ಕುಕ್ಕೆಯಲ್ಲಿ ಷಷ್ಠಿ ಎಡೆಸ್ನಾನ ಸೇವೆ

ಚಂಪಾಷಷ್ಠಿ ಮಹೋತ್ಸವದ ದಿನವಾದ ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ನಡೆದ ಎಡೆಸ್ನಾನ ಉರುಳು ಸೇವೆಯಲ್ಲಿ 448 ಮಂದಿ ಭಕ್ತರು ಪಾಲ್ಗೊಂಡರು...
ಎಡೆ ಸ್ನಾನ(ಸಾಂದರ್ಭಿಕ ಚಿತ್ರ)
ಎಡೆ ಸ್ನಾನ(ಸಾಂದರ್ಭಿಕ ಚಿತ್ರ)

ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವದ ದಿನವಾದ ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ನಡೆದ ಎಡೆಸ್ನಾನ ಉರುಳು ಸೇವೆಯಲ್ಲಿ 448 ಮಂದಿ ಭಕ್ತರು ಪಾಲ್ಗೊಂಡರು.

ಪಂಚಮಿ ದಿನವಾದ ಬುಧವಾರ 401 ಮಂದಿ ಭಕ್ತರು ಎಡೆಸ್ನಾನ ಸೇವೆ ಸಲ್ಲಿಸಿದ್ದರು. ಹಿಂದಿನ ವರ್ಷಗಳಲ್ಲಿ ವಾರ್ಷಿಕ ಜಾತ್ರಾ ಸಮಯ ಇಲ್ಲಿ ಷಷ್ಠಿ ದಿನಕ್ಕಿಂತ ಪಂಚಮಿ ದಿನದಂದು ಹೆಚ್ಚು ಮಂದಿ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿ ದ್ದರು. ಆದರೆ, ಈ ಭಾರಿ ಅದು ಬದಲಾಗಿದೆ.

ಗುರುವಾರ ಮುಂಜಾನೆ 6.55ರ ಧನುರ್ ಲಗ್ನ ಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾ ರೂಢರಾಗಿ ಸಡಗರದ ಚಂಪಾಷಷ್ಠಿ ಬ್ರಹ್ಮರಥೋತ್ಸವ ನೆರವೇರಿತು. ಸಹಸ್ರಾರು ಭಕ್ತಾಧಿಗಳ ಜಯಘೋಷಗಳ ನಡುವೆ ವೈಭವದಿಂದ ರಥೋತ್ಸವ ನೆರವೇರಿತು. ಈ ಬಾರಿ 71 ಮಂದಿ ಭಕ್ತರು ಬ್ರಹ್ಮರಥೋತ್ಸವ ಸೇವೆಯನ್ನು ಸಲ್ಲಿಸಿದರು.

ರಥೋತ್ಸವಕ್ಕೂ ಮುನ್ನ ದೇವಳದ ಹೊರಾಂಗಣದಲ್ಲಿ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯ ಶ್ರೀದೇವರಿಗೆ ಸುವರ್ಣವೃಷ್ಟಿಗೈದರು. ಭಕ್ತರಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ಅರ್ಚಕರು ರಥದಿಂದ ಎಸೆದರು. ಹರಕೆ ಹೊತ್ತ ಭಕ್ತರು ನಾಣ್ಯ, ಕಾಳುಮೆಣಸು, ಸಾಸಿವೆಗಳನ್ನು ರಥಕ್ಕೆ ಎಸೆದರು. ಬಳಿಕ ಮೊದಲು ಪಂಚಮಿ ರಥೋತ್ಸವ ನೆರವೇರಿತು. ನಂತರ ಅಸಂಖ್ಯಾತ ಭಕ್ತರ ಜಯಘೋಷದೊಂದಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com