ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರ ಪಂಚಮಿಯ ಹಿನ್ನೆಲೆ ಮಹತ್ವ

ನಾಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಮಾತಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದಷ್ಟೇ ಅಲ್ಲದೇ ಹಬ್ಬಗಳಿಗೆ ಹೆಬ್ಬಾಗಿಲೆಂದರೂ ಅಡ್ಡಿ ಇಲ್ಲ.
ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರ ಪಂಚಮಿಯ ಹಿನ್ನೆಲೆ ಮಹತ್ವ
ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರ ಪಂಚಮಿಯ ಹಿನ್ನೆಲೆ ಮಹತ್ವ
ನಾಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಮಾತಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದಷ್ಟೇ ಅಲ್ಲದೇ ಹಬ್ಬಗಳಿಗೆ ಹೆಬ್ಬಾಗಿಲೆಂದರೂ ಅಡ್ಡಿ ಇಲ್ಲ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಪ್ರಾರಂಭವಾಗುವ ಮೊದಲ ಹಬ್ಬ ನಾಗರ ಪಂಚಮಿಯಾಗಿರುವುದರಿಂದ ಇದನ್ನು ಹಬ್ಬಗಳಿಗೆ ಮುನ್ನುಡಿ ಎನ್ನಲಾಗುತ್ತದೆ. 
ಹಿಂದೂ ಸಂಪ್ರದಾಯಗಳಲ್ಲಿ ಪ್ರತಿಯೊಂದು ಹಬ್ಬವೂ ಪ್ರಕೃತಿ- ಪ್ರಾಣಿಗಳೆಡೆಗೆ ಮಾನವನಿಗಿರುವ ಅತ್ಯಂತ ಶ್ರದ್ಧಾ ಭಕ್ತಿಗಳನ್ನು ಹೊಂದಿರುವಂತೆ ನಾಗರ ಪಂಚಮಿ ಹಬ್ಬವೂ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತದೆ. ನಾಗದೇವತೆಗಳನ್ನು ಆರಾಧಿಸುವ ನಾಗರಪಂಚಮಿಗೆ ವಿಶೇಷವಾದ ಪೌರಾಣಿಕ ಹಿನ್ನೆಲೆ ಇದೆ.
ಪೌರಾಣಿಕ ಹಿನ್ನೆಲೆ 
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು 'ಸರ್ಪಯಜ್ಞ'ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿ ಪ್ರಾಯಶ್ಚಿತ್ತಕ್ಕಾಗಿ ಮಹಾಭಾರತ ಕೇಳಲು ಶುರುಮಾಡಿದುದು ಶ್ರಾವಣ ಶುದ್ಧ ಪಂಚಮಿ ದಿನ. ನಾಗಪಂಚಮಿ ಎಂದು ಪ್ರಸಿದ್ಧವಾದ ಈ ದಿನ ಗೋಮಯದಿಂದ ಬಾಗಿಲು ಸಾರಿಸಿ, ಚಿತ್ರಗಳನ್ನು ಬರೆದು ನೇಮದಿಂದ ನಾಗನನ್ನು ಪೂಜಿಸಲಾಗುತ್ತದೆ. 
ಆಧ್ಯಾತ್ಮ-ನಾಗರ ಪಂಚಮಿ 
ಇನ್ನು ನಾಗದೇವತೆಯನ್ನು ಪ್ರಾಣಗಳಿಗೆ ಸಮೀಕರಣ ಮಾಡಿಕೊಂಡು ಆಧ್ಯಾತ್ಮ ಸಾಧನೆ ಮಾಡಲಾಗುತ್ತದೆ. ಸಾಧನಾ ಕ್ಷೇತ್ರದಲ್ಲಿ ಕುಂಡಲಿನಿ ಎನ್ನುವ ಪದ ಅತ್ಯಂತ ರೋಚಕ.  ಕುಂಡಲಿನಿಯ ಶಕ್ತಿ ಅತ್ಯಂತ ತೇಜಸ್ವಿಯಾದ ಮೂಲಶಕ್ತಿಯಾಗಿ ಮೂಲಾಧಾರದಲ್ಲಿ ಸುರುಳಿ ಸುತ್ತಿ ಮಲಗಿರುತ್ತದೆ ಎಂಬ ನಂಬಿಕೆ ಇದೆ. ಸರ್ಪ ಕುಂಡಿಲಿನಿ ಶಕ್ತಿಯ ಪ್ರತೀಕ. ಸರ್ಪದ ಮಂಡಲಾಕಾರ ಪೂರ್ಣವೃತ್ತ ಅಥವಾ ಶೂನ್ಯ. ಈ ಪೂರ್ಣದಲ್ಲಿ ಪೂರ್ಣವನ್ನು ಕಳೆದರೆ ಶೇಷವೂ ಪೂರ್ಣ. ಈ ಶೇಷನೇ ಆದಿಶೇಷನೆಂದು ಹೇಳುವರು. ಆದ್ದರಿಂದಲೇ ಅನಂತವೆಂಬ ಪೂರ್ಣವೃತ್ತದಲ್ಲಿ ಶೇಷಶಾಯಿ ವಿಷ್ಣುವಿರುವನು. ಅನಂತನೇ ಶೇಷ. ಶೇಷನೇ ಅನಂತ. ಸರ್ಪ ಸ್ವರೂಪದಲ್ಲಿರುವ ಸಚ್ಚಿದಾನಂದ ಸ್ವರೂಪವನ್ನು ಕುಂಡಲಿನಿ ಶಕ್ತಿಯಿಂದ ಜಾಗೃತಗೊಳಿಸಿ ಆರಾಧಿಸಿ ತಿಳಿಯಿರಿ ಎಂಬ ಸಾಂಕೇತಿಕ ದಿವ್ಯ ಸಂದೇಶ ನಾಗಾರಾಧನೆಯಿಂದ ನಮಗೆ ಸಿಗುತ್ತದೆ.
ಇನ್ನು ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು, ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಸದ್ವಿನಿಯೋಗವಾಗಲಿ ಎಂಬ ಆಶಯವೂ ನಾಗರಪಂಚಮಿ ಹಬ್ಬದ ಆಚರಣೆಯಲ್ಲಿ ಇದೆ. 
ನಾಗರ ಪಂಚಮಿ ಅಣ್ಣ-ತಂಗಿ
ನಾಗರ ಪಂಚಮಿ ಅಣ್ಣ - ತಂಗಿಯರ ಹಬ್ಬವೆಂದೇ ಹೆಚ್ಚು ಪ್ರಸಿದ್ಧಿ. ನಾಗರಪಂಚಮಿಯಂದು ಸೋದರ - ಸೋದರಿಯರು ಸಂವೃದ್ಧಿಯಿಂದ ಇರಲಿ ಎಂದು ಪ್ರಾರ್ಥಿಸಿ ಹುತ್ತಕ್ಕೆ ಎರೆದ ಹಾಲನ್ನು ಸಹೋದರರ ಬೆನ್ನಿಗೆ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಈ ಕಾರಣದಿಂದ ನಾಗರಪಂಚಮಿಯನ್ನು ಅಣ್ಣ-ತಂಗಿ ಹಬ್ಬವೆಂದೂ ಕರೆಯಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com