ವಿದ್ಯಾರಣ್ಯರು ವೇದಶಾಸ್ತ್ರಗಳಲ್ಲಿ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದರು. ಅವರ ಹೆಸರೇ ಸೂಚಿಸುವಂತೆ ವಿದ್ಯೆಯ ಅರಣ್ಯವೇ ಆಗಿದ್ದ ಆ ಮಹನೀಯರು ಅನೇಕ ಗ್ರಂಥಗಳನ್ನು ರಚಿಸಿದ್ದರು. ಸಂನ್ಯಾಸಸ್ವೀಕರಿಸುವುದಕ್ಕಿಂತ ಮೊದಲು ಶಂಕರದಿಗ್ವಿಜಯ, ಜೈಮಿನೀಯ ನ್ಯಾಯಮಾಲಾ, ಪರಾಶರ ಮಾಧವೀಯ ಮೊದಲಾದ ಗ್ರಂಥಗಳನ್ನೂ, ಸಂನ್ಯಾಸಸ್ವೀಕಾರದ ನಂತರ ಜೀವನ್ಮುಕ್ತಿವಿವೇಕ, ಪಂಚದಶೀ, ವಿವರಣ ಪ್ರಮೇಯಸಂಗ್ರಹ, ದೃಗ್ದೃಶ್ಯವಿವೇಕ, ಬೃಹದಾರಣ್ಯಕ ವಾರ್ತಿಕಸಾರ, ಅನುಭೂತಿ ಪ್ರಕಾಶ ಇತ್ಯಾದಿ ಅನೇಕ ಗ್ರಂಥಗಳನ್ನೂ ರಚಿಸಿದರು. ಈ ಗ್ರಂಥಗಳ ರಚನೆಯಲ್ಲಿ ಅವರು ತೋರ್ಪಡಿಸಿದ ವೈದುಷ್ಯವನ್ನು ಕಂಡ ಪ್ರತಿಯೊಬ್ಬರೂ ಅವರಿಗೆ ತಲೆಬಾಗಲೇಬೇಕು. ಎಂತಹ ಗಹನವಾದ ವಿಷಯವನ್ನಾದರೂ ಸರಳವಾಗಿ ಪ್ರತಿಪಾದಿಸುವ ಅವರ ಸಾಮರ್ಥ್ಯ ಅನಿತರ ಸಾಧಾರಣವಾದದ್ದು.