ಉಪನಿಷತ್ ಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದ ಮುಘಲ್ ರಾಜ ದಾರಾ ಶಿಕೊಹ್!

ಭಾರತೀಯ ಇತಿಹಾಸದಲ್ಲಿ ಇಲ್ಲಿನ ಸಂಸ್ಕೃತಿ, ದೇವಾಲಯಗಳ ಮೇಲೆ ಮುಘಲರ ಆಕ್ರಮಣ ಎಂದಿಗೂ ಮರೆಯಲಾಗದ ಕರಾಳ ಇತಿಹಾಸ.
ಉಪನಿಷತ್ ಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದ ಮುಘಲ್ ರಾಜ ದಾರಾ ಶಿಕೊಹ್!
ಉಪನಿಷತ್ ಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದ ಮುಘಲ್ ರಾಜ ದಾರಾ ಶಿಕೊಹ್!

ಭಾರತೀಯ ಇತಿಹಾಸದಲ್ಲಿ ಇಲ್ಲಿನ ಸಂಸ್ಕೃತಿ, ದೇವಾಲಯಗಳ ಮೇಲೆ ಮುಘಲರ ಆಕ್ರಮಣ ಎಂದಿಗೂ ಮರೆಯಲಾಗದ ಕರಾಳ ಇತಿಹಾಸ. ಮೊಹಮ್ಮದ್ ಘಜ್ನಿ ಆದಿಯಾಗಿ, ಔರಂಗಜೇಬ್ ನವರೆಗೂ ಭಾರತದ ಹೆಮ್ಮೆಯ ಪ್ರತೀಕವಾಗಿದ್ದ ದೇವಾಲಯಗಳು, ಗ್ರಂಥಗಳಿಗೆ ಉಂಟಾದ ಹಾನಿ ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ.

ಆದರೆ ಮುಘಲ್ ಆಡಳಿತಗಾರರನ್ನು ತನ್ನತ್ತ ಸೆಳೆಯುವ ಶಕ್ತಿ ಭಾರತದ ಸಂಸ್ಕೃತಿಗಿದೆ. ಇಲ್ಲಿನ ಪ್ರಾಚೀನ ಋಷಿಗಳ ಸಂದೇಶಗಳು ನಳಂದಾದಂತಹ ವಿಶ್ವಶ್ರೇಷ್ಠ ವಿಶ್ವವಿದ್ಯಾನಿಲಯವನ್ನು ಸುಟ್ಟು ಕಾರಕಲಾಗಿಸಿದ್ದ ಮುಘಲ್ ಆಡಳಿತಗಾರರು ಕಾಲಕ್ರಮೇಣ ಭಾರತೀಯ ಸಂಸ್ಕೃತಿಯನ್ನು ಒಪ್ಪುವಂತೆ ಮಾಡಿದ ಉದಾಹರಣೆಗಳಿವೆ. ಅದಕ್ಕೆ ಉತ್ತಮ ನಿದರ್ಶನ ಮುಘಲ್ ದೊರೆ  ಶಾ ಜಹಾನ್ ನ ಮಗ, ಔರಂಗಜೇಬ್ ನ ಸಹೋದರ ದಾರಾ ಶಿಕೋಹ್!

ದಾರಾ ಶಿಕೋಹ್ ಸ್ವತಃ ಮುಘಲ್ ಸಾಮ್ರಾಟನ ಮಗನಾಗಿದ್ದರೂ ಉಪನಿಷತ್ ಗಳತ್ತ ತೀವ್ರವಾಗಿ ಆಕರ್ಷಿತನಾಗಿದ್ದ. ಅಷ್ಟೇ ಅಲ್ಲದೆ ಸೂಫಿ ಪಂಥದ ಅನುಯಾಯಿಯಾಗಿದ್ದ ದಾರಾ ಶಿಕೋಹ್ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವಾದರಗಳನ್ನು ಹೊಂದಿದ್ದ. ಇಸ್ಲಾಮ್ ನ ಸಂಸ್ಕೃತಿಗಳ ಜೊತೆ ಜೊತೆಗೆ ಭಾರತೀಯ ಆಧ್ಯಾತ್ಮವನ್ನು ಅಧ್ಯಯನ ಮಾಡಿದ್ದ ದಾರಾ ಶಿಕೋಹ್ ದೇವರೊಬ್ಬನೇ ಎಂಬ ತತ್ವದ ಪ್ರತಿಪಾದಕನೂ ಹೌದು.

