
ಕೊಲ್ಲಾಪುರ ಒಂದು ಪ್ರವಾಸಿ ಪುಣ್ಯಕ್ಷೇತ್ರ ಅಲ್ಲದೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣವೂ ಹೌದು. ಕರ್ನಾಟಕದ ವಾಯುವ್ಯ ಭಾಗದಲ್ಲಿರುವ ಬೆಳಗಾವಿ ಮಹಾನಗರದಿಂದ 110 ಕಿಮೀ ದೂರದಲ್ಲಿರುವ ಕೊಲ್ಲಾಪುರ, ಸದ್ಯ ಪ್ರಚಲಿತದಲ್ಲಿರುವ ಶಕ್ತಿ ಪೀಠಗಳ ಪೈಕಿ ಒಂದಾಗಿದೆ.
ಆಧುನೀಕರಣ ಕೈಚಾಚುತ್ತಿದ್ದರೂ ಸಹ ಧಾರ್ಮಿಕತೆಯ ಇಂಬು ಮಾಯವಾಗಿಲ್ಲ. ಇಲ್ಲಿನ ಮಹಾಲಕ್ಷ್ಮೀಯ ದರ್ಶನ ಕೋರಿ ದೇಶದ ವಿವಿದೆಡೆಯಿಂದ ಸಾಕಷ್ಟು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಕೊಲ್ಲಾಪುರ ಬಹುತೇಕವಾಗಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಕೊಲ್ಲಾಪುರಕ್ಕೆ ಬಂದ ತಕ್ಷಣ ಎಲ್ಲರೂ ಮೊದಲು ಭೇಟಿ ನೀಡಲು ಬಯಸುವುದು ಶ್ರೀ ಅಮ್ಮನವರ ದೇವಸ್ಥಾನಕ್ಕೆ.
ಪೌರಣಿಕ ಹಿನ್ನೆಲೆ
ಪುರಾಣಗಳಲ್ಲಿ ಕರವೀರಪುರವೆಂದೇ ಉಲ್ಲೇಖಿತಗೊಂಡಿರುವ ಕೊಲ್ಹಾಪುರ ಹಿಂದೂಗಳ ಪ್ರಮುಖ ಯಾತ್ರಾ ಸ್ಥಳವಾಗದೆ. ದೇಶದ 51 ಶಕ್ತಿಪೀಠಗಳಲ್ಲಿ ಒಂದಾಗದೆ. ಮುಂಬೈ-ಬೆಂಗಳೂರು-ಗೋವಾ ಹೆದ್ದಾರಿಯಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಪ್ರಾಚೀನ ನಗರ. ಈ ನಗರವು 10ನೇ ಶತಮಾನದಲ್ಲಿ ಯಾದವರು ನಿರ್ಮಿಸಿರುವುದೆಂದು ಇತಿಹಾಸ ತಿಳಿಸುತ್ತದೆ. ಕೊಲ್ಲಾಪುರದ ಹೆಸರಿಗೆ ಅನೇಕ ಐತಿಹ್ಯಗಳಿವೆ. ಕೊಲಾಸುರನೆಂಬ ಅಸುರನು ದೇವತೆಗಳಿಗೆ ಬಲು ಕಷ್ಟ ನೀಡುತ್ತಿದ್ದನು. ಅವನ ಕ್ರೌರ್ಯತೆಯಿಂದ ಪಾರು ಮಾಡುವಂತೆ ದೇವತೆಗಳು ಮೊರೆಯಿಟ್ಟಾಗ ದೇವಿಯು ಭೂಮಿಗೆ ಬಂದು ಆತನನ್ನು ದೇವಿಯು ವಧಿಸಿದ ಸ್ಥಳವೇ ತೀರ್ಥವಾಗಿ ರೂಪಗೊಂಡಿತು. ನಂತರ ದೇವಿಯು ಸ್ಥಿರವಾಗಿ ಇಲ್ಲಿಯೇ ನೆಲೆಸಿದಳು ಹಾಗೂ ಈ ಸ್ಥಳಕ್ಕೆ ಕೊಲ್ಲಾಪುರ ಎಂಬ ಹೆಸರು ಬಂದಿತು.
ದೇವಾಲಯದ ಮಹಾದ್ವಾರವು ಪಶ್ಟಿಮ ದಿಕ್ಕಿನಲ್ಲಿದೆ. ಮಹಾದ್ವಾರದಿಂದ ಒಳ ಪ್ರವೇಶಿಸುತ್ತಿದ್ದಂತೆಯೇ ದೀಪ ಸ್ಥಂಬಗಳನ್ನು ನಂತರದಲ್ಲಿ ಗರುಡ ಸ್ಥಂಬವನ್ನು ಕಾಣಬಹುದು.
ದೇವಸ್ಥಾನವು ಪ್ರತಿದಿನ ಬೆಳಗ್ಗೆ 5 ಘಂಟೆಗೆ ತೆರೆದು ರಾತ್ರಿ 10.30 ಗಂಟೆಗೆ ಮುಚ್ಚಲ್ಪಡುತ್ತದೆ. ಅಲಂಕಾರ ಆಭರಣಗಳ ಸಮರ್ಪಣೆಯೊಂದಿಗೆ 12.30ಕ್ಕೆ ಮಹಾ ಮಂಗಳಾರತಿಯಾಗುತ್ತದೆ. ಮತ್ತೆ ಸಂಜೆ 7 ಗಂಟೆಗೆ ಭೋಗಾರತಿಯಾಗುತ್ತದೆ. ಹೀಗೆ ದಿನದಲ್ಲಿ ಐದು ಬಾರಿ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಹುಣ್ಣಿಮೆ ದಿನ ಹಾಗೂ ಪ್ರತಿ ಶುಕ್ರವಾರಗಳಂದು ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಗತ್ತದೆ.
