ವಾಸ್ತು ದೋಷ ಪರಿಹಾರಕ್ಕೆ ತುಳಸಿ ಗಿಡ

ತುಳಸಿ ಗಿಡವು ಒಂದು ಅದ್ಭುತವಾದ ಔಷಧೀಯ ಸಸ್ಯವಾಗಿದೆ. ಅಲ್ಲದೆ ವಾಸ್ತು ಶಾಸ್ತ್ರದಲ್ಲಿ ಈ ತುಳಸಿ ಗಿಡವು ಸಕಲ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಸುಖ ಸಂತೋಷದಿದ ಬಾಳಬಹುದು...
ತುಳಸಿ ಗಿಡ
ತುಳಸಿ ಗಿಡ

ಭಾರತದಲ್ಲಿ ವಾಸ್ತುಶಾಸ್ತ್ರಕ್ಕೆ ಇನ್ನಿಲ್ಲದ ಮಹತ್ವ ನೀಡಲಾಗಿದೆ. ಅದೇ ರೀತಿ ದಿಕ್ಕುಗಳ ವಿಷಯಗಳು ಭಾರತೀಯ ವಾಸ್ತುಶಾಸ್ತ್ರದ ವಿಚಾರದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಉತ್ತರ ಭಾಗಕ್ಕೆ ತಲೆ ಹಾಕಿ ಮಲಗಬಾರದು. ಆಗ್ನೇಯದಲ್ಲಿ ತ್ಯಾಜ್ಯಗಳ ವಿಲೇವಾರಿ ಆಗಬಾರದು. ನೀರಿಗಿಂತ ಎತ್ತರದ ಭಾಗಕ್ಕೆ ಬೆಂಕಿಯ ಒಲೆಗಳು ಬರಬಾರದು. ನೀರಿನ ವಿಚಾರ ತಗ್ಗಿನಲ್ಲೇ ಇರುವಂತಾದರೆ ಅದು ಹರಿಯಲು ಸುಲಭವಾಗದೇ, ನಿಂತ ನೀರಾಗುವ ಅಪಾಯ ಇರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ನಮ್ಮ ವಾಸ್ತು ಪರಂಪರೆಗೆ ಸೂಕ್ಷ್ಮವಾಗಿ ಹೇಳಿದೆ.

ತುಳಸಿ ಗಿಡವು ಒಂದು ಅದ್ಭುತವಾದ ಔಷಧೀಯ ಸಸ್ಯವಾಗಿದೆ. ಅಲ್ಲದೆ ವಾಸ್ತು ಶಾಸ್ತ್ರದಲ್ಲಿ ಈ ತುಳಸಿ ಗಿಡವು ಸಕಲ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಸುಖ ಸಂತೋಷದಿದ ಬಾಳಬಹುದು. ಪುರಾತನ ಗ್ರಂಥಗಳ ಪ್ರಕಾರ ತುಳಸಿಯು ಅಗೋಚರವಾಗಿ ಬಹಳ ಭಾರವನ್ನು ನೀಡುತ್ತದೆ. ಈ ತುಳಸಿಯ ಒಂದು ದಳವು ಶ್ರೀಮನ್ ನಾರಾಯಣನ ತೂಕಕ್ಕೆ ಸಮವಾಗಿದೆ.

ಈ ಸಸ್ಯಕ್ಕೆ ನಮ್ಮ ದೇಶದ ಜನ ಸಂಪ್ರದಾಯದಲ್ಲಿ ಪವಿತ್ರ ಸ್ಥಾನವಿದೆ. ಮನೆ ಮುಂದೆ ಬೆಳೆಸಿ ಪೂಜಿಸುವ ಪರಿಪಾಠವೂ ಇದೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಬೃಂದಾವನವಿರುತ್ತದೋ, ಆ ಮನೆಗೆ ಯಾವ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ ಎಂಬುದು ಹಿಂದೂ ಸಂಸ್ಕೃತಿಯಲ್ಲಿದೆ.

ಮನೆಯ ಪರಿಸರದಲ್ಲಿ ತುಳಸಿ, ಗುಲಾಬಿ, ಸಂಪಿಗೆ, ಕರವೀರ, ಬಿಲ್ವಪತ್ರೆ, ಮಜ್ಜಿಗೆ ಹುಲ್ಲು, ಸರ್ಪಗಂಧಿ, ಬಾಳೆ, ತೆಂಗು, ಪೇರಲ, ಬಿಂಬಲದಂಥ ಸಸ್ಯಗಳು ಬೆಳೆದರೆ, ಸೇವಂತಿಗೆ, ಮಲ್ಲಿಗೆ, ಜಾಜಿ, ನಿತ್ಯ ಪುಷ್ಪಗಳಂಥವನ್ನು ಬೆಳೆಯುವುದು ಉತ್ತಮವೇ. ನಿಷಿದ್ಧವೇನಲ್ಲ. ಮನೆಯಲ್ಲಿನ ದೇವರ ಪೂಜೆಗೆ ಈ ಗಿಡಗಳು ಅವಶ್ಯವಾಗಿಬೇಕು. ಈ ಹೂಗಳು ಗಿಡ, ತುಳಸಿ ಗಿಡ ಮುಂತಾದವು ಒಂದು ಸೊಗಸನ್ನೂ ಮನೆಯ ಪರಿಸರಕ್ಕೆ ನೀಡುತ್ತವೆ. ವಿನಾಕಾರಣ ಹೂ ಗಿಡಗಳ, ಹಣ್ಣು ಕಾಯಿಗಳ ಗಿಡ, ಮರಗಳ ವಿಚಾರದಲ್ಲಿ ಭಯದ ಅವಶ್ಯಕತೆಯೇ ಇಲ್ಲ.

