ಬಾಲ್ಯದಿಂದಲೇ ದೈವಭಕ್ತಿ, ಆಸಕ್ತಿಯುತ ಅಧ್ಯಯನವೇ ಮೊದಲಾದ ಗುಣಗಳಿಂದ ಸಂಪನ್ನರಾದ ಹಸ್ತಗಿರಿ ಗುರುಗಳ ಮೆಚ್ಚುಗೆಗೂ ಪಾತ್ರವಾಗಿರುತ್ತಾರೆ. ಹಸ್ತಗಿರಿ ತಮ್ಮ ಗುರುಗಳಲ್ಲಿ ಅಧ್ಯಯನ ಮಾಡುತ್ತಿದ್ದ ಅವಧಿಯಲ್ಲಿ ಅದ್ವೈತ ಸಿದ್ಧಾಂತದ ಪಂಡಿತರಾದ ನರಸಿಂಹ ಮಿಶ್ರಾ ಎಂಬುವವರು ಕಂಚಿ(ಕಾಂಚೀಪುರ)ಕ್ಕೆ ಭೇಟಿ ನೀಡಿ ಅಲ್ಲಿನ ವೇದ-ವಿದ್ವಾಂಸರೊಂದಿಗೆ ವಾದ ನಡೆಸಿ ಅದ್ವೈತದ ಶ್ರೇಷ್ಠತೆಯನ್ನು ಪ್ರಚಾರ ಮಾಡಲು ಉತ್ಸುಕರಾಗಿರುತ್ತಾರೆ. ಒಂದು ವೇಳೆ ನರಸಿಂಹ ಮಿಶ್ರಾ ಅವರ ಬಳಿ ವಾದದಲ್ಲಿ ಸೋತರೆ ಪ್ರತಿವಾದಿಗಳು ಅದ್ವೈತ ಮತವನ್ನು ಅನುಸರಿಸಬೇಕಾಗುತ್ತದೆ, ಅಥವಾ ನರಸಿಂಹ ಮಿಶ್ರರೇ ವಾದಲ್ಲಿ ಸೋತರೆ ಪ್ರತಿವಾದಿಗಳ( ವೈಷ್ಣವ) ಮತವನ್ನು ಅಂಗೀಕರಿಸಬೇಕಾಗುತ್ತದೆ ಎಂಬುದು ವಾದದ ಷರತ್ತು. ಹೀಗೆಯೇ ವಾದ ಮುಂದುವರೆಯುತ್ತಾ, ನರಸಿಂಹ ಮಿಶ್ರಾ, ಸ್ವಾಮಿ ನಯನ ವರದಾಚಾರ್ಯಾರ್ ಅವರನ್ನು ವಾದಕ್ಕೆ ಆಹ್ವಾನಿಸುತ್ತಾರೆ. ಆದರೆ ಇದನ್ನೂ ನಿರಾಕರಿಸಲೂ ಸಾಧ್ಯವಾಗದೆ ಒಪ್ಪಲೂ ಸಾಧ್ಯವಾಗದೇ ವರದಾಚಾರ್ಯಾರ್ ಅವರು ಗೊಂದಲದಲ್ಲಿರುತ್ತಾರೆ. ಇತ್ತ ವರದಾಚಾರ್ಯಾರ್ ಅವರ ಶಿಷ್ಯರಾಗಿದ್ದ ಹಸ್ತಗಿರಿ ಅನಂತಾಚಾರ್ ತಮ್ಮ ಗುರುಗಳ ಗೊಂದಲಕ್ಕೆ ಕಾರಣವಾಗಿರುವ ಅಂಶವನ್ನು ಹಿರಿಯ ವಿದ್ಯಾರ್ಥಿಗಳಿಂದ ತಿಳಿದು, ನರಸಿಂಹ ಮಿಶ್ರಾ ಅವರೊಂದಿಗೆ ವಾದ ನಡೆಸಲು ಗುರುಗಳ ಅನುಮತಿ ಕೇಳುತ್ತಾರೆ. ಇದರಿಂದ ಅಚ್ಚರಿಗೊಳಗಾದ ವರದಾಚಾರ್ಯಾರ್ ಅವರು, ಹಸ್ತಗಿರಿಗೆ ಹಯಗ್ರೀವ ಮಂತ್ರೋಪದೇಶದ ಮೂಲಕ ಆಶೀರ್ವಾದ ಮಾಡಿ ಕಳಿಸುತ್ತಾರೆ. ಅಂತಿಮವಾಗಿ ನರಸಿಂಹ ಮಿಶ್ರಾ ಅವರೊಂದಿಗೆ ಪುಟ್ಟ ಬಾಲಕ ಹಸ್ತಗಿರಿ ವಾದದಲ್ಲಿ ಜಯಗಳಿಸಿ, ಪಂಡಿತ- ವಿದ್ವಾಂಸರಿಂದ ಮೆಚ್ಚುಗೆಗಳಿಸುತ್ತಾರೆ. ಇದರಿಂದ ಅತ್ಯಂತ ಸಂತುಷ್ಟರಾದ ವರದಾಚಾರ್ಯಾರ್ ಅವರು, ಹಸ್ತಗಿರಿಗೆ ಪ್ರತಿವಾದಿ ಭಯಂಕರ ಎಂಬ ಬಿರುದು ನೀಡುತ್ತಾರೆ.