ತ್ರಿಮೂರ್ತಿಗಳ ದಿವ್ಯ ತೇಜಸ್ಸುಗಳು, ಋಷಿ ಆಶ್ರಮದ ತೇಜಸ್ಸು ಸೇರಿ ಒಂದಾಗಿ ಮೂರು ಮುಖಗಳ, ಆರು ಕೈಗಳನ್ನು ಹೊಂದಿದ ರೂಪದಲ್ಲಿ ದತ್ತಾತ್ರೇಯರು ಜನ್ಮಿಸುತ್ತಾರೆ. ತ್ರಿಮೂರ್ತಿಗಳ ಸ್ವರೂಪರಾಗಿರುವ ದತ್ತಾತ್ರೇಯರ ತತ್ವ ದತ್ತಾದ್ವೈತ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಬೇಧ ಬುದ್ಧಿಯನ್ನು ತೋರದ ತತ್ವವೇ ದತ್ತಾತ್ರೇಯರ ಹಾಗೂ ದತ್ತಾದ್ವೈತ ತತ್ವದ ವಿಶೇಷವಾಗಿದೆ. ಉಪನಿಷತ್ ಗಳಲ್ಲಿರುವ ಇದೇ ತತ್ವ ಮುಂದಿನ ದಿನಗಳಲ್ಲಿ ಸಮಾಜ ಸುಧಾರಣೆಗಾಗಿ ಆವಿರ್ಭವಿಸಿದ ಶಂಕರರ ಅದ್ವೈತ ತತ್ವದ ಪ್ರತಿಪಾದನೆಗೂ ಆಧಾರವಾಗುತ್ತದೆ.