ಅನನ್ಯ ಆಧ್ಯಾತ್ಮಿಕ ಸಾಧನೆ ಮಾಡಿದ ಸಾಧುಗಳಿಗೆ ಹಾಗೂ ಜ್ಞಾನ ಪಡೆದ ಮುಮುಕ್ಷುಗಳಿಗೆ ಮಾತ್ರ ಗೋಚರವಾಗುತ್ತದೆ ಈ ಸಿದ್ಧಾಶ್ರಮ. ಇದರ ಜೊತೆಗೆ ಮತ್ತೊಂದು ವಿಶೇಷವಾದ ಸಂಗತಿಯೆಂದರೆ ಇದು ಬೌದ್ಧರಿಗೂ ಪವಿತ್ರವಾದ ಕ್ಷೇತ್ರ ಬೌದ್ಧರು ಸಿದ್ಧಾಶ್ರಮವನ್ನು ಶಂಭಾಲ ಅಥವಾ ಶಂಗ್ರಿ-ಲಾ ಎಂದು ಕರೆಯುತ್ತಾರೆ. ಇದು ಬೌದ್ಧ ಧರ್ಮದಲ್ಲಿ ಉಲ್ಲೇಖಗೊಂಡಿರುವ ಒಂದು ದೈವಿಕ ನಗರಿ. ಅಷ್ಟೇ ಅಲ್ಲ ರಾಮಾಯಣ-ಮಹಾಭಾರತದಲ್ಲೂ ಸಿದ್ಧಾಶ್ರಮದ ಉಲ್ಲೇಖವಿದೆ, ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರೂ ಸಹ ಸಿದ್ಧಾಶ್ರಮವನ್ನು ಸಂದರ್ಶಿಸಿದ್ದರು ಎನ್ನುವುದಕ್ಕೆ ಉಲ್ಲೇಖವಿದೆ. ಟಿಬೇಟ್ ನ ಬೌದ್ಧ ಸನ್ಯಾಸಿಗಳೂ ಸೇರಿದಂತೆ ಭಾರತದ ಹಲವು ಯೋಗಿಗಳು ಈ ಸಿದ್ಧಾಶ್ರಮವನ್ನು ಸಂದರ್ಶಿಸಿದ್ದಾರೆ. ಸಿದ್ಧಾಶ್ರಮದಲ್ಲಿರುವ ಯೋಗಿಗಳು ಅಮರ ಜೀವಿಗಳೆಂದೂ ಇಲ್ಲಿಗೆ ಭೇಟಿ ನೀಡಿದವರಿಗೆ ಮೃತ್ಯುವನ್ನು ಜಯಿಸುವ ಶಕ್ತಿ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಅಪಾರವಾದ ಆಧ್ಯಾತ್ಮಿಕ ಶಕ್ತಿ ಸಿದ್ಧಿಸಿಕೊಳ್ಳುವುದರ ಮೂಲಕ ಮಾತ್ರ ಸಿದ್ಧಾಶ್ರಮವನ್ನು ಸಂದರ್ಶಿಸುವುದಕ್ಕೆ ಸಾಧ್ಯವಾಗಿದೆ.