ವಾಸ್ತು ಶಾಸ್ತ್ರದ ಪ್ರಕಾರ ಎಲ್ಲಿ ಭಾರ ಬೇಕೋ ಅಥವಾ ಎಲ್ಲಿ ವಾಸ್ತು ದೋಷವಿದೆಯೋ ಅಲ್ಲಿ ಇಟ್ಟು ಪೂಜಿಸಬೇಕು. ಸಾಮಾನ್ಯವಾಗಿ ನೈಋತ್ಯ ಮತ್ತು ದಕ್ಷಿಣದಲ್ಲಿ ಭಾರವಿರಬೇಕಾಗುತ್ತದೆ. ಈ ದಿಕ್ಕುಗಳಲ್ಲಿ ಸ್ಥಾಪಿಸಿದರೆ ಸಮತೋಲನ ಮಾಡಬಹುದು. ಆದರೆ ಇದು ದೇವರಿಗೆ ಸಮಾನವೆಂದು ಈಶಾನ್ಯದಲ್ಲಿ ಬೆಳೆಸಿದರೆ ಕೆಲಸ ಕಾರ್ಯಗಳಲ್ಲಿ ತೊಂದರೆ ಮತ್ತು ಮಾನಸಿಕವಾಗಿ ಅಸಮತೋಲನ ಪಡಬೇಕಾಗುತ್ತದೆ.

ಆದರೆ ಈಗಾಗಲೇ ನೈಋತ್ಯದಲ್ಲಿ ನೀರಿನ ಟ್ಯಾಂಕ್ ಇದ್ದರೆ ಆ ಜಾಗದಲ್ಲಿ ಇಡಬಾರದು ಪಶ್ಚಿಮ ಅಥವಾ ದಕ್ಷಿಣದಲ್ಲಿಡಬೇಕು ಮತ್ತು ಗೃಹ ಪ್ರವೇಶಕ್ಕೆ ಮೊದಲು ಮೂರು ದಿನ ಮುಂಚಿತವಾಗಿ ತುಳಸಿ ಗಿಡವನ್ನು ಇಟ್ಟು ನೀರೆರೆಯಬೇಕು. ಈ ಗಿಡವು ಒಣಗಿದರೆ ವಾಸ್ತು ದೋಷ ಅಥವಾ ಬೇರಾವುದೋ ದೋಷವಿದೆ ಎಂದು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ.

ಈ ಪವಿತ್ರವಾದ ತುಳಸಿ ಗಿಡವನ್ನುಎಲ್ಲಿ ಪೂಜಿಸುತ್ತಾರೋ ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ಶ್ರೀ ಲಕ್ಷ್ಮೀ, ಸರಸ್ವತಿ, ಮಂಗಳಗೌರಿ, ಸಪ್ತ ಋಷಿಗಳು, ಸಪ್ತ ಕನ್ಯೆಯರು, ಅಷ್ಟ ದಿಕ್ಪಾಲಕರು, 33 ಕೋಟಿ ದೇವತೆಗಳು, ಸಪ್ತ ಸಮುದ್ರಗಳು, ಸರ್ವ ತೀರ್ಥಗಳು, ಸರ್ವ ಜೀವ ನದಿಗಳು, ಯಕ್ಷ ಕಿನ್ನರ ಕಿಂಪುರುಡ, ಗರುಡು ಗಂಧರ್ವರು, ಚತುರ್ವೇದಗಳು, ಸಪ್ತ ಕೋಟಿ ಮಹಾ ಮಂತ್ರಗಳನ್ನು ಅಷ್ಟ ದಶ ಪುರಾಣಗಳು, ಕಾಮಧೇನು, ಕಲ್ಪ ವೃಕ್ಷಾದಿಗಳು ಇರುತ್ತಾರೆಂದು ಅಗಸ್ತ್ಯ ಸಂಹಿತೆಯಲ್ಲಿ ಉಲ್ಲೇಖವಾಗಿದೆ.

- ವಿಶ್ವನಾಥ್.ಎಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com