ಮಹಾಭಾರತ, ಅದಕ್ಕಿಂತಲೂ ಮುನ್ನ ತಪಸ್ಸಿನಲ್ಲಿ ನಿರತರಾಗಿದ್ದ ನರ ನಾರಾಯಣರ ಕಾಲವೂ ಸೇರಿದಂತೆ ಅತ್ಯಂತ ಪುರಾತನ, ಧಾರ್ಮಿಕ, ತಪಸ್ಸಿನ ಹಿನ್ನೆಲೆ ಇರುವುದು ಕೇದಾರನಾಥ ದೇವಾಲಯವಿರುವ ಪ್ರದೇಶದ ವೈಶಿಷ್ಟ್ಯ. ಈ ಪ್ರದೇಶಕ್ಕಿರುವ ಪೌರಾಣಿಕ ಹಿನ್ನೆಲೆಗೂ ಕೊರತೆ ಇಲ್ಲ, ದುರ್ಗಮ ಹಾದಿಯಾದರೂ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಗಳಿಗೂ ಕೊರತೆ ಇಲ್ಲ. ಸಮುದ್ರ ಮಟ್ಟದಿಂದ ಸುಮಾರು 3584 ಮೀಟರ್ (11759 ಅಡಿ) ಗಳಷ್ಟು ಎತ್ತರದಲ್ಲಿ ಸುಂದರ ಪ್ರಕೃತಿಯನ್ನು ಹೊಂದಿರುವ ಕೇದಾರನಾಥ ದೇವಾಲಯ ಹಿಂದೂಗಳ ಛೋಟಾ ಚಾರ್ ಧಾಮ್ ಪ್ರದೇಶವೆಂದೂ ಖ್ಯಾತಿ ಪಡೆದಿದ್ದು ಮಂದಾಕಿನಿ ನದಿಯೂ ಹರಿಯುತ್ತಾಳೆ. ಅದೆಲ್ಲಾ ಇರಲಿ ನಮ್ಮ ದೇಶದಲ್ಲಿ ಪ್ರತಿ ಧಾರ್ಮಿಕ ಕ್ಷೇತ್ರಕ್ಕೆ ಹೆಸರು ಬರುವುದರ ಹಿಂದೆ ಒಂದು ಕಾರಣ, ಘಟನೆಗಳು ತಳುಕುಹಾಕಿಕೊಂಡಿರುತ್ತದೆ. ಇಲ್ಲಿಯೂ ಹಾಗೆಯೇ ಇದ್ದು, ಕೇದಾರನಾಥ ಪ್ರದೇಶಕ್ಕೆ ಬಂದ ಹೆಸರಿನ ಕಾರಣ ಹುಡುಕಿ ಹೊರಟರೆ ಅದು ನಿಮ್ಮನ್ನು ಸತ್ಯಯುಗಕ್ಕೆ ಕೊಂಡೊಯ್ಯುತ್ತದೆ. ಸತ್ಯ ಯುಗದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜ ಕೇದಾರನ ಗೌರವಾರ್ಥವಾಗಿ ಈ ಪ್ರದೇಶಕ್ಕೆ ಕೇದಾರನಾಥ ಎಂಬ ಹೆಸರು ಹಾಗೂ ದೇವಾಲಯದ ಸುತ್ತ ಇರುವ ಪ್ರದೇಶಕ್ಕೆ ರಾಜನ ಮಗಳಾದ ವೃಂದಾವನ್ ಎಂಬ ಬಂತೆಂದು ಹೇಳಲಾಗುತ್ತದೆ.