

ಉಡುಪಿ ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರ, ದೇವಾಲಯಗಳ ಪೈಕಿ ಕಟ್ಕೆರೆ ಶ್ರೀ ಮಹಾದೇವಿ ಕಾಳಿಕಾಂಬ ದೇವಾಲಯವೂ ಒಂದು. ಕಟ್ಕೆರೆ ಕ್ಷೇತ್ರದ ಕಾಳಿಕಾಂಬ ದೇವಾಲಯದಲ್ಲಿ ಕಾಳಿಕಾಂಬಾ ಮಾತೆಯ ಭವ್ಯವಾದ 10 -12 ಎತ್ತರದ ವಿಗ್ರಹ ಇರುವುದು ದೇವಾಲಯದ ವಿಶೇಷತೆಯಾಗಿದೆ.
ಕಾಳಿಕಾಂಬ ದೇವಾಲಯ ಉತ್ತರಾಭಿಮುಖವಾಗಿ ನಿರ್ಮಿಸಲಾಗಿದ್ದು, ಜಾತ್ರೆ ಸಂದರ್ಭಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಕಟ್ಕೆರೆ ಕ್ಷೇತ್ರದ ಕಾಳಿಕಾಂಬ ದೇವಾಲಯಕ್ಕೆ ತನ್ನದೇ ಅದ ಐತಿಹ್ಯವಿದ್ದು, ಇಲ್ಲಿ ನೆಲೆಯಾಗುವುದಕ್ಕೂ ಮುನ್ನ, ಮಹಾದೇವಿ ಎಂಬ ಹೆಸರಿನಿಂದ ಕುಟುಂಬವೊಂದರಲ್ಲಿ ಜನಿಸಿರುತ್ತಾಳೆ ಎಂಬ ಪ್ರತೀತಿ ಇದೆ.
ಮಹಾದೇವಿಯ ಸಹೋದರ ಸಹೋದರಿಯರು ಸೇರಿದಂತೆ ಕುಟುಂಬದವರು ಒಮ್ಮೆ ಉತ್ಸವವೊಂದಕ್ಕೆ ಹೋಗಲು ನಿರ್ಧರಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಮಹಾದೇವಿಗೆ ಕಾಲುಬೇನೆ ಇರುತ್ತದೆ, ಆದರೂ ಉತ್ಸವಕ್ಕೆ ನಡೆದೇ ಹೋಗಲು ನಿರ್ಧರಿಸುತ್ತಾಳೆ ಮಹಾದೇವಿ. ಆದರೆ ನಡೆಯುತ್ತಾ ಕಾಲು ಬೇನೆ ಉಲ್ಬಣಗೊಳ್ಳುತ್ತದೆ. ತಂಗಿಯ ವೇದನೆಯನ್ನು ಕಂಡ ಮಹಾದೇವಿಯ ಸಹೋದರ ಹಾಯ್ಗುಳಿ, ತನ್ನ ಹೆಗಲ ಮೇಲೆ ಕೂರಿಸಿಕೊಂಡು ಮುನ್ನಡೆಯುತ್ತಾನೆ. ಹೀಗೆ ಮುಂದೆ ಸಾಗುತ್ತಾ ಇದ್ದಂತೆ ಮಹಾದೇವಿಯ ಇತರ ಸಹೋದರ- ಸಹೋದರಿಯರು ಮುಂದೆ ಹೋಗಿರುತ್ತಾರೆ. ಆದರೆ ಮಹಾದೇವಿಯನ್ನು ಹೊತ್ತು ಸಾಗುತ್ತಿದ್ದ ಸಹೋದರನಿಗೆ ಆಕೆಯ ಭಾರವನ್ನು ಸೈರಿಸಲು ಕಷ್ಟವಾಗುತ್ತದೆ. ಆದರೂ ಸಹ ಮಹಾದೇವಿಯನ್ನು ಹೊತ್ತು ಮುಂದೆ ಸಾಗುತ್ತಾನೆ. ಮಾರ್ಗ ಮಧ್ಯೆ, ಕೆರೆಯೊಂದು ಕಾಣಿಸುತ್ತದೆ. ಆ ಸ್ಥಳವನ್ನು ತಲುಪಿದ ಕೂಡಲೇ ಮಹಾದೇವಿಯು ತನ್ನ ಅಣ್ಣನಿಗೆ ಇಲ್ಲಿಯೇ ನಿಲ್ಲಿಸು ಎಂದು ಹೇಳುತ್ತಾಳೆ ಆದರೆ ಅವಳ ಮಾತನ್ನು ಕೇಳದೇ ಮುಂದೆ ಸಾಗಿದಾಗ ಕೋಪಗೊಂಡ ಮಹಾದೇವಿ ತನ್ನ ಅಣ್ಣನ ಹೆಗಲಿಗಿಂತ ಎತ್ತರಕ್ಕೆ ಬೆಳೆದು ಆತನ ಶಿರವನ್ನು ಮೆಟ್ಟಿ ನಿಲ್ಲುತ್ತಾಳೆ. ಅಲ್ಲಿನ ಸ್ಥಳೀಯ ಪ್ರಕೃತಿ ಸೊಬಗಿಗೆ ಮನಸೋತ ಮಹಾದೇವಿ ಅಲ್ಲಿಯೇ ಮಹಾದೇವಿ ಕಾಳಿಕಾಂಬೆಯಾಗಿ ನೆಲೆಸುತ್ತಾಳೆ ಎಂಬುದು ಕಟ್ಕೆರೆಯಲ್ಲಿರುವ ಕಾಳಿಕಾಂಬ ದೇವಿ ದೇವಾಲಯದ ಐತಿಹ್ಯ ಹಿನ್ನೆಲೆಯಾಗಿದೆ. ಕಾಳಿಕಾಂಬ ದೇವಿಗೆ ಪ್ರತಿ ಶುಕ್ರವಾರ ಮತ್ತು ಸಂಕ್ರಾಂತಿ ದಿನದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಿಂದ ಹಾಲಾಡಿ ಮಾರ್ಗವಾಗಿ 3 -4 ಕಿ ಮೀ ದೂರ ಸಾಗಿದರೆ ಕಟ್ಕೆರೆ ಮಹಾದೇವಿ ಕಾಳಿಕಾಂಬ ದೇವಾಲಯ ತಲುಪಬಹುದು.
Advertisement