ಪಿತೃಗಳನ್ನು ಸ್ಮರಿಸುವುದು ಪಿತೃಪಕ್ಷದ ಮಹತ್ವ. ಹೆಸರೇ ಹೇಳುವಂತೆ ಒಂದು ಪಕ್ಷದ(15 ದಿನ) ಕಾಲ ಪಿತೃಗಳಿಗೆ ತರ್ಪಣ ನೀಡಿ ಗತಿಸಿದ ಪೂರ್ವಜರನ್ನು ಸ್ಮರಿಸಲಾಗುತ್ತದೆ.
ಈ ವರ್ಷ ಸೆ.05 ರಿಂದ ಪಿತೃಪಕ್ಷ ಪ್ರಾರಂಭವಾಗಿದ್ದು, 19 ವರೆಗೆ ನಡೆಯಲಿದೆ. ಈ ಪಕ್ಷದೊಂದಿಗೆ ಹಲವು ಪೌರಾಣಿಕ, ಐತಿಹಾಸಿಕ ವ್ಯಕ್ತಿಗಳೂ, ಘಟನೆಗಳೂ ನಂಟು ಹೊಂದಿದ್ದು, ಮಹಾಭಾರತದ ಕರ್ಣನ ಉಲ್ಲೇಖವೂ ಇದೆ.
ಕರ್ಣ ದಾನ ಮಾಡುವುದಕ್ಕಾಗಿಯೇ ಪ್ರಸಿದ್ಧಿ ಪಡೆದವನು. ಮಹಾಭಾರತದ ಯುದ್ಧದಲ್ಲಿ ಮೃತಪಟ್ಟ ಕರ್ಣನ ಆತ್ಮ ಸ್ವರ್ಗಕ್ಕೆ ಪ್ರವೇಶಿಸುತ್ತದೆ. ಅಲ್ಲಿ ಆತನಿಗೆ ಕೇವಲ ಚಿನ್ನ, ರತ್ನಗಳನ್ನು ಮಾತ್ರ ತಿನ್ನಲು ಆಹಾರವಾಗಿ ನೀಡಲಾಗುತ್ತದೆ. ತಿನ್ನಲು ಸಾಧ್ಯವಾಗದ್ದನ್ನು ಏಕೆ ಕೊಡಲಾಗಿದೆ ಎಂದು ಕರ್ಣ ಚಿಂತಿಸುತ್ತಾನೆ. ಇದೇ ಪ್ರಶ್ನೆಯನ್ನು ಇಂದ್ರನ ಮುಂದಿಡುತ್ತಾನೆ. ಅಷ್ಟೇ ಅಲ್ಲದೇ ಕೆಲವು ಪುರಾಣಗಳ ಪ್ರಕಾರ ಕರ್ಣ ಯಮನೊಂದಿಗೂ ಚರ್ಚೆ ನಡೆಸುತ್ತಾನೆ.
ಕರ್ಣನ ಪ್ರಶ್ನೆಗೆ ಉತ್ತರಿಸಿದ್ದ ಇಂದ್ರ " ನೀನು ಬದುಕಿದ್ದಾಗ ಚಿನ್ನಾಭರಣಗಳನ್ನು, ಬೆಲೆ ಬಾಳುವ ಮುತ್ತು-ರತ್ನಗಳನ್ನು ಮಾತ್ರ ದಾನ ಮಾಡಿದ್ದೆ. ಆದರೆ ಪಿತೃಗಳನ್ನು ಸ್ಮರಿಸಿರಲಿಲ್ಲ, ನೀನು ಏನನ್ನು ದಾನ ಮಾಡಿದ್ದೆಯೋ ಅದನ್ನೇ ಸ್ವರ್ಗದಲ್ಲಿ ನಿನಗೆ ಆಹಾರವಾಗಿ ನೀಡಲಾಗಿದೆ ಎಂದು ಹೇಳುತ್ತಾನೆ.
ಇಂದ್ರನಿಂದ ಉತ್ತರ ಸಿಕ್ಕ ಬಳಿಕ ಕರ್ಣ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ನಿಶ್ಚಯಿಸುತ್ತಾನೆ. ಅದಕ್ಕಾಗಿ ಇಂದ್ರನ ಸಹಾಯವನ್ನೂ ಕೇಳುತ್ತಾನೆ. ಪಿತೃಗಳನ್ನು ಸ್ಮರಿಸಲು ಕರ್ಣನಿಗೆ 15 ದಿನಗಳ ಕಾಲ ಮತ್ತೆ ಭೂಮಿಯಲ್ಲಿ ಜೀವ ನೀಡಲಾಗುತ್ತದೆ. ಅದೇ 15 ದಿನಗಳೇ ಈ ಪಿತೃಪಕ್ಷ ಎಂಬ ನಂಬಿಕೆ ಇದೆ.