ಬಲಿಪಾಡ್ಯಮಿಯೊಂದಿಗೆ ಮೂರೂ ದಿನಗಳ ದೀಪಾವಳಿ ಹಬ್ಬ ಮುಕ್ತಾಯಗೊಳ್ಳುತ್ತದೆ. ಅಮಾವಾಸ್ಯೆಯ ನಂತರ ಬರುವ ಪಾಡ್ಯಮಿಯಂದು ಬಲಿ ಚಕ್ರವರ್ತಿಯ ಪೂಜೆ ಮಾಡುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎನ್ನಲಾಗುತ್ತದೆ.
ದೀಪಾವಳಿ ಹಬ್ಬದ ಮೂರನೆಯ ಜನರೆಲ್ಲರೂ ಬಲೀಂದ್ರ ಪೂಜೆಯನ್ನು ಮಾಡುತ್ತಾರೆ. ಬಲೀಂದ್ರ ಹಿರಣ್ಯಕಶ್ಯಪನ ವಂಶಸ್ಥ. ಮಹಾ ವಿಷ್ಣು ಭಕ್ತ ಪ್ರಹ್ಲಾದನ ಮೊಮ್ಮಗ, ವಿರೋಚನನ ಮಗ. ಪ್ರಹ್ಲಾದನಂತೆ ಬಲಿಚಕ್ರವರ್ತಿಯೂ ಸಹ ವಿಷ್ಣು ಭಕ್ತನೇ ಆಗಿದ್ದ. ರಾಕ್ಷಸ ಕುಲದಲ್ಲಿ ಹುಟ್ಟಿಯೂ ಕೂಡ ಸಾತ್ವಿಕನಾಗಿದ್ದ ಬಲೀಂದ್ರ.
ಬಲೀಂದ್ರ ಮಹಾ ದಾನಿಯಾಗಿದ್ದ ರಾಜ ಏನೆ ಯಾಚಿಸಲಿ ಬಂದವರಿಗೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡುತ್ತಿದ್ಡ. ದಾನ ಮಾಡುವುದ ಶ್ರೇಷ್ಠ ಆದರೆ ಅಪಾತ್ರರಿಗೆ ಕೇಳಿದ ಕೂಡಲೇ ದಾನ ಮಾಡುವುದು ಸೂಕ್ತವಲ್ಲದ ಕಾರಣ. ಕೇಳಿದ ಕೂಡಲೇ ದಾನ ಮಾಡದಂತೆ ರಾಕ್ಷಸರ ಗುರುಗಳಾಗಿದ್ದ ಶುಕ್ರಾಚಾರ್ಯರು ಬಲೀಂದ್ರನಿಗೆ ಸಲಹೆ ನೀಡಿದ್ದರು. ಆದರೆ ಅವರ ಈ ಸಲಹೆಯನ್ನು ಬಲಿಚಕ್ರವರ್ತಿ ಗಂಭೀರವಾಗಿ ಪರಿಗಣಿಸಲಿಲ್ಲ. ಅಪಾತ್ರರಿಗೂ ಸಹ ತನ್ನ ಸಂಪತ್ತನ್ನು ದಾನ ಮಾಡುತ್ತಿದ್ದ. ಹೀಗೆಯೇ ಒಂದು ದಿನ ಬಲೀಂದ್ರ ಅಶ್ವಮೇಧ ಯಾಗ ನಡೆಸುತ್ತಿದ್ದಾಗ ಬಂದವರಿಗೆಲ್ಲಾ ದಾನ ನೀಡಲಾಗುತ್ತಿತ್ತು. ಇದೇ ಸಮಯದಲ್ಲಿ ವಾಮನ ರೂಪವನ್ನು ತಾಳಿ ಶ್ರೀ ವಿಷ್ಣು ಯಾಗ ನಡೆಯುವ ಸ್ಥಳಕ್ಕೆ ಬಂದು ದಾನ ನೀಡಬೇಕಾಗಿ ಕೇಳಿದ.
