳೆ ಬೀಳುತ್ತಿದ್ದು, ದೇಶದ ಸರಾಸರಿ ಮಳೆಯ ಪ್ರಮಾಣ ವರ್ಷಕ್ಕೆ ಸಾವಿರದ 83 ಮಿಲಿ ಮೀಟರ್ ನಷ್ಟಾಗಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳುತ್ತದೆ.
ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ವರದಿ ಪ್ರಕಾರ, ಪಂಜಾಬ್ ನ 9.1 ದಶಲಕ್ಷ ಕಾರ್ಮಿಕರಲ್ಲಿ 3.5 ದಶಲಕ್ಷ ಮಂದಿ ಜೀವನಕ್ಕೆ ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ನಂಬಿಕೊಂಡು ಬದುಕುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com