ಕದ್ರು ತನ್ನ ಉದ್ದೇಶ ಸಾಧಿಸಿಕೊಳ್ಳಲು ಕುದುರೆಯ ಬಾಲವನ್ನು ಕಪ್ಪು ಬಣ್ಣದಲ್ಲಿರುವಂತೆ ತೋರಿಸಲು ತನ್ನ ಸಾವಿರಾರು ಸರ್ಪಪುತ್ರರನ್ನು ಕರೆದು ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಹೇಳುತ್ತಾಳೆ. ಆದರೆ ಮೊದಲ ಪುತ್ರ ವಾಸುಕಿ ಸೇರಿದಂತೆ ಪ್ರಾರಂಭದಲ್ಲಿ ಯಾರೂ ಸಹ ಕದ್ರುವಿನ ಮಾತನ್ನು ಕೇಳಲಿಲ್ಲ. ಕುಪಿತಗೊಂಡ ಕದ್ರು ಜನಮೇಜಯ ರಾಜ ನಡೆಸುವ ಸರ್ಪ ಯಜ್ಞದಲ್ಲಿ ಬಿದ್ದು ಸಾಯಿರಿ ಎಂದು ಶಾಪ ಕೊಟ್ಟಳು. ಶಾಪದಿಂದ ಹೆದರಿದ ಸರ್ಪಗಳು ಕದ್ರು ಹೇಳಿದಂತೆಯೇ ಮಾಡಲು ಮುಂದಾಗುತ್ತವೆ. ಅಂತೆಯೇ ಉಚ್ಚೈಶ್ರವಸ್ ತಮ್ಮ ವಾಸ ಪ್ರದೇಶದ ಹತ್ತಿರಕ್ಕೆ ಬರುವ ಮುನ್ನವೇ ತಾಯಿ ಹೇಳಿದಂತೆ ಕುದುರೆಯ ಬಾಲಕ್ಕೆ ಗಂಟು ಹಾಕಿಕೊಳ್ಳುತ್ತವೆ. ಉಚ್ಚೈಶ್ರವಸ್ ಬರುವ ವೇಳೆಗೆ ಸರ್ಪಗಳು ಸುತ್ತಿಕೊಂಡ ಅದರ ಬಾಲ ಕಪ್ಪು ಬಣ್ಣದಲ್ಲಿ ಕಾಣಿಸುತ್ತಿರುತ್ತದೆ. ಒಪ್ಪಂದದ ಪ್ರಕಾರ ವಿನತೆ ಕದ್ರುವಿನ ದಾಸಿಯಾಗುತ್ತಾಳೆ. ಇದೇ ಸಂದರ್ಭದಲ್ಲಿ ವಿನತೆಯ ಎರಡನೇ ಪುತ್ರ ಗರುಡ, ವೈನತೇಯ ಜನಿಸುತ್ತಾನೆ. ಆತ ಮಹಾಶಕ್ತಿ ಶಾಲಿ, ಇಂದ್ರನಿಗಿಂತಲೂ ಶಕ್ತಿಶಾಲಿಯಾದವನನ್ನು ತಯಾರಿಸುತ್ತೇವೆ ಎಂಬ ವಾಲಖಿಲ್ಯ ಮಹರ್ಷಿಗಳ ಸಂಕಲ್ಪದ, ತಪಸ್ಸಿನ ಅನುಗ್ರಹದಿಂದ ಹುಟ್ಟಿದಾತ. ಆದ್ದರಿಂದಲೇ ಆತನಿಗೆ ಖಗೇಂದ್ರ (ಪಕ್ಷಿಗಳ ರಾಜ ಎಂಬ ಹೆಸರು) ತಾಯಿ ಹಾಗೂ ತನ್ನ ದಾಸ್ಯವನ್ನು ಕಂಡು ಬೇಸರಗೊಂಡ ವೈನತೇಯ ಸರ್ಪಗಳೊಂದಿಗೆ ಸಮಾಲೋಚನೆ ನಡೆಸಿ ದಾಸ್ಯದಿಂದ ಮುಕ್ತಿ ಪಡೆಯಲು ಏನು ಮಾಡಬೇಕೆಂದು ಕೇಳುತ್ತಾನೆ.