ದಾನ ಕೇಳಲು ಬಂದಿರುವುದು ಸಾಕ್ಷಾತ್ ವಿಷ್ಣುವೇ ಎಂಬುದನ್ನು ಅರಿತ ಶುಕ್ರಾಚಾರ್ಯರು ಬಲೀಂದ್ರನನ್ನ ಉಳಿಸಲು ಉಪಾಯವೊಂದನ್ನು ಮಾಡಿದರು. ಅದೇನೆಂದರೆ ದಾನ ನೀಡುವಾಗ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುತ್ತದೆ. ಈ ಪ್ರಕ್ರಿಯೆಯನ್ನು ತಪ್ಪಿಸಲು ಶುಕ್ರಾಚಾರ್ಯರು ಕಪ್ಪೆರೂಪ ತಾಳಿ ಕಮಂಡಲದ ರಂಧ್ರದಲ್ಲಿ ಸೇರಿಕೊಂಡರು. ಪರಿಣಾಮ ಕಮಂಡಲದಲ್ಲಿನ ನೀರು ಬೀಳಲಿಲ್ಲ. ಶುಕ್ರಾಚಾರ್ಯರ ಉಪಾಯವನ್ನು ಅರಿತ ವಿಷ್ಣು ದರ್ಭೆಯಿಂದ ಕಮಂಡಲದ ನಾಳಕ್ಕೆ ಚುಚ್ಚಿದ ಅದು ಕಪ್ಪೆಯ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. ನಂತರ ದಾನ ಬಲೀಂದ್ರ ವಾಮಾನನಿಗೆ ದಾನ ನೀಡುವ ಪ್ರಕ್ರಿಯೆ ಆರಂಭಿಸಿದ.
ವಾಮಾನನಿಗೆ ಏನು ಬೇಕು ಎಂದು ಬಲಿಚಕ್ರವರ್ತಿ ಕೇಳಿದಾಗ ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳಿದ, ಬಲಿಯು ಹೇಳಿದ ನಂತರ ವಾಮನನು ನೋಡುತ್ತಿದ್ದಂತೆ ತ್ರಿವಿಕ್ರಮನಾದ. ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡ ಮೂರನೇ ಹೆಜ್ಜೆಯನ್ನು ಆತನ ತಲೆ ಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದ. ಆದರೆ ಬಲೀಂದ್ರ ವಿಷ್ಣು ಭಕ್ತನಾಗಿದ್ದರಿಂದ ಆತನಿಗೆ ವಿಷ್ಣು ವರ ನೀಡಿದ, ಅದರ ಪ್ರಕಾರ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬಂದು ಜನರಿಂದ ಪೂಜೆಯನ್ನು ಸ್ವೀಕರಿಸಬಹುದು ಎಂಬುದಾಗಿತ್ತು. ಈ ಕಾರಣದಿಂದಲೇ ದೀಪಾವಳಿ ಹಬ್ಬದ ಮೂರು ದಿನಗಳನ್ನು ಅಂದರೆ ಆಶ್ವಯುಜ ಮಾಸದ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯವನ್ನು ಬಲಿರಾಜ್ಯವೆಂದು ಹೇಳುತ್ತಾರೆ.
ಅಷ್ಟೇ ಅಲ್ಲದೆ ಮಹಾಭಾರತದ ಕಾಲಘಟ್ಟದಲ್ಲಿ ಕಾರ್ತಿಕ ಶುದ್ಧ ಪಾಡ್ಯದ ದಿನದಂದು ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋಪಾಲಕರಿಗೆ ರಕ್ಷಣೆ ನೀಡಿದ ಎಂಬ ಪ್ರತೀತಿಯೂ ಇದೆ. ಈ ದಿನದಂದು ಗೋವರ್ಧನ, ಗೋ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಕೃಷ್ಣ, ಗೋಪ-ಗೋಪಿಯರ, ಇಂದ್ರ, ಹಸುಗಳ, ಕರುಗಳ ಚಿತ್ರಗಳನ್ನು ಜೋಡಿಸಿ ಮೆರವಣಿಗೆ ಮಾಡುತ್ತಾರೆ.
Advertisement