ಇನ್ನು ಸರ್ವಕಾಲಕ್ಕೂ ಸಲ್ಲುವ ಭಗವದ್ಗೀತೆಯಲ್ಲಿಯೂ ಅಶ್ವತ್ಥ ವೃಕ್ಷವನ್ನು ಬಣ್ಣಿಸಲಾಗಿದ್ದು, ಸಮಸ್ತ ವೃಕ್ಷಗಳಿಗೆ ಅಶ್ವತ್ಥ ವೃಕ್ಷವನ್ನು ರಾಜನನ್ನಾಗಿ ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೇ ಉಪನಿಷತ್ ಗಳಲ್ಲೂ ಅಶ್ವತ್ಥ ವೃಕ್ಷದ ಬಗ್ಗೆ ಉಲ್ಲೇಖಗಳಿದ್ದು, ಕಠೋಪನಿಷತ್ತಿನಲ್ಲಿ ಸಂಸಾರವನ್ನು ಅಶ್ವತ್ಥವೃಕ್ಷಕ್ಕೆ ಹೋಲಿಸಲಾಗಿದೆ. ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ ಅಗ್ರತಶ್ಯಿವರೂಪಾಯ ವೃಕ್ಷ ರಾಜಾಯತೇ ನಮಃ ಎಂಬ ಶ್ಲೋಕದ ಅರ್ಥದಂತೆ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯದ ನಿಯಾಮಕರಾದ ಬ್ರಹ್ಮ ವಿಷ್ಣು ಮಹೇಶ್ವರರು ವೃಕ್ಷರಾಜ ಅಶ್ವತ್ಥ ವೃಕ್ಷದಲ್ಲಿ ನೆಲಿಸಿದ್ದು, ದೈವದ ಸಾನ್ನಿಧ್ಯ ಇರುವುದರಿಂದ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಮನೋಭಿಲಾಶೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.