ಪಂಚ ಕೇದಾರಗಳಲ್ಲಿ ಎರಡನೆಯದಾಗಿರುವ ತುಂಗನಾಥ್ ಗೂ ಮಹಾಭಾರತಕ್ಕೂ ನಂಟಿದೆ. ಮಹಾಭಾರತದ ಕುರುಕ್ಷೇತ್ರದ ಯುದ್ಧದಲ್ಲಿ ಹತ್ಯೆ ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕಾಗಿ ಪಾಂಡವರು ನಿಶ್ಚಯಿಸುತ್ತಾರೆ. ಆದ್ದರಿಂದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಕೇದಾರದಲ್ಲಿರುವ ಶಿವನ ಅನುಗ್ರಹ ಪಡೆಯಲು ಮುಂದಾಗುತ್ತಾರೆ. ಆದರೆ ಪಾಂಡವರ ಘನಘೋರ ಪಾತಕ ಕೃತ್ಯದ ಬಗ್ಗೆ ಸಿಟ್ಟುಗೊಂಡಿದ್ದ ಶಿವ ಸೆಟೆದು ಪಾಂಡವರತ್ತ ಮುಖಮಾಡಲಿಲ್ಲ. ಪಾಂಡವರ ಪಾಪಕ್ಕೆ ಮುಕ್ತಿ ನೀಡುವ ಮನಸ್ಸಿಲ್ಲದೇ ಶಿವ ನಂದಿಯ ರೂಪ ಧರಿಸಿ ಹಿಮಾಲಯದ ಗರ್ಹ್ವಾಲ್ ನಲ್ಲಿರುವ ಗುಪ್ತಾಕ್ಷಿಯಲ್ಲಿ ಅದೃಶ್ಯನಾಗುತ್ತಾನೆ. ಆದರೆ ಪಾಂಡವರಿಗೆ ಏನೋ ವಿಶೇಷವಾದ ಘಟನೆ ನಡೆದಿದೆ ಎಂಬುದು ಅರಿವಿಗೆ ಬರುತ್ತದೆ. ತಕ್ಷಣವೇ ದೈತ್ಯದೇಹಿ ಭೀಮ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ. ಆ ಪ್ರದೇಶದಲ್ಲಿದ್ದ ಎಲ್ಲಾ ಜಾನುವಾರುಗಳು ಅವನ ಕಾಲಿನಡಿ ನುಸುಳಿ ಹೋಗುತ್ತವೆ. ಆದರೆ ಒಂದು ನಂದಿ ಮಾತ್ರ ಹೋಗದೆ ಹಾಗೇ ನಿಂತು ಬಿಡುತ್ತದೆ. ಇದನ್ನು ಗಮನಿಸಿದ ಭೀಮ ಈತನೇ ಶಂಕರನೆಂದು ಖಚಿತವಾಗಿ ತಿಳಿದು ಅದನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ನೆಲದಲ್ಲಿ ಇಳಿದು ಬಿಡುತ್ತದೆ. ಆಗ ಎತ್ತಿನ ಡುಬ್ಬ ಮಾತ್ರ ಕೈಗೆ ಸಿಕ್ಕಿ ಅದನ್ನೇ ಹಿಡಿದು ಮೇಲಕ್ಕೆತ್ತುತ್ತಾನೆ. ಎತ್ತಿನ ಡುಬ್ಬ ಮಾತ್ರ ಕೇದಾರನಾಥದಲ್ಲಿ ಉಳಿದು ಬಿಡುತ್ತದೆ. ಶಿರೋ ಭಾಗ ರುದ್ರನಾಥ, ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ಹಾಗೂ ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸುತ್ತಾನೆ.