ಸತ್ಯಾನ್ವೇಷಣೆಯಲ್ಲಿ ತೊಡಗಿದ್ದ ದಾರಾ ಶಿಕೋಹ್ ಗೆ ಅಂತಿಮ ಸತ್ಯವನ್ನು ಕಂಡುಕೊಳ್ಳಲು ನೆರವಾಗಿದ್ದು ಭಾರತೀಯ ಅಧ್ಯಾತ್ಮ, ವೇದಾಂತ ಚಿಂತನೆಗಳು, ಉಪನಿಷತ್ ನ ಸಂದೇಶಗಳು. ಶಾ ಜಹಾನ್ ನ ಹಿರಿಯ ಮಗನಾಗಿದ್ದ ದಾರಾ ಶಿಕೋಹ್ ಶಾ ಜಹಾನ್ ನಂತರ ಮುಘಲ್ ರಾಜನಾಗಬೇಕಿತ್ತು. ಆದರೆ ಕಿರಿಯ ಸಹೋದರ ಔರಂಗಾಜೇಬ್ ನ ಕ್ರೌರ್ಯದಿಂದಾಗಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಅಧಿಕಾರಕ್ಕಾಗಿ ನಡೆದ ನಿರಂತರ ಹೋರಾಟಗಳಿಂದ ಹೈರಾಣಾಗಿದ್ದ ದಾರಾ ಶಿಕೋಹ್ ನ ಚಿತ್ತ ಕ್ರಮೇಣವಾಗಿ ಭಾರತೀಯ ವೇದಾಂತ ಚಿಂತನೆಗಳಿಗೆ ಪೂರಕವಾಗಿದ್ದ ವೇದ, ವೇದಾಂತ ಉಪನಿಷತ್ ಗಳನ್ನು ಹಾಗು ಇಸ್ಲಾಮ್ ಧರ್ಮದ ಗ್ರಂಥಗಳ ಅಧ್ಯಯನದಲ್ಲಿ ತೊಡಗುತ್ತಾನೆ. ಅಧ್ಯಯನ ಮಾಡುತ್ತಾ, ಉಪನಿಷತ್ ಗಳಲ್ಲಿರುವ ಸಂದೇಶವನ್ನೇ ಇಸ್ಲಾಮ್ ನ ಧರ್ಮ ಗ್ರಂಥವಾಗಿರುವ ಕಿತಾಬ್- ಅಲ್- ಮಕ್ನುನ್ ನಲ್ಲೂ ಹೇಳಲಾಗಿದೆ ಎಂಬುದನ್ನು ಅರಿತುಕೊಳ್ಳುತ್ತಾನೆ. ನಂತರದ ದಿನಗಳಲ್ಲ ಉಪನಿಷತ್ ಗಳತ್ತ ತೀವ್ರವಾಗಿ ಆಕರ್ಷಿತನಾದ ದಾರಾ ಶಿಕೋಹ್ ಕಾಶಿಯ ಪಂಡಿತರ ನೆರವು ಪಡೆದು ಸರಿ ಸುಮಾರು 50 ಉಪನಿಷತ್ ಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡುತ್ತಾನೆ. ದಾರಾ ಶಿಕೋಹ್ ಉಪನಿಷತ್ ಗಳ ಸಂದೇಶವನ್ನು ಅನುವಾದ ಮಾಡಿದ  'ಸಿರ್-ಇ-ಅಕ್ಬರ್' (ಮಹಾರಹಸ್ಯ) ಎಂಬ ಹೆಸರಿನ ಅನುವಾದಿತ ಗ್ರಂಥ  ದೀರ್ಘಾವಧಿಯಲ್ಲಿ ಉಪನಿಷತ್ ಗಳ ಸಂದೇಶ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಪಡೆದು, ಪ್ರಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಪ್ರಭಾವ ಬೀರುತ್ತವೆ ಎಂಬುದು ಅನೇಕ ವಿದ್ವಾಂಸರ ಅಭಿಮಾತವಾಗಿದೆ. 
ದಾರಾ ಶಿಕೋಹ್ ಉಪನಿಷತ್ ಗಳನ್ನು ಮಾತ್ರವಷ್ಟೇ ಅನುವಾದ ಮಾಡದೇ, ಆಧ್ಯಾತ್ಮಿಕ ತತ್ವಗಳನ್ನು ವಿಶೇಷವಾಗಿ ಆಧರಿಸಿರುವ ಮತ್ತೊಂದು ಕೃತಿ ಪ್ರಬೋಧ ಚಂದ್ರೋದಯವನ್ನು ಸಹ ಪರ್ಷಿಯನ್ ಭಾಷೆಗೆ ಅನುವಾದಿಸಿದ್ದ ಈ ಗ್ರಂಥದ ಹೆಸರು ಗುಲ್ಜಾರ್-ಇ-ಹಲ್.  ಬಾಲ್ಯದಿಂದಲೇ ಭಾರತೀಯ ತತ್ವಶಾಶಾಸ್ತ್ರ, ಸಂಸ್ಕೃತಿಗಳ ಬಗ್ಗೆ ತೀವ್ರ ಆಸಕ್ತಿ ಹೊಂದ್ದಿದ್ದ ದಾರಾ ಶಿಕೊಹ್ ಗೆ  ಆಧ್ಯಾತ್ಮಿಕ ವಿಷಯದ ಚರ್ಚೆಗಳು ವಿಶೇಷವಾಗಿರುವ ಯೋಗವಾಸಿಷ್ಠ ರಾಮಾಯಣವನ್ನು ಅತೀವವಾಗಿ ಮೆಚ್ಚುಗೆಯಾಗಿ ಅದನ್ನು ಸಹ ಪರ್ಷಿಯನ್ ಭಾಷೆಗೆ ಅನುವಾದ ಮಾಡಿದ್ದ. ಅನುವಾದದ ಕೃತಿಗೆ ಮುನ್ನುಡಿ ಬರೆಯುತ್ತಾ ಯೋಗವಾಸಿಷ್ಠ ರಾಮಾಯಣದ ಬಗ್ಗೆ ದಾರಾ ಶಿಕೋಹ್ ತಾನು ಕಂಡ ಕನಸಿನ ಬಗ್ಗೆ ಹೀಗೆ ಹೇಳುತ್ತಾನೆ "ಈ ಪರ್ಷಿಯನ್ ಭಾಷೆಯ ಯೋಗವಾಸಿಷ್ಠವನ್ನು ಓದಿದ ಮೇಲೆ ರಾತ್ರಿ ಸ್ವಪ್ನದಲ್ಲಿ  ವಸಿಷ್ಠ ಋಷಿಗಳು ಮತ್ತು ಶ್ರೀರಾಮ ನಿಂತಿದ್ದರು. ವಸಿಷ್ಠರು ಕೈಗಳನ್ನು ನನ್ನ ಬೆನ್ನಿನ ಮೇಲೆ ಇಟ್ಟು, ಶ್ರೀರಾಮನಿಗೆ ‘ರಾಮ ಇವನೂ ನಿನ್ನಂತೆಯೇ ಸತ್ಯವನ್ನು ಹುಡುಕುತ್ತಿರುವ ನಿನ್ನ ಸಹೋದರ. ಇವನನ್ನು ಅಪ್ಪಿಕೊ ಎಂದಂತಾಯಿತು,  ಕೂಡಲೆ ಶ್ರೀರಾಮ ಪ್ರೀತಿಯಿಂದ ನನ್ನನ್ನು ಗಾಢವಾಗಿ ಆಲಂಗಿಸಿಕೊಂಡನು ಎಂದು ಹೇಳುತ್ತಾನೆ. ಇದು ದಾರಾ ಶಿಕೋಹ್ ಗೆ ರಾಮಾಯಣ, ಶ್ರೀರಾಮನ ಬಗೆಗಿದ್ದ ಅವ್ಯಾಜ ಪ್ರೀತಿ ಗೌರವಾದರಗಳನ್ನು ತಿಳಿಸುತ್ತದೆ.