ಕ್ರಿ.ಶ. 634ರಲ್ಲಿ ಚಾಲುಕ್ಯ ರಾಜ ಕರ್ಣದೇವನು ಚಿಕ್ಕಗುಡಿಯಾಗಿದ್ದ ಆ ಆಲಯವನ್ನು ಪಿರಮಿಡ್ ಶಿಕರದ ಆಕಾರದಲ್ಲಿ ನಿರ್ಮಾಣಗೊಳಿಸಿದ. 1818ರಲ್ಲಿ ಗರುಡ ಮಂಟಪ ನಿರ್ಮಿಸಿರುತ್ತಾರೆ. ಆಲಯದ ಸುತ್ತಲೂ ಆಕರ್ಷಕ ಕೆತ್ತನೆಗಳಿವೆ. ಮೂಲ ಮಂದಿರದಲ್ಲಿ ಕಪ್ಪುಶಿಲೆಯ ಚತುರ್ಭುಜೆ ಮಹಾಲಕ್ಷ್ಮೀ ಗದಾಧಾರಿಯಾಗಿದ್ದಾಳೆ. ತಲೆಯಲ್ಲಿ ಸರ್ಪದ ಮುಕುಟವಿದ್ದು, ಬೆಳ್ಳಿಯ ಮಂಟಪದಲ್ಲಿ ಅಸಂಖ್ಯಾತ ನೆರಿಗೆಗಳಿಂದ ಕೂಡಿದ ಸೀರೆಯನ್ನುಟ್ಟು ದೇವಿ ನಿಂತಿದ್ದಾಳೆ. ಸಾಕ್ಷಾತ್ ಮಹಾಲಕ್ಷ್ಮಿಯೇ ವೈಕುಂಠದಿಂದ ಬಂದು ಇಲ್ಲಿ ನೆಲೆಸಿದ್ದಾಳೆ ಎಂಬ ಭಾಸವಾಗುತ್ತದೆ.
ನವರಾತ್ರಿ ಮತ್ತು ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಅಂಬಾಬಾಯಿಯ ಉತ್ಸವ ಮೂರ್ತಿಯನ್ನು ಟೀಮ್ಲಾಬಾಯಿ ದೇವಾಲಯದ ತನಕ ಮೆರವಣಿಗೆಯಲ್ಲಿ ತಂದು ಎರಡೂ ಮೂರ್ತಿಗಳನ್ನು ಅಕ್ಕಪಕ್ಕ ಕೂರಿಸಿ ಪೂಜಿಸುತ್ತಾರೆ. ಮಹಾಲಕ್ಷ್ಮಿ ದೇವಿಗೆ ಹಿಂದೆ ಕೊಲ್ಲಾಪುರನೆಂಬ ರಕ್ಕಸನನ್ನು ಸಂಹರಿಸುವಾಗ ಗ್ರಾಮದೇವತೆಯಾದ ಟೀಮ್ಲಾಬಾಯಿ ಸಹಾಯ ಮಾಡಿದ್ದಳಂತೆ. ಲಕ್ಷ್ಮಿದೇವಿ ಮುಂದೆ ಈ ಸಹಾಯವನ್ನು ನೆನೆಯಲಿಲ್ಲವೆಂದು ಮುನಿದು ಆಕೆ ನಂತರ ಗುಡ್ಡದ ಮೇಲೆ ನೆಲೆಸಿದ್ದಳಂತೆ. ಅವಳ ಮನವೊಲಿಸಲು ಅವಳ ದೇವಾಲಯದ ತನಕ ಮೆರವಣಿಗೆ ಹೋಗುತ್ತದೆಂಬ ಐಹಿತ್ಯ.
ದೇವಾಲಯದ ಆವರಣ ವಿಶಾಲವಾಗಿದೆ. ಪಂಚ ಕಲಕಗಳಿಂದ ಕೂಡಿದ ಶಿಖರ ಪಿರಮಿಡ್ ಆಕಾರದಲ್ಲಿದೆ. ಕೊಲ್ಲಾಪುರದಲ್ಲಿ ತಂಗುವುದಕ್ಕೆ ಉತ್ತಮ ವಸತಿ ಗೃಹಗಳಿವೆ, ಓಲ್ಡ್ ಪ್ಯಾಲೇಸ್, ಪಂಚಗಂಗಾ ಪಾಟ್, ಶಹಾಜಿ ಮೂಸಿಯಂ, ಜ್ಯೋತಿ ಬಾ ಇತ್ಯಾದಿಗಳನ್ನು ಹಾಗೂ ಶಿವಾಜಿ ಕಟ್ಟಿಸಿರುವ ಕೋಟೆ ಇವೆ.
ನಗರದ ರೈಲು ಹಾಗೂ ಕೇಂದ್ರ ಬಸ್ಸು ನಿಲ್ದಾಣದಿಂದ ಕ್ರಮವಾಗಿ 4 ಮತ್ತು 3 ಕಿಮೀ ಗಳಷ್ಟು ದೂರದಲ್ಲಿರುವ ದೇವಸ್ತಾನಕ್ಕೆ ಟ್ಯಾಕ್ಸಿ ಹಾಗೂ ರಿಕ್ಷಾಗಳು ಇವೆ.
- ವಿಶ್ವನಾಥ್. ಎಸ್
Advertisement