ಕ್ರೌರ್ಯದಿಂದ ದಾಳಿ ಮಾಡುವ, ಕನಸಿನಲ್ಲಿ ಖಾಲೀಫನೊಂದಿಗೆ ಮಾತನಾಡಿದಂತೆ, ಎಲ್ಲೆಡೆಯೂ ಖಿಲಾಫತ್ ನ ಸಾಮ್ರಾಜ್ಯವನ್ನು ಸ್ಥಾಪಿಸುವ ಇರಾದೆಯನ್ನೇ ಹುಡುಕುವವ ಇತಿಹಾಸವನ್ನು ಹೊಂದಿದ್ದ ಆಡಳಿತಗಾರರ ನಡುವೆ ಮುಘಲ್ ಸಾಮ್ರಾಟನಾಗಿದ್ದರೂ ಭಾರತೀಯ ಸಂಸ್ಕೃತಿಗಳ, ಉಪನಿಷತ್ ಗಳ ಬಗ್ಗೆ ಅಪಾರ , ಗೌರವಾದರಗಳನ್ನು ಹೊಂದಿದ್ದ, ಪುರುಷೋತ್ತಮನಾದ ರಾಮನನ್ನು ಆಲಂಗಿಸಿಕೊಂಡ ಕನಸು ಕಾಣುವ ದಾರಾ ಶಿಕೋಹ್ ವಿಭಿವಾಗಿ ಕಾಣುತ್ತಾರೆ. 

-ಶ್ರೀನಿವಾಸ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com